ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮ ಪಂಚಾಯತಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ನಿಧಿ ದುರ್ಬಳಕೆ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಸೋಮವಾರ ಆದರ್ಶ ಗ್ರಾಮ ಸಮಿತಿ ನೇತೃತ್ವದಲ್ಲಿ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಯಾಳವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವಾರು ಹಳ್ಳಿಗಳ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ, ನಿಧಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಳಿಕ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಆದರ್ಶ ಗ್ರಾಮ ಸಮಿತಿ ಅಧ್ಯಕ್ಷ ಇಬ್ರಾಹಿಂ ಪಟೇಲ್ ಮಾಲಿ ಮಾತನಾಡಿ, “2024–25 ಮತ್ತು 2025–26 ನೇ ಸಾಲಿನ 15ನೇ ಹಣಕಾಸು ಆಯೋಗ ಹಾಗೂ ಕರವಸೂಲಿ ನಿಧಿಗಳ ಅಡಿಯಲ್ಲಿ ಬಂದ ಸುಮಾರು ₹1.70 ಲಕ್ಷ ಮೊತ್ತವನ್ನು ಯಾವುದೇ ಕಾಮಗಾರಿ ಕೈಗೊಳ್ಳದೆ ದುರ್ಬಳಕೆ ಮಾಡಲಾಗಿದೆ. ನಿಯಮ ಉಲ್ಲಂಘನೆಯ ಈ ಘಟನೆಗೆ ಸಂಬಂಧಿಸಿದಂತೆ ಇಲಾಖೆಯು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ದುರ್ಬಳಕೆಯಾದ ಹಣ ವಸೂಲಿ ಮಾಡುವ ಜೊತೆಗೆ ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು,” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಬೆಳೆ ನಾಶ ಜಿಲ್ಲೆಯನ್ನು ಹಸಿ ಬರವೆಂದು ಘೋಷಿಸಿ, ಸಾಲ ಮನ್ನಾ ಮಾಡುವಂತೆ ರೈತ ಸಂಘದ ಆಗ್ರಹ
ಅವರು ಮುಂದುವರಿಸಿ, “ಸಾರ್ವಜನಿಕ ಶೌಚಾಲಯ, ರಸ್ತೆ ಕಾಮಗಾರಿ, ಉದ್ಯೋಗ ಖಾತ್ರಿ ಯೋಜನೆ, ಮನೆ ನೊಂದಣಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಿಂತ ಸ್ಥಿತಿಯಲ್ಲಿವೆ. ಈ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ. ಮಹೇಶ್ ಕುಮಾರ ರಾಠೋಡ್, ರಾಜಾ ಪಟೇಲ್, ಮಹ್ಮದ್ ಚೌಧರಿ ಕೊಡಚಿ, ಸದ್ದಾಂ ಪಟೇಲ್ ಚಿಗರಹಳ್ಳಿ, ಶರಣು ದೊಡ್ಡಮನಿ, ಮಲ್ಕಣ್ಣ, ಮಲ್ಕಪ್ಪ, ಬಾಬು ಬಿ. ಪಟೇಲ್, ಶಂಕರಲಿಂಗ, ಅಖಿಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





