ಜೋಯಿಡಾ: ಅತ್ಯಾಚಾರ ಪ್ರಕರಣದ ಆರೋಪಿಯಾದ ಉಲ್ಲಾಸ ಸಡಕೋ ಗಾವಡಾ ಇತನಿಗೆ ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕಾರವಾರವು 10 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹15,000 ದಂಡ ವಿಧಿಸಿ ತೀರ್ಪು ನೀಡಿದೆ.
ಈ ತೀರ್ಪನ್ನು ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಪ್ರಕಟಿಸಿದ್ದು, ದಂಡದ ಜೊತೆಗೆ, ಆರೋಪಿತನು ಸಂತ್ರಸ್ತ ಮಹಿಳೆಗೆ ₹10,000 ಪರಿಹಾರ ರೂಪದಲ್ಲಿ ನೀಡಬೇಕು ಮತ್ತು ನೊಂದ ಮಹಿಳೆಯು ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದಲೂ ಪರಿಹಾರ ಪಡೆಯಲು ಅರ್ಹರು ಎಂದು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಜೋಯಿಡಾ ತಾಲೂಕಿನ ಅಣಶಿ ಗ್ರಾಮದ ಕೈಲವಾಡಾ ಮಜರೆಯಲ್ಲಿ ನಡೆದಿದೆ. ದಿನಾಂಕ 1-12-2018 ರಂದು ಸಂಜೆ 4 ಗಂಟೆಗೆ ಸಂತ್ರಸ್ತ ಮಹಿಳೆಯು ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಅಣಶಿ ವನ್ಯಜೀವಿ ವಲಯದಲ್ಲಿ ತನ್ನ ಮನೆಯ ದನಗಳನ್ನು ಮೇಯಿಸುತ್ತಿದ್ದಾಗ, ಆರೋಪಿ ಉಲ್ಲಾಸ ಸಡಕೋ ಗಾವಡಾ ಒಬ್ಬಳೇ ಇರುವುದನ್ನು ಗಮನಿಸಿ ಈ ಕೃತ್ಯ ಎಸಗಿದ್ದಾನೆ.
ಆರೋಪಿಯು ಮಹಿಳೆಗೆ ಹೆದರಿಸಿ, ಅವಳ ಇಚ್ಛೆಯ ವಿರುದ್ಧವಾಗಿ ಬಲತ್ಕಾರದಿಂದ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದನು. ತಾನು ಕೃತ್ಯದ ದಿನದಂದು ಧರಿಸಿದ್ದ ಬಟ್ಟೆಗಳಲ್ಲಿ ಯಾವುದೇ ಕುರುಹುಗಳು ಸಿಗಬಾರದೆಂಬ ಉದ್ದೇಶದಿಂದ ಪ್ಯಾಂಟ್ ಮತ್ತು ಟಿ-ಶರ್ಟನ್ನು ತೊಳೆದು ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿದ್ದ ಬಗ್ಗೆಯೂ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಣಕು ಕಾರ್ಯಾಚರಣೆ ಯಶಸ್ವಿ: ಜಿಲ್ಲಾಡಳಿತದಿಂದ ತುರ್ತು ಕ್ರಮಗಳ ಪ್ರದರ್ಶನ
ಪ್ರಕರಣದ ತನಿಖೆಯನ್ನು ಜೋಯಿಡಾ ವೃತ್ತದ ಅಂದಿನ ತನಿಖಾಧಿಕಾರಿಯಾದ ಪೊಲೀಸ್ ವೃತ್ತ ನಿರೀಕ್ಷಕ ರಮೇಶ ಎಸ್. ಹೂಗಾರ ಅವರು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಕಾನ್ಸ್ಟೇಬಲ್ಗಳಾದ ಲಿಯಾಕತ್ ಅಲಿ ಮತ್ತು ಖಲೀಲ್ ಮುಲ್ಲಾ ಅವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಕಾಲದಲ್ಲಿ ಸಾಕ್ಷಿದಾರರನ್ನು ಹಾಜರುಪಡಿಸಿ, ಆರೋಪಿಗೆ ಶಿಕ್ಷೆ ವಿಧಿಸುವಲ್ಲಿ ಸಹಕರಿಸಿದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ಅವರು ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸದೀರ್ಘವಾಗಿ ವಾದ ಮಂಡಿಸಿದ್ದರು.





