16ನೇ ಶತವಾನದಲ್ಲಿ ಅವತರಿಸಿದ ಕನಕದಾಸರು ಸಮಾಜ ಸುಧಾರಣೆಗೆ ಶ್ರಮಿಸಿದರು. ಅವರ ಅನೇಕ ಕೃತಿಗಳಲ್ಲಿ ಸಮಾಜದ ಓರೇ ಕೋರೆಗಳನ್ನು ತಿದ್ದುವ, ಸಾಮಾನ್ಯರೂ ಉತ್ತಮರಾಗಿ ಬದುಕುವ ಸಂದೇಶ ಸಾರಿದರು. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಕನಕದಾಸರು ಹರಿದಾಸ ಪರಂಪರೆಯಲ್ಲಿ ಸರ್ವಶ್ರೇಷ್ಠರಾಗಿದ್ದರು. ಅವರ ʼಮೋಹನ ತರಂಗಿಣಿʼ ಸೇರಿದಂತೆ ಮೊದಲಾದ ಕೃತಿಗಳಲ್ಲಿ ಭಕ್ತಿ ಪ್ರಧಾನ ಮಾರ್ಗ ತಿಳಿಸಿಕೊಟ್ಟಿದ್ದಾರೆ. ಆಗಿನ ಕಾಲದಲ್ಲಿ ಅತ್ಯಂತ ಶ್ರೀಮಂತ ಹಾಗೂ ನಾಯಕರಾಗಿದ್ದ ಅವರು ದೇವರನ್ನು ಒಲಿಸಿಕೊಂಡು ಇಹಲೋಕದ ಐಶ್ವರ್ಯಕ್ಕಿಂತ ದೇವರ ಭಕ್ತಿ, ಧ್ಯಾನವೇ ದೊಡ್ಡದು ಎಂಬುದನ್ನು ತೋರಿಸಿಕೊಟ್ಟರು. ಸಮಾಜದಲ್ಲಿನ ಅಂಕು ಡೊಂಕು ತಿದ್ದಲು ಪ್ರಯತ್ನಿಸಿದರು. ಕುಲ-ಕುಲವೆಂದು ಬಡಿದಾಡದಿರಿ ಎಂದು ಎಚ್ಚರಿಸಿದರು” ಎಂದು ಹೇಳಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, “ಜಾತಿವಾದವನ್ನು 16ನೇ ಶತಮಾನದಲ್ಲಿ ವಿರೋಧಿಸಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕನಕದಾಸರು ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ” ಎಂದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, “ಕನಕದಾಸರು ತತ್ವಜ್ಞಾನಿಗಳು, ವಿಜ್ಞಾನಿಗಳು, ಸಮಾಜ ಸುಧಾರಕರು, ಸರ್ವಶ್ರೇಷ್ಠವಾದ ಭಕ್ತಿ ಮಾರ್ಗ ತೋರಿಸಿದವರು. ಅವರ ಗೌರವಾರ್ಥವಾಗಿ ನಗರದ ಎಸ್ಆರ್ಎ ಕ್ಲಬ್ನ ರಸ್ತೆಯಲ್ಲಿ ಕನಕದಾಸರ ವೃತ್ತ ನಿರ್ಮಿಸಲಾಗುವುದು” ಎಂದು ಭರವಸೆ ನೀಡಿದರು.
ಸಮಾಜದ ಮುಖಂಡ ಮಲ್ಲು ಮೇಳಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಶ್ರೀಶೈಲ ದಳವಾಯಿ, ಅರ್ಜುನ ದಳವಾಯಿ, ಸಂಗಮೇಶ ದಳವಾಯಿ, ನಾಗಪ್ಪ ಸನದಿ, ಶಾಮರಾವ ಘಾಟಗೆ, ನಗರಸಭೆ ಸದಸ್ಯ ಪರಮಾನಂದ ಗೌರೋಜಿ, ಪೌರಾಯುಕ್ತ ಜ್ಯೋತಿ ಗಿರೀಶ, ಬಸವರಾಜ ಸಿಂಧೂರ, ತಾಪಂ ಇಒ ಸಚಿನ ಮಾಚಕನೂರು, ತಹಶೀಲ್ದಾರ್ ಅನೀಲ ಬಡಗೇರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮುಖಂಡರು ಭಾಗವಹಿಸಿದ್ದರು.





