ಕಲಬುರಗಿ ಕಡಗಂಚಿಯಲ್ಲಿರುವ ಉತ್ತರ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯವು ಸಾಹಿತ್ಯಿಕವಾಗಿ ಅದೆಷ್ಟು ದಿವಾಳಿ ಅನುಭವಿಸುತ್ತಿದೆ ಎಂಬುದಕ್ಕೆ ಇತ್ತೀಚಿನ ಅದರ ತಾಜಾ ನಡೆಯೇ ಸಾಕ್ಷಿಯಾಗಿದೆ ಎಂದು ಹಿರಿಯ ಸಾಹಿತಿಗಳು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟಣೆಗೆ ತಿಳಿಸಿರುವ ಅವರು, “ಭಾರತಕ್ಕೆ ಅದರಲ್ಲಿಯೂ ಕರ್ನಾಟಕದ ಸಾಹಿತ್ಯ ಲೋಕಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿರುವ ಬೂಕರ್ ಪ್ರಶಸ್ತಿಗೆ ಕಾರಣೀಕರ್ತರಾಗಿರುವ ಅನುವಾದಕಿ ದೀಪಾ ಭಾಸ್ತಿಯವರನ್ನು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಿ ಇದ್ದಕ್ಕಿದ್ದಂತೆ ತಾಂತ್ರಿಕ ಕಾರಣಗಳ ನೆಪವೊಡ್ಡಿ ರದ್ದುಗೊಳಿಸಿರುವುದು ತೀವ್ರ ಖಂಡನೀಯ” ಎಂದಿದ್ದಾರೆ.
“ದೀಪಾ ಭಾಸ್ತಿ ಸ್ವೋಪಜ್ಞತೆಯುಳ್ಳ ಅಂತರಾಷ್ಟ್ರೀಯ ಲೇಖಕಿ. ಯಶಸ್ವಿ ಅನುವಾದಕಿಯೂ ಹೌದು. ಅವರ ಸಮರ್ಥ ಅನುವಾದದಿಂದಾಗಿ ಕನ್ನಡದ ಖ್ಯಾತ ಕತೆಗಾರ್ತಿ ಬಾನು ಮುಷ್ತಾಕ್ ಅವರ ಕಥಾ ಸಂಕಲನಕ್ಕೆ ಅತ್ಯುನ್ನತ ಬೂಕರ್ ಪ್ರಶಸ್ತಿ ಲಭಿಸಿದ್ದು, ದೇಶಕ್ಕೆ ಸಂದ ಗೌರವ. ಅವರನ್ನು ಜಗದುದ್ದಗಲಕ್ಕೂ ಅನೇಕ ದೇಶಗಳು ಕರೆದು ಗೌರವಿಸುತ್ತಿವೆ. ಕಿರಿಯ ಲೇಖಕರೊಂದಿಗೆ ಸಂವಾದ, ತರಬೇತಿ ನಡೆಸುತ್ತಿವೆ. ಅಂಥ ಒಬ್ಬ ಅನುವಾದಕಿಯನ್ನು ನಮ್ಮ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯ ಆಮಂತ್ರಿಸಿ ಎಲ್ಲ ತಯಾರಿ ಮುಗಿದ ನಂತರ ದೀಪಾ ಭಾಸ್ತಿಯವರು ಮುಸ್ಲಿಂ ಮಹಿಳೆಯ ಕೃತಿಯನ್ನು ಅನುವಾದಿಸಿದ್ದಾರೆ ಎಂಬ ಹಿಡನ್ ಕಾರಣಕ್ಕೆ ಧಿಡೀರ್ ತಾಂತ್ರಿಕ ನೆಪವೊಡ್ಡಿ ಅವರ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಉನ್ನತ ಅಧಿಕಾರಿಗಳು ನಿರ್ಲಜ್ಜ ನಡೆ ತೋರಿದ್ದಾರೆ. ಮೊದಲೇ ದೀಪಾ ಭಾಸ್ತಿ ಬರುತ್ತಿರುವ ವಿಷಯ ತಿಳಿದ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಅವರ ‘ಹಾರ್ಟ್ ಲೈಟ್’ ಕೃತಿಯನ್ನು ಓದಿಕೊಂಡು ಸಂವಾದ ನಡೆಸಲು ತಯಾರಿ ಮಾಡಿಕೊಂಡು ಕುಳಿತ್ತಿದ್ದರಲ್ಲದೆ, ಬೂಕರ್ ವಿಜೇತ ಅನುವಾದಕಿಯೊಂದಿಗೆ ಮಾತುಕತೆ ನಡೆಸುವ ಉತ್ಸಾಹದಲ್ಲಿ ನಲಿದಾಡುತ್ತಿರುವಾಗಲೇ ವಿಶ್ವವಿದ್ಯಾಲಯವೊಂದು ತನ್ನ ಕೋಮುವಾದಿ ಕುಟೀಲಕರತನದಿಂದ ಮಕ್ಕಳ ಉತ್ಸಾಹದ ಮೇಲೆ ತಣ್ಣೀರು ಎರೆಚಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ತನ್ನ ವಿರೋಧಿ ನೆಲೆಯ ತಾತ್ವಿಕ ಸಿದ್ಧಾಂತಗಳೊಂದಿಗೂ ವಾಗ್ವಾದ ನಡೆಸಿರುವ ಪರಂಪರೆ ಹೊಂದಿರುವ ಭಾರತೀಯ ದಾರ್ಶನಿಕತೆಯನ್ನೂ ಗೌರವಿಸದ ಅಜ್ಞಾನಿ ಮತಾಂಧರೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತುಂಬಿಕೊಂಡಿದ್ದಕ್ಕೆ ಇದಕ್ಕಿಂತ ಜ್ವಲಂತ ನಿದರ್ಶನ ಬೇಕಾಗಿಲ್ಲ” ಎಂದರು.
