ಮೈಸೂರು ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ರೂಸಾ 2.0 ಯೋಜನೆಯ ಅಡಿಯಲ್ಲಿ ‘ವೃತ್ತಿ ಅವಕಾಶಗಳು ಮತ್ತು ಉದ್ಯೋಗಾರ್ಹತಾ ಕೌಶಲ್ಯಗಳು’ ವಿಷಯ ಕುರಿತು ಕಾಲೇಜಿನ ಜ್ಯೂನಿಯರ್ ಬಿಎ ಹಾಲ್ ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಪ್ರಾಂಶುಪಾಲ ಪ್ರೊ.ವಿ. ಷಣ್ಮುಗಂ ‘ಪತ್ರಿಕೋಧ್ಯಮ ಸಮಾಜದ ಆಧಾರ ಸ್ತಂಭ’ ಎಂದು ಬಣ್ಣಿಸಿದರು.
ಭಾಷೆಯ ಮೇಲೆ ದೃಢವಾದ ಹಿಡಿತ ಮತ್ತು ಕೌಶಲ್ಯಾಭಿವೃದ್ಧಿ ವಿದ್ಯಾರ್ಥಿಗಳ ವೃತ್ತಿಜೀವನದಲ್ಲಿ ಯಶಸ್ಸಿನ ಪ್ರಮುಖ ಅಂಶಗಳಾಗಿವೆ. ಪತ್ರಿಕೋದ್ಯಮವು ಸಮಾಜದ ದಿಕ್ಕನ್ನು ರೂಪಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಉತ್ತಮ ಪತ್ರಿಕೆ ಜನಮನವನ್ನು ಸೆಳೆಯುವ ಮೂಲಕ ಸಮಾಜವನ್ನು ಸಕಾರಾತ್ಮಕವಾಗಿ ರೂಪಿಸುತ್ತದೆ. ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ನೀಡುವ ಪತ್ರಿಕೆ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ, ಜವಾಬ್ದಾರಿಯುತ ಪತ್ರಿಕೋದ್ಯಮವು ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಂವಹನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಅದು ವ್ಯಕ್ತಿತ್ವ ವಿಕಾಸಕ್ಕೂ ದಾರಿಯಾಗುತ್ತದೆ. ವೃತ್ತಿ ಕೌಶಲ್ಯಗಳನ್ನು ಓದಿನ ಹಂತದಲ್ಲೇ ಕರಗತ ಮಾಡಿಕೊಳ್ಳಬೇಕು. ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಜವಾಬ್ದಾರಿಯುತ ಪತ್ರಕರ್ತರಗಾಲು ವಿದ್ಯಾರ್ಥಿಗಳು ಮುಂದಡಿ ಇಡಬೇಕು ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಡಿಕೇರಿ | ಕಬಡಗೇರಿ ನೂತನ ಬಡಾವಣೆಗೆ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡುವಂತೆ ಶಾಸಕ ಮಂತರ್ ಗೌಡ ಸೂಚನೆ
ವಿಶ್ವವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ. ಜೆ. ಲೋಹಿತ್, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ. ಜಡಿಯಪ್ಪ, ಪತ್ರಿಕೋದ್ಯಮ ವಿಭಾಗದ ಅಧ್ಯಾಪಕ ಡಾ. ಗೋಪಾಲ, ಡಾ. ಶ್ವೇತಾ ಎಂ. ಹನ್ಸ್, ಕೇಶವಮೂರ್ತಿ, ಡಾ. ಎನ್. ನವೀನ್, ತತ್ವಶಾಸ್ತ್ರ ವಿಭಾಗದ ಅಧ್ಯಾಪಕ ಡಾ. ಕೆ.ಎನ್. ಬಸವರಾಜು, ವಿದ್ಯಾರ್ಥಿಗಳಾದ ಯೋಗಶ್ರೀ, ಚಂದ್ರಲಾ, ಮಹದೇವ, ಪ್ರಸಾದ್, ನಂದೀಶ, ಎಂ.ಕೆ. ಕೀರ್ತನಾ ಮತ್ತು ಪಿ. ದೀಕ್ಷಾ ಇದ್ದರು.





