ವಿದ್ಯಾರ್ಥಿಗಳ ಪ್ರವೇಶಾತಿ ಮತ್ತು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆ ಕೊಡಿಸಲು ಕಲಬುರಗಿಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಲೆಕ್ಕ ಅಧಿಕ್ಷಕ ಗಂಗಾಧರ ಅವರು ಲಂಚ ಪಡೆದಿದ್ದಾರೆ ಎಂದು ಭೀಮ್ ಆರ್ಮಿ ಆರೋಪಿಸಿದೆ. ಅಧಿಕಾರಿ ಗಂಗಾಧರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರವೇಶ ಕೊಡಿಸಲು ಯಳಕಿ ಗ್ರಾಮದ 6ನೇ ತರಗತಿ ವಿದ್ಯಾರ್ಥಿ ಪ್ರದೀಪ ಅವರ ತಂದೆ ಸಿದ್ದಪ್ಪ ಅವರಿಂದ ಗಂಗಾಧರ ಅವರು ಲಂಚ ಪಡೆದಿದ್ದಾರೆ. ‘ಹಣವನ್ನು ನಾನು ಮತ್ತು ನನ್ನ ಮೂವರು ಮೇಲಾಧಿಕಾರಿಗಳು ಹಂಚಿಕೊಳ್ಳಬೇಕು’ ಎಂದು ಅವರೇ ಹೇಳಿಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಝಳಕಿ ಗ್ರಾಮದ ವಿದ್ಯಾರ್ಥಿನಿ ರಶ್ಮಿತ ಅವರನ್ನು ಮೂರಾರ್ಜಿ ಶಾಲೆಯಿಂದ ಸಾವಳೇಶ್ವರ ವಸತಿ ಶಾಲೆಗೆ ವರ್ಗಾವಣೆ ಮಾಡಲು ಮತ್ತು ಅದೇ ಗ್ರಾಮದ ಮತ್ತೋರ್ವ ವಿದ್ಯಾರ್ಥಿ ಆಶಾ ಅವರನ್ನು ಆಳಂದದ ಅಂಬೇಡ್ಕರ್ ವಸತಿ ಶಾಲೆಗೆ ವರ್ಗಾವಣೆ ಮಾಡಲು ಗಂಗಾಧರ ಲಂಚ ಪಡೆದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
- ಸಮಾಜ ಕಲ್ಯಾಣ ಇಲಾಖೆಯಲ್ಲಿ ಲೆಕ್ಕ ಅಧೀಕ್ಷಕ ಗಂಗಾಧರ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು.
- ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಕೋಡ್ತಾ ಕಿತ್ತೂರಾಣಿ ಚನ್ನಮ್ಮ ಬಾಲಕಿಯರ ವಸತಿ ನಿಲಯದಲ್ಲಿ 50 ವಿದ್ಯಾರ್ಥಿಗಳಿಗೆ ವಾಂತಿ-ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಸತಿ ನಿಲಯವನ್ನು ಸರಿಯಾಗಿ ನಿರ್ವಹಣೆ ಮಾಡದ ಪ್ರಾಂಶುಪಾಲರು ಮತ್ತು ಮೇಲ್ವಿಚಾರಕರನ್ನು ಅಮಾನತುಮಾಡಬೇಕು.
- ಆಳಂದ ತಾಲೂಕಿನ ಕೋರಳ್ಳಿ ತಾಂಡಾದಲ್ಲಿ ವಸತಿ ಶಾಲೆಗೆ ಬೆಡ್, ಊಟದ ವ್ಯವಸ್ಥೆ ಮತ್ತು ಸ್ವಚ್ಛತೆ ಹಾಗೂ ಇನ್ನಿತರ ಮೂಲಸೌಕರ್ಯಗಳನ್ನು ಒದಗಿಸಬೇಕು.
- ದಲಿತರ ಮೇಲೆ ದೌರ್ಜನ್ಯ ನಡೆದಾಗ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಂಧಿಸಬೇಕು.
- ಅಂತರ್ಜಾತಿ ವಿವಾಹ, ಸಿಂಧುತ್ವ ಪ್ರಮಾಣ ಪತ್ರ, ದೇವದಾಸಿ ಹಾಗೂ ವಿಧವಿಯರ ಮಕ್ಕಳಿಗೆ ಮದುವೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದಾಗ ಕೆಲಸ ಮಾಡಿಕೊಡಲು ಲಂಚ ಪಡೆಯುತ್ತಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
- ಆಳಂದ ತಾಲೂಕಿನ ಭುಸನೂರ ಗ್ರಾಮದಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನೆಯ ಅಡಿ ದಲಿತರ ಓಣಿಯಲ್ಲಿ ಕಾಮಗಾರಿ ನಡೆಸದೆ, ಪ್ರಬಲ ಜಾತಿಗರ ಓಣಿಯಲ್ಲಿ ಕಾಮಗಾರಿ ಮಾಡಲಾಗಿದೆ. ದಲಿತರ ಹಣವನ್ನು ದುರುಪಯೋಗ ಮಾಡಿಕೊಂಡ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
ಪ್ರತಿಭಟನೆಯಲ್ಲಿ ಸೂರ್ಯಕಾಂತ ಜಿಡಾಗ, ಅಬ್ದುಲ್ ಗನಿ ರಾವಣ ಸೇರಿದಂತೆ ಹಲವರು ಇದ್ದರು.ಕಲ




