ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಮೀಪದ ಅರ್ಜುಣಗಿ ಕೆಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಫ್ಎಲ್ಎನ್ (Foundational Literacy and Numeracy) ಕಲಿಕಾ ಹಬ್ಬ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಕಾರ್ಯಕ್ರಮವನ್ನು ಪಾವನ ಸಾನಿಧ್ಯ ಗೋಳಸಾರದ ಪೂಜ್ಯ ಅಭಿನವ ಪುಂಡಲಿಂಗ ಶಿವಯೋಗಿಗಳು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆಲಮೇಲದ ಆರೂಢ ಮಠದ ಪೂಜ್ಯ ಬಸವಲಿಂಗ ಶರಣರು ಮಾತನಾಡಿ, “ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ವೃತ್ತಿಯಾಗಿದೆ. ಅನ್ಯ ಕ್ಷೇತ್ರೆ ಕೃತಂ ಪಾಪಂ ಪುಣ್ಯ ಕ್ಷೇತ್ರ ವಿನಶ್ಯತಿ, ಪುಣ್ಯ ಕ್ಷೇತ್ರ ಕೃತಂ ಪಾಪ ವಜ್ರಲೇಪಿ ಭವಿಷ್ಯತಿ ಎಂಬ ವಾಕ್ಯ ಶಿಕ್ಷಕರ ಜವಾಬ್ದಾರಿಯನ್ನು ಸೂಚಿಸುತ್ತದೆ. ಶಿಕ್ಷಕರು–ಪಾಲಕರು–ಮಕ್ಕಳು ಎಂಬ ತ್ರಿವೇಣಿ ಸಂಗಮ ಸದೃಢವಾಗಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸುರೇಶ್ ಪ್ಯಾಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿ ಆರ್ ಪಿ ಫರ್ವೇಜ್ ಪಟೇಲ್, ಬಿಆರ್ಪಿ ಕುಲಕರ್ಣಿ ಸರ್, ಪ್ರೌಢಶಾಲೆಯ ಮುಖ್ಯಗುರು ವಿನೋದ ದೊಡ್ಡಗಾಣಿಗೇರೆ, ಡಿ ಬಿ ಕುಂಬಾರ ಹಾಗೂ ಯುವ ನಾಯಕ ಮಂಜುನಾಥ ಕಾಮಗೊಂಡ ಉಪಸ್ಥಿತರಿದ್ದರು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬ್ಯಾಗುಗಳನ್ನು ವಿತರಿಸಲಾಯಿತು.
ಸುಮಾರು 14 ಶಾಲೆಗಳ ಮಕ್ಕಳು ಈ ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಕಂಪಾಸ್, ಪೆನ್ನು, ನೋಟ್ಬುಕ್ ಹಾಗೂ ಪ್ಯಾಡ್ಗಳನ್ನು ವಿತರಿಸಲಾಯಿತು.
ಇದನ್ನೂ ಓದಿ: ವಿಜಯಪುರ | ವೃತ್ತಿಪರ ಬದುಕಿನಲ್ಲಿ ಕೌಶಲ್ಯಗಳ ಪಾತ್ರ ಮಹತ್ವದ್ದು: ಡಾ. ಹಾಜರಾ ಪರ್ವೀನ್
ಇದೇ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಸಿ ಎನ್ ಮಿಂಚನಾಳ ಅವರಿಗೆ 5 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾದ 5 ಶಿಕ್ಷಕರಿಗೆ ಬಿಳ್ಕೋಡಲಾಗಿದ್ದು, ಶಿಕ್ಷಕರತ್ನ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈರಣ್ಣ ತಳವಾರ, ರೇಷ್ಮಾ ಪವಾರ ಸೇರಿದಂತೆ 70ಕ್ಕೂ ಹೆಚ್ಚು ಶಿಕ್ಷಕರು ಹಾಗೂ 400ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯುಬಿಎಸ್ ಶಾಲೆಯಿಂದ ಕನ್ನಡ ಗಂಡು ಮಕ್ಕಳ ಶಾಲೆ ಮೂಲಕ ಅರ್ಜುಣಗಿ ಕೆಡಿ ಶಾಲೆಯವರೆಗೆ ಮೆರವಣಿಗೆ ನಡೆಯಿತು. ರಾಣಿ ಚನ್ನಮ್ಮ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ ಸೇರಿದಂತೆ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಣೆ ಮಾಡಿದ ಮಕ್ಕಳು ಮೆರವಣಿಗೆಯಲ್ಲಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಪಂಡಿತ ಅವಜಿ ಮುಗು ಸ್ವಾಗತಿಸಿ, ನಿರೂಪಣೆ ನಡೆಸಿದರು. ರೇಷ್ಮಾ ಪವಾರ ಗುರುಮಾತೆ ವಂದಿಸಿದರು.