“ದೀಪಾ ಭಾಸ್ತಿಯವರಂತೂ ಯಾವುದೇ ಇಸಂಗಳ ವಕ್ತಾರರೂ ಅಲ್ಲ, ವಿವಾದಾಸ್ಪದ ವ್ಯಕ್ತಿಯಂತೂ ಮೊದಲೇ ಅಲ್ಲ. ಹೀಗಿರುವಾಗಲೂ ಕುಂಟುನೆಪ ಹೂಡಿ ಅವರ ಕಾರ್ಯಕ್ರಮ ನಡೆಯದಂತೆ ಮಾಡಿರುವ ಮನೋಭೂಮಿಕೆ ಫ್ಯಾಸಿಸ್ಟ್ ದುರಹಂಕಾರಿಗಳ ಕುಚೋದ್ಯ ಕುಚೇಷ್ಟೆಯಲ್ಲದೆ ಮತ್ತೇನೂ ಅಲ್ಲ. ಇಂಥದ್ದೊಂದು ಅಪರೂಪದ ಹಾಗೂ ವಿದ್ಯಾರ್ಥಿಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಾತ್ಮಕ ಕೌಶಲ್ಯ ಬೆಳೆಸಬಹುದಾಗಿದ್ದ ಕಾರ್ಯವನ್ನು ನಿಲ್ಲಿಸಿದ ಅಧಿಕಾರಿಗಳ ಧೂರ್ತತನ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಚಳಿಗಾಲ ಅಧಿವೇಶನದಲ್ಲಿ ಸ್ಲಂ ಜನರ ಬೇಡಿಕೆ ಈಡೇರಿಕೆಗೆ ಆಗ್ರಹಿಸಲು, ಬೆಳಗಾವಿ ಚಲೋ
“ಈ ರೀತಿ ಮಾಡಿದ ಕ್ರಮದ ಕುರಿತು ಚಕಾರವೆತ್ತದ ವಿಶ್ವವಿದ್ಯಾಲಯದ ಸಾಹಿತ್ಯಿಕ ಬಾಂಧವರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ವಿಶ್ವವಿದ್ಯಾಲಯದ ಘನತೆ ಗೌರವವನ್ನು ಮಣ್ಣು ಮುಕ್ಕಿಸುತ್ತಿರುವ ಇಂಥ ಕೋಮುಕ್ರಿಮಿಗಳನ್ನು ಹೊರದೂಡಬೇಕು” ಕೆಂದು ಆಗ್ರಹಿಸಿದರು.
ಪ್ರೊ. ಆರ್ ಕೆ ಹುಡಗಿ, ಡಾ. ಕಾಶಿನಾಥ ಅಂಬಲಗಿ, ಡಾ. ಮೀನಾಕ್ಷಿ ಬಾಳಿ, ಡಾ. ದತ್ತಾ ಇಕ್ಕಳಕಿ, ಡಾ. ಪ್ರಭು ಖಾನಾಪೂರೆ, ಮಾರುತಿ ಗೋಖಲೆ, ಕೋದಂಡರಾಮ, ಮೆಹರಾಜ್ ಪಟೇಲ, ಪ್ರೊ. ಶ್ರೀಶೈಲ ಘೂಳಿ, ಖೇಮಣ್ಣ ಅಲ್ದಿ ಇದ್ದರು.





