ಮಳೆಗೆ ಕೆಸರು ಗದ್ದೆಯಂತಾದ ರಸ್ತೆ, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆಯೇ ಹರಿಯುವ ಚರಂಡಿ ನೀರು, ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದು ಔರಾದ ತಾಲೂಕಿನ ಶೆಂಬೆಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಚಟ್ನಾಳ ಗ್ರಾಮದ ಸ್ಥಿತಿ.
ಈ ಗ್ರಾಮದಲ್ಲಿ ಸುಮಾರು 400ಕ್ಕೂ ಅಧಿಕ ಮನೆಗಳಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಮೂವರು ಗ್ರಾ.ಪಂ. ಸದಸ್ಯರನ್ನು ಹೊಂದಿರುವ ಈ ಊರು ಶುದ್ಧ ಕುಡಿಯುವ ನೀರಿನ ಘಟಕ ಕಂಡಿಲ್ಲ. ಸಮರ್ಪಕ ರಸ್ತೆ, ಚರಂಡಿ ಇಲ್ಲದ ಕಾರಣ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಇನ್ನು ಗ್ರಾಮಕ್ಕೆ ಸರ್ಕಾರಿ ಸಾರಿಗೆ ಬಸ್ ಭಾಗ್ಯ ಮೊದಲೇ ಇಲ್ಲ. ಹೀಗೆ ಗ್ರಾಮಸ್ಥರು ಹಲವು ಸಮಸ್ಯೆಗಳು ಎದುರಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಪ್ರತಿ ಮನೆ-ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಗ್ರಾಮದ ವಿವಿಧ ಓಣಿಯಲ್ಲಿ ಸಿಮೆಂಟ್ ಕಾಂಕ್ರಿಟ್ನಿಂದ ಕೂಡಿದ ರಸ್ತೆಗಳು ಅಡ್ಡಾದಿಡ್ಡಿಯಾಗಿ ತೋಡಿ ಪೈಪ್ ಲೈನ್ ಮಾಡಲಾಗಿದೆ. ಆದರೆ, ಅಗೆದಿರುವ ಗುಂಡಿ ಮುಚ್ಚಿ ರಸ್ತೆ ದುರಸ್ತಿಗೊಳಿಸದ ಕಾರಣ ರಸ್ತೆಗಳು ಸಂಪೂರ್ಣ ಹದಗೆಟ್ಟು ಜನರ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ.

ʼಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಿವಾಸಿಗಳು ತಮ್ಮ ಮನೆಯ ತ್ಯಾಜ್ಯ ನೀರನ್ನು ಬೀದಿಯಲ್ಲಿ ಹರಿಸುತ್ತಾರೆ. ಗ್ರಾಮದಲ್ಲಿ ಅಲ್ಲಲ್ಲಿ ತಿಂಪೆಗುಂಡಿಗಳಿರುವ ಕಾರಣ ಗಬ್ಬು ನಾರುತ್ತಿದೆ. ಹೀಗೆ ರಸ್ತೆಗೆ ಬಿಡುವ ತ್ಯಾಜ್ಯ ನೀರಿನಿಂದ ಗ್ರಾಮದ ಅನೈರ್ಮಲ್ಯದ ತಾಣವಾಗಿದೆʼ ಎಂದು ಗ್ರಾಮಸ್ಥರು ಗೋಳು ತೋಡಿಕೊಳ್ಳುತ್ತಿದ್ದಾರೆ.
ಗ್ರಾಮದ ಕೆಲವು ಓಣಿಗಳಿಗೆ ಇನ್ನೂ ಸಿಸಿ ರಸ್ತೆ, ಚರಂಡಿ ಭಾಗ್ಯ ಸಿಕ್ಕಿಲ್ಲ. ಸ್ವಲ್ಪ ಮಳೆಯಾದರೆ ಸಾಕು ಮಕ್ಕಳು, ವೃದ್ಧರು ಓಡಾಡಲು ಸಾಹಸ ಪಡಬೇಕಾಗಿದೆ. ರಸ್ತೆ ಮೇಲೆಯೇ ಮಳೆ ನೀರು ಸಂಗ್ರಹವಾದ ಕಾರಣ ಸೊಳ್ಳೆ, ಕ್ರಿಮಿ ಕೀಟಗಳ ಸಂಖ್ಯೆ ಹೆಚ್ಚುತ್ತಿದ್ದು, ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿದ್ದಾರೆ.
ʼವಿವಿಧ ಓಣಿಯ ಮನೆಗಳಿಂದ ತ್ಯಾಜ್ಯ ಕೊಳಚೆ ನೀರು ಸರಾಗವಾಗಿ ಹರಿದು ಹೊರ ಹೋಗಲು ಚರಂಡಿ ನಿರ್ಮಿಸಿ ಸ್ವಚ್ಛತೆ ಕಾಪಾಡಬೇಕು. ಕೂಡಲೇ ಜೆಜೆಎಂ ಕಾಮಗಾರಿಗೆ ತೋಡಿದ ರಸ್ತೆ ಗುಂಡಿ ಮುಚ್ಚಿ ದುರಸ್ತಿಗೊಳಿಸಬೇಕು. ಹೊಸ ಬಡಾವಣೆಗೆ ರಸ್ತೆ, ಚರಂಡಿ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮಕ್ಕೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ಒದಗಿಸಲು ಪರಿಹಾರ ಕಂಡುಕೊಳ್ಳಬೇಕುʼ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಶೆಂಬೆಳ್ಳಿ ಗ್ರಾ.ಪಂ.ಪಿಡಿಒ ನಾಗೇಶ ಮುಕ್ರಂಬೆ ಈದಿನ.ಕಾಮ್ ಜೊತೆ ಮಾತನಾಡಿ, ಜೆಜೆಎಂ ಕಾಮಗಾರಿ ಕೆಲಸ ನಡೆಯುತ್ತಿದ್ದು, ಬೇಗ ಪೂರ್ಣಗೊಳಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ನಾಲ್ಕು ಸಲ ಪತ್ರ ಬರೆದಿರುವೆ. ಚಟ್ನಾಳ ಗ್ರಾಮದಲ್ಲಿ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದುʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕನ್ನಡಿಗರ ಕ್ಷಮೆ ಕೋರಿದ ಫೋನ್ಪೇ ಸಿಇಒ ಸಮೀರ್ ನಿಗಮ್
ಈ ಕುರಿತು ಔರಾದ್ ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಸುಭಾಷ ಅವರು ಈದಿನ.ಕಾಮ್ ದೊಂದಿಗೆ ಮಾತನಾಡಿ, ʼಜೆಜೆಎಂ ಕಾಮಗಾರಿ ಪೈಪ್ ಲೈನ್ ಕಾರ್ಯ ಮುಗಿದಿದೆ. ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ಮಳೆಯಿಂದ ಹಾಳಾದ ಗ್ರಾಮದ ರಸ್ತೆ, ಚರಂಡಿ ಸ್ವಚ್ಛಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತೇನೆʼ ಎಂದು ಮಾಹಿತಿ ನೀಡಿದರು.





