ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಅಂತಹ ಸುಂದರವಾದ ಬದಕನ್ನು ವ್ಯರ್ಥಮಾಡಿಕೊಳ್ಳದೆ ಸದಾ ಶಿಕ್ಷಣದಲ್ಲಿ ತನ್ಮಯರಾಗಬೇಕು. ಡಾ. ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರು ಪುಸ್ತಕದ ಪೂಜಾರಿಗೆಳಾಗುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ವಿಜಯಪುರ ಜಿಲ್ಲಾ ಉಪ ನಿರ್ದೇಶಕ ಮಹೇಶ ಪೂತಾರ ಹೇಳಿದರು.
ಜಿಲ್ಲೆಯ ಇಂಡಿ ತಾಲೂಕಿನ ಡಾ. ಬಿ ಆರ್ ಅಂಬೇಡ್ಕರ ವಿದ್ಯಾರ್ಥಿಗಳ ವಸತಿ ನಿಲಯದ ಗ್ರಂಥಾಲಯವನ್ನು ಉದ್ವಾಟಿಸಿ ಮಾತನಾಡಿದ ಅವರು, “ಡಾ. ಬಾಬಾಸಾಹೇಬರು ತಿನ್ನಲು ಅನ್ನವಿಲ್ಲದಿದ್ದರೂ ಪುಸ್ತಕ ಪ್ರೇಮಿಯಾಗಿದ್ದರು. ಗುಡಿಯ ಮುಂದೆ ಸಾಲು ಗಟ್ಟಿ ನಿಲ್ಲುವುದಕ್ಕಿಂತ ಗ್ರಂಥಾಲಯದ ಮುಂದೆ ನಿಲ್ಲಬೇಕು ಎಂಬ ಸಂದೇಶ ಅವರದಾಗಿತ್ತು. ಸರಕಾರಗಳು ಶೈಕ್ಷಣಿಕ ಗುಣಮಟ್ಟ ಉತ್ತೇಜಿಸಲು ಸರ್ವವಿಧದಲ್ಲಿ ಸಹಾಯ ಮಾಡುತ್ತಿವೆ. ಇದರ ಲಾಭ ಪಡೆದುಕೊಳ್ಳಬೇಕು. ಸಾಧನೆಗೆ ಬಡತನ ಅಡ್ಡಬರದು. ಸಮಯಕ್ಕೆ ಮಹತ್ವ ನೀಡಿ ಸಾಧಿಸಿ ತೋರಿಸಬೇಕು. ದೇಶ ನನಗೇನು ಮಾಡಿತು ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವುದನ್ನು ಚಿಂತಿಸಬೇಕು” ಎಂದರು.
ರಮಾಬಾಯಿ ಪ್ರೌಢ ಶಾಲೆಯ ಮುಖ್ಯಗುರು ನಿಜಣ್ಣಾ ಕಾಳೆ ಮಾತನಾಡಿ, “ಹಿಂದಿನಂತೆ ಇಂದು ಶಿಕ್ಷಣ ಕಲಿಯುವುದು ಕಷ್ಟದ ಕೆಲಸವಲ್ಲ. ಸರಕಾರ ಪ್ರತಿಯೊಂದು ಹಂತದಲ್ಲಿ ಸಹಕಾರ ನೀಡುತ್ತಿದೆ. ನಾವು ಕಲಿಯುವಾಗ ಇಷ್ಟೊಂದು ಅನುಕೂಲವಿಲ್ಲದಿದ್ದರೂ ಒಂದು ಸ್ಥಾನ ಪಡೆದುಕೊಂಡಿದ್ದೇವೆ. ಇದಕ್ಕೆಲ್ಲ ಅಂಬೇಡ್ಕರ್ ನೀಡಿದ ಸಂವಿಧಾನದ ಕೊಡುಗೆ ಅಪಾರ. ಸತ್ತ ಮೇಲೆ ಬದುಕಬೇಕು ಎಂದರೆ ಜನ ಓದುವ ಹಾಗೆ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ ನಿಮ್ಮ ಬಗ್ಗೆ ಬೇರೆಯವರು ಬರೆಯುವ ಹಾಗೆ ಮಾಡಿ ಹೋಗಿ ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಬುದ್ಧ, ಬಸವ, ಅಂಬೇಡ್ಕರ್ ತತ್ವದಡಿ ನಡೆಯಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಕನ್ನೇರಿ ಶ್ರೀ ವಿರುದ್ಧ ಕಠಿಣ ಕ್ರಮಕ್ಕೆ ದಸಂಸ ಆಗ್ರಹ
ದಲಿತ ಯುವ ಮುಖಂಡ ಬಾಬು ಗುಡಮಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ವಿಕಾಸ ಹೊಸಮನಿ, ನಿಲಯ ಪಾಲಕ ಪುಂಡಲೀಕ ಗೊಂದಳಿಸೇರಿದಂತೆ ವಿದ್ಯಾರ್ಥಿಗಳು ನೀಲಯ ಪಾಲಕರು ಇದ್ದರು.





