ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಪ್ರದೇಶದ ಕಡಲತೀರದಲ್ಲಿರುವ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಡಿಸೆಂಬರ್ 23ರಂದು ಸಂಜೆ 5.30ಕ್ಕೆ ನಡೆಯಲು ನಿರ್ಧರಿಸಲಾದ “ನಿಜ ಮಹಾತ್ಮ ಬಾಬಾ ಸಾಹೇಬ್” ನಾಟಕ ಪ್ರದರ್ಶನಕ್ಕೆ ದಸಂಸ ಜಿಲ್ಲಾ ನಾಯಕ ಜಯನ್ ಮಲ್ಪೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾವರ್ಕರ್ ದೇಶ ಪ್ರೇಮಿಗಳ ಬಳಗದ ವತಿಯಿಂದ ಆಯೋಜಿಸಲಾಗಿರುವ ಈ ನಾಟಕದಲ್ಲಿ ಹಿಂದೂ ಧರ್ಮದ ವಕ್ತಾರನಂತೆ ಹಾಗೂ ಮುಸ್ಲಿಂ ವಿರೋಧಿ ಭಾವನೆ ಹುಟ್ಟಿಸುವಂಥಾ, ಜೊತೆಗೆ ಅಸ್ಪೃಶ್ಯತೆಯನ್ನು ತಪ್ಪಾಗಿ ಚಿತ್ರಿಸುವಂಥಾ ನೆಪದ ಕಥಾವಸ್ತು ಇರಬಹುದೆಂಬ ಆತಂಕ ವ್ಯಕ್ತವಾಗಿದೆ. ಗಂಗೊಳ್ಳಿ ತೀರವು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಅಹಿತಕರ ಪರಿಸ್ಥಿತಿ ಉಂಟಾಗುವ ಸಾಧ್ಯತೆಯನ್ನು ಅವರು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಜಯನ್ ಮಲ್ಪೆ, ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವ ಮುನ್ನ ಜಿಲ್ಲೆಯ ದಲಿತ ನಾಯಕರ ಸಮಿತಿಯೊಂದಿಗೆ ಹಾಗೂ ಜಿಲ್ಲಾಡಳಿತದೊಂದಿಗೆ ನಾಟಕದ ಸಂಪೂರ್ಣ ವಿಡಿಯೋ ವೀಕ್ಷಿಸಿ, ಎಲ್ಲರ ಒಪ್ಪಿಗೆಯ ನಂತರವೇ ಅನುಮತಿ ನೀಡುವಂತೆ ಕೋರಿದ್ದಾರೆ. “ನಾಟಕಕ್ಕೆ ಅನುಮತಿ ನೀಡುವಲ್ಲಿ ತುರ್ತು ನಿರ್ಧಾರ ಕೈಗೊಳ್ಳುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಪೂರ್ವ ಪರಿಶೀಲನೆ ಅಗತ್ಯ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.






