ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ ಭ್ರಷ್ಟಾಚಾರ ನಡೆಸಿರುವುದರ ಬಗ್ಗೆ ಆರೋಪಿಸಿ ದೂರು ನೀಡಿದೆ.
ಜಿಲ್ಲಾಧಿಕಾರಿಯವರು ಇದುವರೆಗೆ ಯಾವುದೇ ಕ್ರಮಕೈಗೊಳ್ಳದೆ ರಾಜಕೀಯ ಬಲದಿಂದ ಹಗರಣ ಮುಚ್ಚಾಕಲು ಯತ್ನ ನಡೆಸುತ್ತಿದ್ದು, ಸಂಬಂಧಪಟ್ಟ ದೂರನ್ನು ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ನೇರವಾಗಿ ಸಲ್ಲಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಜಾರಕಿಹೊಳಿ ಬ್ರಿಗೇಡ್ ಅಧ್ಯಕ್ಷ ಗೋವಿಂದನಾಯಕ ಮಾಹಿತಿ ನೀಡಿರುತ್ತಾರೆ.
ಅಂಗನವಾಡಿ ಕೇಂದ್ರಗಳಿಗೆ ಪೂರೈಸುವ ಮೊಟ್ಟೆ, ಮತ್ತಿತರ ಆಹಾರ ಪದಾರ್ಥಗಳನ್ನು ಕಡಿಮೆ ಪ್ರಮಾಣದಲ್ಲಿ ಒದಗಿಸಿ ಭ್ರಷ್ಟಾಚಾರ ನಡೆಸಿದ್ದು, ಹಾಲು ಪೌಡರ್, ಪುಷ್ಠಿ ಪೌಷ್ಠಿಕ ಆಹಾರ ಕೆ.ಜಿ ಗೆ ₹120 ರೂಪಾಯಿಯಂತೆ ಮಾರಿಕೊಳ್ಳುತ್ತಿದ್ದಾರೆ, ಭಾಗ್ಯಲಕ್ಷ್ಮೀ ಬಾಂಡ್ ಪಡೆಯಲು ಲಂಚ ನೀಡಬೇಕು, ವಿಮೆ ಮಾಡಿಸುವ ನೆಪದಲ್ಲಿ ಲಂಚ, ಇದಕ್ಕೆಲ್ಲಾ ಸಾಕ್ಷಿ ಇದ್ದು ಜಿಲ್ಲಾಧಿಕಾರಿಗಳು ಮತ್ತು ಡಿಡಿಪಿಐ ಕ್ರಮಕೈಗೊಳ್ಳುತಿಲ್ಲ. ಭ್ರಷ್ಟಚಾರದ ಬಗ್ಗೆ ದಾಖಲೆಗಳನ್ನು ನೀಡಿದ್ದರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಭ್ರಷ್ಟಾಚಾರ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಯವರಿಗೆ ದೂರು ನೀಡಿದಕ್ಕೆ ಸಿಡಿಪಿಒರವರು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷರಾದ ಗುರುಮಲ್ಲಮ್ಮ ಎಂಬುವವರಿಂದ ಸುಳ್ಳು ಆರೋಪ ಹೊರಿಸಿ, ನಮ್ಮಗಳ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನಮ್ಮ ಬಳಿ ಭ್ರಷ್ಟಾಚಾರ ಕುರಿತಾದ ದಾಖಲೆಗಳಿವೆ, ಆಡಿಯೋ ರೆಕಾರ್ಡ್ ಇದೆ, ದಾಖಲೆ ಸಮೇತವೇ ದೂರು ನೀಡಿರುವುದಾಗಿ ವಿವರಣೆ ನೀಡಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ದಿಲೀಪ್ ಹಂಗಳ ಮಾತನಾಡಿ, ತಾಲ್ಲೂಕಿನಲ್ಲಿ ಲಂಚ ತಾಂಡವಾಡುತ್ತಿದ್ದು ಕಂದಾಯ ಇಲಾಖೆಯಲ್ಲಿ ಖಾತೆ ಬದಲಾವಣೆಗೆ ವಿಎ ಮಾಡುವುದಾದರೆ ₹30 ಸಾವಿರ, ಕಂದಾಯ ನಿರೀಕ್ಷಕರ ಬಳಿ ಹೋದರೆ ಒಂದು ಲಕ್ಷ ಲಂಚ, ಅಂಗನವಾಡಿಯಲ್ಲಿ ಎರಡು ಮಕ್ಕಳಿದ್ದರೆ ಅಡಿಗೆ ಮಾಡದೆ ಚಾಕಲೇಟ್ ಕೊಟ್ಟು ಕಳುಹಿಸುತ್ತಾರೆ. ಅದರ ರೇಷನ್ ಹಣ ದುರುಪಯೋಗ ಮಾಡಿದ್ದಾರೆ, ಇದಕ್ಕೆ ಪೂರಕವಾದ ದಾಖಲೆ ಬಿಡುಗಡೆ ಮಾಡಿದ್ದೇವೆ ಅದರೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಭ್ರಷ್ಟರಿಗೆ ತಾಲ್ಲೂಕು ಆಡಳಿತ ಬೆಂಬಲ ನೀಡುತ್ತಿದ್ದು ಇದರ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದರು.
ವಕೀಲರಾದ ಸಿದ್ದೇಶ್ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ಜನನ ಮರಣ ಪತ್ರ ಪಡೆಯಲು ಐದು ಸಾವಿರವರೆಗೂ ಲಂಚ ಕೇಳುತ್ತಾರೆ. ತಾಲೂಕಿನ ಸಿಡಿಪಿಒ ಇಲಾಖೆ ಅಧಿಕಾರಿ ಬಾಗ್ಯಲಕ್ಷ್ಮಿ ಹಣ ಪಡೆಯಲು ಯಾವ ದಾಖಲೆ ಬೇಡ ಐದು ಸಾವಿರ ಕೊಡಿ ಸಾಕು ಎಂದು ಹೇಳುತ್ತಾರೆ ಎಂದರೆ ಆಡಳಿತ ವ್ಯವಸ್ಥೆ ಹೇಗಿದೆ, ಭ್ರಷ್ಟಚಾರ ಎಷ್ಟು ರಾಜಾರೋಷವಾಗಿ ನಡೆಯುತ್ತಿದೆ ಇಂತವರ ವಿರುದ್ದ ಸರ್ಕಾರದ ಕ್ರಮ ಯಾವಾಗ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಕೇರಳ ತನ್ನ ವೈಭವದ ದಿನಗಳಿಗೆ ಮರಳಬೇಕಾದರೆ ಯುಡಿಎಫ್ ಅಧಿಕಾರಕ್ಕೆ ಬರಬೇಕು: ಸಚಿವ ಕೃಷ್ಣಬೈರೇಗೌಡ
ಪತ್ರಿಕಾಗೋಷ್ಠಿಯಲ್ಲಿ ಶಿವಮಲ್ಲು ಹೊನ್ನೇಗೌಡನಹಳ್ಳಿ, ರಮೇಶ್ ನಾಯಕ್, ವೇಣು, ಗಿರೀಶ್ , ಮಂಜುನಾಥ್, ರವಿ ಇದ್ದರು.





