ಕರ್ನಾಟಕ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಎಐಡಿಎಸ್ಒ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ಜಿಲ್ಲಾ ಜಂಟಿ ಕಾರ್ಯದರ್ಶಿ ಬಾಬು ಪವರ್ ಅಧ್ಯಕ್ಷತೆಯಲ್ಲಿ ಪೋಷಕರು,ವಿದ್ಯಾರ್ಥಿಗಳು ಶಾಹಬಾದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಜಿಲ್ಲಾ ಕೌನ್ಸಿಲ್ ಅಧ್ಯಕ್ಷ ತುಳಜರಾಮ ಎನ್ ಕೆ ಅವರು ಮಾತನಾಡಿ, ‘ಸರ್ಕಾರಿ ಶಿಕ್ಷಣ ಬಲಪಡಿಸುವ ಬದಲು ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ. ಗುಣಮಟ್ಟ ಮತ್ತು ಮಾದರಿ ಶಾಲೆಗಳ ಸುಳ್ಳು ಆಮಿಷದ ಹಿಂದೆ ಶಿಕ್ಷಣವನ್ನು ಕಾರ್ಪೊರೇಟ್ಗಳಿಗೆ ಒಪ್ಪಿಸುವ ರಾಜಕೀಯ ಅಜಂಡಾ ಇದೆ’ ಎಂದು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಹೇಳಿದರು, ‘ಬಡ ಮಕ್ಕಳ ಓದುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದು ಸರ್ಕಾರದ ಬಡವಿರೋಧಿ ಧೋರಣೆ. ಉಚಿತ ಸಾರಿಗೆ ಹೆಸರಿನಲ್ಲಿ ಹೊರೆ ಪೋಷಕರ ಮೇಲೆ ಬಿದ್ದಿದೆ. ಶಾಲೆಗಳು ಸ್ವಂತ ಆದಾಯ ಹುಡುಕಬೇಕು ಎಂಬ ನಿರ್ದೇಶನವು ಉಚಿತ ಮತ್ತು ಸಮಾನ ಶಿಕ್ಷಣ ತತ್ತ್ವದ ವಿರುದ್ಧವಾಗಿದೆ’ ಎಂದರು.
ತರನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಗೊಳಿಸಿರುವುದರಿಂದ ಶಂಕರಲಿಂಗ ಗುಡಿ, ಹಳೆ ಶಹಾಬಾದ್ ಉರ್ದು, ಆಶ್ರಯಕಾಲೋನಿ ರಾಮಘಾಡ, ಶಿಬಿರಕಟ್ಟಿ ಹಿರಿಯ ಪ್ರಾಥಮಿಕ ಶಾಲೆಗಳು ವಿಲೀನಕ್ಕೆ ಒಳಗಾಗುತ್ತಿವೆ. ಪ್ರತಿಭಟನಾಕಾರರು ಈ ಶಾಲೆಗಳು ಮುಚ್ಚುವ ಅಪಾಯ ಎದುರಿಸುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಬೀದರ್ | ಹಿಂದೂಗಳು ನಮ್ಮ ಶತ್ರುಗಳಲ್ಲ, ನಮ್ಮ ಶತ್ರು ಆರ್ಎಸ್ಎಸ್: ನಿವೃತ್ತ ನ್ಯಾ.ಬಿ.ಜಿ ಕೋಲ್ಸೆ
ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ನವೋದಯ ಹಾಗೂ ಸ್ವಾತಂತ್ರ್ಯ ಹೋರಾಟದ ನಾಯಕರ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು.
ಜಿಲ್ಲಾ ಖಜಾಂಚಿ ಸ್ಪೂರ್ತಿ ಗುರುಜಲ್ಕರ್, ಜಂಟಿ ಕಾರ್ಯದರ್ಶಿ ದೇವರಾಜ್ ರಾಜೋಳ, ರಾಹುಲ್ ಜಾಧವ್, ಬೃಂದಾ ಎಸ್.ಜಿ, ಶೃಷ್ಟಿ ಇಆರ್ಜಿ ಮತ್ತು ಪೋಷಕರು ಕನಕ ಶಿಬಿರಕಟ್ಟಿ, ಸಿದ್ದು, ರಘು ಪವರ್ ಮತ್ತಿತರರು ಉಪಸ್ಥಿತರಿದ್ದರು.





