ಕಲಬುರಗಿ ಜಿಲ್ಲೆಯ ಜೇವರ್ಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮಗಳನ್ನು ತಡೆಯುವಂತೆ ಒತ್ತಾಯಿಸಿ ದಲಿತ ಹಕ್ಕುಗಳ ಆಂದೋಲನದ ಸಂಘಟಕರು ಶಾಸಕ ಅಜಯ್ ಸಿಂಗ್ ಕಾರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.
ಜೇವರ್ಗಿ ಪಟ್ಟಣದ ಬಿಜಾಪುರ ಕ್ರಾಸ್ ಹತ್ತಿರ ಶಾಸಕರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಅವರು, “ಮುತ್ತುಕೊಡ ಗ್ರಾಮದ ಕೆರೆ ಅಕ್ರಮ ಒತ್ತುವರಿ ಹಾಗೂ ಸರ್ಕಾರದ ನಿಗಮದ ಹಣ ದುರುಪಯೋಗ ಸೇರಿದಂತೆ ಖೊಟ್ಟಿ ದಾಖಲೆ ಸೃಷ್ಟಿಮಾಡಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಅಕ್ರಮವಾಗಿ ದಾಸ್ತಾವೇಜು ಮಾಡಿಕೊಂಡಿರುವ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವಂತೆ ಶಾಂತಿಯುತವಾಗಿ ತಹಶೀಲ್ ಕಾರ್ಯಾಲಯದ ಎದುರು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರದ ನಡೆ ಖಂಡನೀಯ” ಎಂದರು.
“ಅಕ್ರಮದ ಕುರಿತು ಹಲವು ಬಾರಿ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಂದಿಲ್ಲ. ತಾಲೂಕು ಆರಕ್ಷಕ ವೃತ್ತ ನಿರೀಕ್ಷಕರು ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಕೂಡಾ ಇದಕ್ಕೆ ಗಮನಹರಿಸಿಲ್ಲ ಹಾಗೂ ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಈ ಕುರಿತಂತೆ ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿಲ್ಲ” ಎಂದು ದೂರಿದರು.
“ಜೇವರ್ಗಿ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಹಗಲುದರೋಡೆ ನಡೆಯುತ್ತಿದ್ದು, ಅಕ್ರಮವಾಗಿ ದಾಸ್ತೇವೇಜು ಮಾಡಿ ಅಕ್ರಮ ರೀತಿಯಲ್ಲಿ ಆಸ್ತಿ ವರ್ಗಾವಣೆ ಮಾಡಿರುವವರ ಮೇಲೆ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಏಕೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮುತ್ತುಕೊಡ ಕೆರೆ ಉಳಿಯಬೇಕು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿ ಹೆಸರಿನಲ್ಲಿ ಜಮೀನನ್ನು ನೋಂದಣಿ ಮಾಡಿದಂತೆ ನಾಟಕವಾಡಿ ಮತ್ತೆ ಅದನ್ನು ತಮ್ಮ ಹೆಸರಿಗೆ ಮಾಡಿಕೊಂಡ ಊರಿನ ಪ್ರಬಲ ವ್ಯಕ್ತಿಯ ಮೇಲೆಯೂ ಕೂಡಲೇ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಈ ಮೊದಲೇ ಸದರಿ ಜಾಗವನ್ನು ಕೆರೆ ಅಭಿವೃದ್ಧಿಗಾಗಿ ಬಿಟ್ಟುಕೊಡಲಾಗಿದ್ದು, ಸರ್ಕಾರದಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ಕೆರೆ ಕಾಮಗಾರಿ ಮಾಡಲಾಗಿತ್ತು. ಮತ್ತೆ ಅದೇ ಕೆರೆಯ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ಕೃಷಿಗೆ ಯೋಗ್ಯವಾಗಿದೆಯೆಂದು ನಿಗಮಕ್ಕೆ ಮಾರಾಟ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಇಲ್ಲಿ ಸರ್ಕಾರಿ ಇಲಾಖೆಯ ಎಲ್ಲ ಅಧಿಕಾರಿಗಳು ಸೇರಿದಂತೆ ಅಭಿವೃದ್ಧಿ ನಿಗಮದ ಅಧಿಕಾರಿಗಳೂ ಕೂಡಾ ಪರೋಕ್ಷವಾಗಿ ಪಾಲ್ಗೊಂಡಿದ್ದು, ಸರ್ಕಾರಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.
ಬಿಜಾಪುರ ಹತ್ತಿರ ಹೋರಾಟಗಾರರು ಹಾಗೂ ಶಾಸಕರ ನಡುವೆ 15 ನಿಮಿಷಗಳ ಕಾಲ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನಾಕಾರರ ಮನವೊಲಿಸಿದ ಶಾಸಕ ಡಾ. ಅಜಯ್ ಸಿಂಗ್ ಜೇವರ್ಗಿ ತಹಶೀಲ್ ಕಾರ್ಯಾಲಯದಲ್ಲಿ ಸಭೆ ನಡೆಸಿ ಸದರಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ನೆಲೋಗಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಹಾಗೂ ಜೇವರ್ಗಿಯ ವೃತ್ತ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.
“ಕಾನೂನನ್ನು ಮೀರಿ ಈ ಪ್ರಕರಣದಲ್ಲಿ ಅಕ್ರಮವಾಗಿ ಭಾಗಿಯಾದ ಎಲ್ಲರ ಮೇಲೂ ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ ಅಕ್ರಮ ದಾಸ್ತಾವೇಜು ಹಾಗೂ ಆಸ್ತಿ ವರ್ಗಾವಣೆ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೋಕದ್ದಮೆ ದಾಖಲಿಸಬೇಕು” ಎಂದು ನಿರ್ದೇಶನ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪೌರಕಾರ್ಮಿಕರ ಹಕ್ಕೊತ್ತಾಯ ಈಡೇರಿಸುವಂತೆ ಆಗ್ರಹ
ಪ್ರತಿಭಟನೆ ನೇತೃತ್ವ ವಹಿಸಿದ್ದ ದಲಿತ ಹಕ್ಕುಗಳ ಆಂದೋಲನದ ಮುಖಂಡರುಗಳಾದ ಮಹೇಶ್ ಕುಮಾರ್ ರಾಠೋಡ್, ಬಾಬು ಬಿ ಪಾಟೀಲ್ ಮುತ್ತುಕೋಡ, ಸಿಪಿಐ ಪಕ್ಷದ ಕಾರ್ಯದರ್ಶಿ ಮಲ್ಲಿಕಾರ್ಜುನ್ ದೊಡ್ಮನಿ, ಜಿಲ್ಲಾ ಮುಖಂಡ ಪ್ರಭುದೇವ ಯಳಸಂಗಿ ಹಾಗೂ ಭೀಮಾಶಂಕರ್ ಮಾಡಿಯಾಳ, ಇಬ್ರಾಹಿಂ ಪಟೇಲ್ ಯಾಳವಾರ, ಗುರುನಾಥ್ ಸಾಹು ರಾಜವಾಳ ಹಾಗೂ ಮುತ್ತುಕೊಡ ಗ್ರಾಮದ ನಿವಾಸಿಗಳು ಇದ್ದರು.
ವರದಿ: ಸಿಟಿಜ಼ನ್ ಜರ್ನಲಿಸ್ಟ್- ರಾಜುಕುಮಾರ ಜೇವರ್ಗಿ





