ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೈಟೆಕ್ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯವಿಲ್ಲದೆ ಸೊರಗಿ ಹೋಗಿದೆ. ಇದರ ಮಧ್ಯೆ ನಿತ್ಯವೂ ಜನಜಂಗುಳಿಯಿಂದ ಕೂಡಿರುವ ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಅಭದ್ರತೆ ಕಾಡುತ್ತಿದೆ.
ಸಾರಿಗೆ ಇಲಾಖೆಗೆ ಅತಿಹೆಚ್ಚು ಆದಾಯ ನೀಡುವ ಸಿಂದಗಿ ಡೀಪೋದಿಂದ ನಿತ್ಯ 112 ಮಾರ್ಗಗಳಲ್ಲಿ ಬಸ್ಗಳು ಸಂಚರಿಸುತ್ತವೆ. ರಾಜ್ಯ, ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಸಂಚರಿಸುವ ಬಸ್ಸುಗಳು ಬಂದು, ಹೋಗುತ್ತವೆ. ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಆದರೆ, ಮೂಲ ಸೌಲಭ್ಯಗಳ ವ್ಯವಸ್ಥೆ ಇಲ್ಲದಿರುವುದರಿಂದ ಪರದಾಡುವಂತಾಗಿದೆ.
ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಉಗುಳಿದ ಗುಟ್ಕಾ ಕಲೆಗಳು ಪ್ರಯಾಣಿಕರಲ್ಲಿ ಹೇಸಿಗೆ ಹುಟ್ಟಿಸುತ್ತಿದೆ, ಗಬ್ಬೆದ್ದು ನಾರುತ್ತಿರುವ ಶೌಚಾಲಯದ ದುರ್ವಾಸನೆಗೆ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಜನರು ನಿಲ್ದಾಣದ ಕಾಂಪೌಂಡ್ ಗೋಡೆಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

“ಸರಿಯಾದ ಆಸನಗಳ ವ್ಯವಸ್ಥೆ ಇಲ್ಲ. ಪ್ರಯಾಣಿಸುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನಿಂತುಕೊಂಡೇ ತಮ್ಮೂರಿನ ಬಸ್ ಬರುವಿಕೆಗಾಗಿ ಕಾಯುವಂತಹ ದುಃಸ್ಥಿತಿ ಎದುರಾಗಿದೆ. ನಿತ್ಯ ಜನ ಜಂಗುಳಿಯಿಂದ ಕೂಡಿರುವ ಈ ನಿಲ್ದಾಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಹಾಗಾಗಿ ಕೂಡಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು” ಎನ್ನುತ್ತಾರೆ ಪ್ರಯಾಣಿಕರು.
“ದ್ವಿಚಕ್ರ ವಾಹನದ ಶುಲ್ಕ ಸಹಿತ ನಿಲುಗಡೆ ಶುರುವಾಗದೆ ದಶಕಗಳೇ ಕಳೆಯಿತು. ಒಂದು ಬಾರಿಯೂ ಟೆಂಡರ್ ಬೋರ್ಡ್ ಕಾಣಿಸಲಿಲ್ಲ. ಬೈಕ್ ನಿಲ್ಲಿಸುವ ಸವಾರರ ಬಳಿ ₹200 ವಸೂಲಿ ಮಾಡುವ ಟೆಂಡರ್ದಾರರು ಚೀಟಿ ನೀಡಿ, ಅದರ ಮೇಲೆ ಕೆಎಸ್ಆರ್ಟಿಸಿ ಸೀಲ್ ಹಾಕಿ ಕೊಡುತ್ತಾರೆ. ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ” ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.

“ದೂರದ ಊರಿನಿಂದ ಬರುವ ಪ್ರಯಾಣಿಕರಿಗೆ ರಾತ್ರಿ ತಂಗಲು ಯಾತ್ರಾ ನಿವಾಸದ ಸೌಲಭ್ಯ ಇಲ್ಲದಂತಾಗಿದೆ. ಕಟ್ಟಡವು ಹೆಸರಿಗೆ ಮಾತ್ರವಿದ್ದು, ಜನರಿಗೆ ಉಪಯೋಗವಾಗುತ್ತಿಲ್ಲ. ಹಲವಾರು ವರ್ಷಗಳಿಂದ ರೂಮುಗಳು ಪಾಳು ಬಿದ್ದಿವೆ. ಗೇಟ್ಗೆ ಬೀಗ ಜಡಿಯಲಾಗಿದೆ. ಕಳೆದ ತಿಂಗಳು ಜರುಗಿದ ಗ್ಯಾರಂಟಿ ಸಭೆಯಲ್ಲಿ ಕೆಎಸ್ಆರ್ಟಿಸಿ ಲಾಭದಲ್ಲಿರುವುದಾಗಿ ನಿರ್ವಾಹಕ ಅಧಿಕಾರಿ ಎಸ್ ಬಿ ನಾಗಾವಿ ಹೇಳಿದ್ದರು. ಆದಾಯದಲ್ಲಿ ಮುಂದೆ ಇರುವ ಸಿಂದಗಿ ಘಟಕ ಹಿಂದೆ ಬಿದ್ದಿರುವುದೇಕೆ” ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

“ಗ್ರಾಮೀಣ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ಗಳು ಬರುವುದಿಲ್ಲ. ಕೇಳಿದರೆ ಬಸ್ ಕೆಟ್ಟಿವೆ ಎಂಬ ಸಬೂಬ್ ಹೇಳುತ್ತಾರೆ. ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಭದ್ರತೆ ಇಲ್ಲ. ಮಹಿಳಾ ವಿಶ್ರಾಂತಿ ಕೊಠಡಿ ಇಲ್ಲ, ಸರಿಯಾದ ವ್ಯವಸ್ಥೆಯೂ ಇಲ್ಲ. ನಿಲ್ದಾಣದಲ್ಲಿ ಪಡ್ಡೆ ಹುಡುಗರ ಹಾವಳಿ ಹೆಚ್ಚಾಗಿದೆ” ಎಂದು ಯುವಜನ ಸಂಘಟನೆಯ ಜಿಲ್ಲಾಧ್ಯಕ್ಷ ರಮೇಶ ತಳವಾರ ಆರೋಪಿಸಿದರು.
ಇದನ್ನೂ ಓದಿದ್ದೀರಾ? ವಿಜಯನಗರ | ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಾಹ್ನವಿ ನೇಮಕ
“ಬಸ್ ನಿಲ್ದಾಣದಲ್ಲಿ ಹೆಚ್ಚಿ ಆಸನಗಳ ಅಳವಡಿಕೆ ಹಾಗೂ ಸಿಸಿಟಿವಿ ಅಳವಡಿಕೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಯಾತ್ರಾ ನಿವಾಸ ಟೆಂಡರ್ ಆಗಿದ್ದು, ಆರಂಭಿಸಲು ಸೂಚನೆ ನೀಡಲಾಗಿದೆ. ಬಸ್ ನಿಲ್ದಾಣದಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುವುದು” ಎಂದು ಸಿಂದಗಿ ಘಟಕದ ಮ್ಯಾನೇಜರ್ ವಿಠ್ಠಲ ನಡುವಿನ ಅವರು ಪ್ರತಕ್ರಿಯಿಸಿದ್ದಾರೆ.
ಇನ್ನಾದರೂ ಜನ ಪ್ರತಿನಿದಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.





