ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕ (ಡಾಕ್ ಸೇವಕ್) ಹುದ್ದೆ ಗಿಟ್ಟಿಸಿಕೊಳ್ಳಲು ಎಸ್ಎಸ್ಎಲ್ಸಿಯ ಅಕ್ಕಪಟ್ಟಿಯಲ್ಲಿನ ಅಂಕಗಳನ್ನು ತಿದ್ದಿ ನಕಲಿ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದ 25 ಅಭ್ಯರ್ಥಿಗಳ ವಿರುದ್ಧ ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2023ರ ಜುಲೈ ತಿಂಗಳಲ್ಲಿ ಅಂಚೆ ಸೇವಕ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಎಸ್ಎಸ್ಎಲ್ಸಿಯನ್ನು ಗರಿಷ್ಠ ವಿದ್ಯಾರ್ಹತೆಯಾಗಿ ನಿಗದಿಪಡಿಸಲಾಗಿತ್ತು. ಸಲ್ಲಿಕೆಯಾದ ಅಭ್ಯರ್ಥಿಗಳ ಅಂಕಪಟ್ಟಿಯ ನೈಜತೆ ಪರಿಶೀಲನೆಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗೀಯ ಕಚೇರಿಗೆ ಕಳುಹಿಸಿದಾಗ 25 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ ಎಂಬುದು ದೃಢಪಟ್ಟಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಶಾಸಕರ ವಿರುದ್ಧ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ ಸಾಮಾಜಿಕ ಕಾರ್ಯಕರ್ತ
ನಕಲಿ ಪ್ರಮಾಣ ಪತ್ರ ಸಲ್ಲಿಸಿ ಅಂಚೆ ಇಲಾಖೆ ಮತ್ತು ಸರ್ಕಾರಕ್ಕೆ ಮೋಸ ಮಾಡಿದ ಆರೋಪದಡಿ ಕಲಬುರಗಿ ಜಿಲ್ಲೆಯ ಸಲೀಂ ಘನಿಸಾಬ್, ಪವಿತ್ರಾ ಮಹಾಂತಪ್ಪ, ಅಶೋಕ ಬಸವಂತರಾಯ, ಮಹೇಂದ್ರಕುಮಾರ ಮೋಹನ, ಈರಮ್ಮ ಈರಣ್ಣ, ಟಬು ಬೇಗಂ, ಶಿವಕುಮಾರ ಸೂರ್ಯಕಾಂತ, ರಾಘವೇಂದ್ರ ಶ್ರೀಮಂತ, ಕಮಲ್ ದಾಸ್, ನಾಮದೇವ್ ಸೋಮು, ಶ್ವೇತಾ ಜಗನ್ನಾಥ, ಗೋಪಿಕೃಷ್ಣ ಭೀಮಪ್ಪ, ಪಲ್ಲವಿ ಜಟ್ಟೆಪ್ಪ, ವೀರೇಶ ದುಗ್ಗಣ್ಣ, ರಾಹುಲ್ ಹಿರೂರ್ ನಾಯಕ್, ಸಂಗಮೇಶ ಚನ್ನಯ್ಯ ಸ್ವಾಮಿ, ನಾಮು ಸುಭಾಷ, ರಾಹುಲ್ ಶಿವಪುತ್ರಪ್ಪ, ಅಶ್ವಿನಿ ಈರಣ್ಣ, ರೇಣುಕಾ ಅಣ್ಣರಾವ್ ಮತ್ತು ಅನಿಲಕುಮಾರ್, ಬೀದರ್ ಜಿಲ್ಲೆಯ ಅಮರಲಿಂಗ ಮಲ್ಲಿಕಾರ್ಜುನ, ತೋಟೇಶ್ವರಿ ವೀರಭದ್ರಪ್ಪ, ಚಂದ್ರಕಾಂತ ಮನೋಹರ ಹಾಗೂ ವಿಜಯಪುರದ ಗಂಗಮ್ಮ ಕಾಂತಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.





