ಅಲೆಮಾರಿ ಸಮುದಾಯದ 40 ಕುಟುಂಬಗಳ ಜನರು ಜೇವರ್ಗಿ ಪಟ್ಟಣದ ಕೊಳ್ಳಕೂರು ಕ್ರಾಸ್ ಹತ್ತಿರ ಗುಡಿಸಲಿ ಕಟ್ಟಿಕೊಂಡು ಸುಮಾರು 30 ವರ್ಷಗಳಿಂದ ವಾಸವಾಗಿದ್ದಾರೆ. ಅವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ, ಸಂಕಷ್ಟದಲ್ಲಿ ಬದುಕು ದೂಡುತ್ತಿದ್ದಾರೆ. ಮಳೆ ಬಿಸಿಲು ಚಳಿಯಲ್ಲಿ ಸಣ್ಣ-ಸಣ್ಣ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಯಾರೊಬ್ಬರೂ ಅವರ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ. ಇಲ್ಲಿನ ಜನರ ಅಳಲು-ಆಕ್ರಂದನ ಮುಗಿಯುತ್ತಿಲ್ಲ.
ಈ ಕುಟಂಬಗಳ ಜನರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಒಟರ್ ಐಡಿ ಸೇರಿದಂತೆ ಎಲ್ಲ ದಾಖಲೆಗಳೂ ಇವೆ. ಆದರೂ, ಈ ಕುಟುಂಬಗಳ ವೃದ್ಧರಿಗೆ ಪಿಂಚಣಿ, ವಿಧವಾ ಪಿಂಚಣಿ ಸೇರಿದಂತೆ ಸರ್ಕಾರದಿಂದ ಯಾವುದೇ ಸವಲತ್ತು ದೊರೆಯುತ್ತಿಲ್ಲ ಎಂದು ಅಲ್ಲಿನ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“30-40 ವರ್ಷಗಳಿಂದ ನಾವು ಜೇವರ್ಗಿ ಪಟ್ಟಣದಲ್ಲಿ ವಾಸವಾಗಿದ್ದೇವೆ. ಸ್ವಂತ ನೆಲೆ ಇಲ್ಲದೆ, ಬದುಕುತ್ತಿದ್ದೇವೆ. ಮಳೆ ಬಂದರೆ ಅಡುಗೆ ಮಾಡಿಕೊಂಡು ಊಟ ಮಾಡುವುದಕ್ಕೂ ಆಗುವುದಿಲ್ಲ. ಉಪವಾಸ ಬೀಳುವ ಪರಿಸ್ಥಿತಿ ಇದೆ. ಚುನಾವಣೆ ಸಂದರ್ಭದಲ್ಲಿ ಶಾಸಕರು, ಸಂಸದರು ಬಂದು ಮನೆ ಕೊಡ್ತೀವಿ ಎಂದು ಹೇಳುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ಯಾರೂ ನಮ್ಮತ್ತ ತಿರುಗಿಯೂ ನೋಡುವುದಿಲ್ಲ” ಎಂದು ಅಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲೆಮಾರಿ ಸಮುದಾಯದ ದುರ್ಗಮ್ಮ ಈದಿನ.ಕಾಮ್ ಜೊತೆ ಮಾತನಾಡಿದ್ದು, “ಮಳೆ ಬಂದ್ರೆ ಗುಡಿಸಲು ಸೋರುತ್ತವೆ. ಕುಡಿಸಲಿಗೆ ನೀರು ನುಗ್ಗುತ್ತವೆ. ಮಳೆ ನೀರಿನ ನಡುವೆಯೇ ಸಣ್ಣ ಮಕ್ಕಳೊಂದಿಗೆ ಹಲವಾರು ರಾತ್ರಿ ಕಳೆಯುತ್ತಿದ್ದೇವೆ. ಹಾವು, ಚೇಳುಗಳ ಆತಂಕ ದಿನನಿತ್ಯ ಕಾಡುತ್ತಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಸಮುದಾಯದ ಎಲ್ಲಮ್ಮ ಮಾತನಾಡಿ, “ನಮಗೆ ಯಾವುದೇ ಸವಲತ್ತು ಸಿಗದ ಕಾರಣ, ಮಕ್ಕಳನ್ನು ಶಾಲೆಗೆ ಕಳುಹಿಸಿಲು ಸಾಧ್ಯ ಆಗುತ್ತಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ನಮಗೆ ಅನುಕೂಲ ಇಲ್ಲ. ಹಾಗಾಗಿ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಭಿಕ್ಷೆ ಬೇಡಿಕೊಂಡು ತಿನ್ನುವವರಿಗೆ ಯಾರು ಸಹಾಯ ಮಾಡುವುದಿಲ್ಲ. ಜನಪ್ರತಿನಿದಿಗಳು ಸುಮ್ನೆ ಬರ್ತಾರೆ ಹೋಗ್ತಾರೆ” ಎಂದು ತಿಳಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಮರೆವ್ವ, “ಮಳೆ ಬಂದ್ರೆ ಗುಡಿಸಲು ಸೋರುತ್ತವೆ. ತಲೆಮೇಲೆ ಬುಟ್ಟಿ, ತಟ್ಟೆ, ಹರುಕು ಖವದಿ ಹೊದ್ದುಕೊಂಡು ನಿದ್ದೆ ಇಲ್ಲದೆ, ಸಂಕಷ್ಟ ಪಡುತ್ತಿದ್ದೇವೆ” ಎಂದು ಹೇಳಿದ್ದಾರೆ.




