- ಶೃತಿ ಸಂಸ್ಕೃತಿ ಸಂಸ್ಥೆಯಿಂದ ಹೆಣ್ಣು ಮಕ್ಕಳ ಶಿಕ್ಷಣ ಸವಾಲು ಸಮಾಲೋಚನಾ ಕಾರ್ಯಾಗಾರ
- ಮಕ್ಕಳು ಮತ್ತು ಮಹಿಳೆಯರ ಬಲವರ್ಧನೆಗೆ ಕಾರ್ಯಾಗಾರ ಅನುಕೂಲಕರ
ಮಕ್ಕಳು ಮತ್ತು ಮಹಿಳೆಯರ ಬಲವರ್ಧನೆಗೆ ಕಾರ್ಯಾಗಾರಗಳು ಅನುಕೂಲವಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಸಂಖ್ಯೆ ಹೆಚ್ಚುತ್ತಿರುವುದು ಆತಂಕವನ್ನುಂಟು ಮಾಡಿದೆ ಎಂದು ಸಮಗ್ರ ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಆರ್.ಇಂದಿರಾ ಕಳವಳ ವ್ಯಕ್ತಪಡಿಸಿದರು.
ನಗರದ ಕ್ರೈಸ್ತ ಸಂಸ್ಥೆ ಹಾಗೂ ಶೃತಿ ಸಂಸ್ಕೃತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ʼಹದಿಹರಿಯದ ಹೆಣ್ಣು ಮಕ್ಕಳ ಶಿಕ್ಷಣ ಸವಾಲುಗಳುʼ ಕುರಿತು ಒಂದು ದಿನದ ಸಮಾಲೋಚನೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, “ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ತಡೆಗಟ್ಟಬೇಕು, ಹೆಣ್ಣು ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸುವ ಮೂಲಕ ಅವರ ಜೀವನಕ್ಕೆ ಉತ್ತಮ ಅಡಿಪಾಯ ಹಾಕಬೇಕು. ಪೋಷಕರು ತಮ್ಮ ಮಕ್ಕಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕಳಿಸಿದರಷ್ಟೇ ಸಾಲದು. ಅವರ ಮುಂದಿನ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸುವಂತಹ ಕಾರ್ಯ ಮಾಡಬೇಕೆಂದು” ತಿಳಿಸಿದರು.
“ಕೇವಲ ಹೆಣ್ಣು ಮಕ್ಕಳ ಶಿಕ್ಷಣ ಅಂದರೆ ಶಿಕ್ಷಣ ಇಲಾಖೆಗೆ ಮಾತ್ರ ಆ ಜವಾಬ್ದಾರಿ ಸೀಮಿತವಲ್ಲ. ಉಳಿದ 56 ಇಲಾಖೆಗಳು ಸಹ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿಚ್ಛೇದನ ಪ್ರಕರಣ; ರಾಜಿ ಸಂಧಾನದಿಂದ ಎಂಟು ಜೋಡಿಗಳ ಮರುಮದುವೆ
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರಬಾಬು ಮಾತನಾಡಿದರು.
ಅಂಬಣ್ಣ ಆರೋಲಿಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞ ಡಾ. ವಿ.ಪಿ.ನಿರಂಜನ್ ಆರಾಧ್ಯ, ಪ್ರೌಢಶಾಲಾ ತಾಲೂಕು ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ, ಮೈನುಲ್ ಹಕ್. ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮಹೆಶ್ ನಾಯಕ್, ಬಾಲ ಕಾರ್ಮಿಕ ಯೋಜನೆ ಜಿಲ್ಲಾ ಯೋಜನಾಧಿಕಾರಿ ಮಂಜುನಾಥ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





