ಬೆಳೆ ಸಮೀಕ್ಷೆಗಾರರಿಗೆ ಸೇವಾ ಭದ್ರತೆ, ಜೀವವಿಮೆ ಮತ್ತು ಕಾಯಂಗೊಳಿಸುವಂತೆ ಆಗ್ರಹಿಸಿ ಬೆಳೆ ಸಮೀಕ್ಷೆಗಾರರು ಅಧಿಕಾರಿ ಮುಖಾಂತರ ಸೇಡಂ ಶಾಸಕ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದರು.
ಕಲಬುರಗಿ ಜಿಲ್ಲಾಧ್ಯಕ್ಷ ರಾಜು ಮೇತ್ರಿ ಮಾತನಾಡಿ, “ಸೇಡಂ ತಾಲೂಕಿನಲ್ಲಿ ನಾವು ಸುಮಾರು ನಾಲ್ಕೈದು ವರ್ಷಗಳಿಂದ ಬೆಳೆ ಸಮೀಕ್ಷೆಗಾರರಾಗಿ ಸೇವೆ ಸಲ್ಲಿಸುತ್ತ ಬಂದಿದ್ದೇವೆ. ನಾವು ಸೇವೆ ಸಲ್ಲಿಸುತ್ತಿರುವಾಗ ಹಾವು, ಚೇಳು ಸೇರಿದಂತೆ ಇತರೆ ವಿಷಪೂರಿತ ಕ್ರಿಮಿಗಳು ಹಾಗೂ ಕಾಡು ಹಂದಿ, ತೋಳಗಳ ದಾಳಿಯಿಂದ ಗಾಯಗೊಂಡಿದ್ದೇವೆ. ಹೆಜ್ಜೇನುಗಳ ದಾಳಿಗೆ ಒಳಪಟ್ಟಿದ್ದೇವೆ” ಎಂದು ಹೇಳಿದರು.
“ಈ ಹಿಂದೆ ಮಳಖೇಡ ಮತ್ತು ಕೋಡ್ಲಾದಲ್ಲಿ ಇಬ್ಬರು ಬೆಳೆ ಸಮೀಕ್ಷದಾರರಿಗೆ ಹಾವು ಕಚ್ಚಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೂ ಕೂಡ ಈವರೆಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ. ನಾವು ಜೀವದ ಆಸೆ ಬಿಟ್ಟು ಶ್ರದ್ದೆಯಿಂದ ಸೇವೆ ಮಾಡುತ್ತಿದ್ದೇವೆ. ಸಮೀಕ್ಷ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ. ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ” ಎಂದು ಆರೋಪಿಸಿದರು.
“ದಿನಗೂಲಿ ಆಧಾರದ ಮೇಲೆ ನಮಗೆ ಪ್ರತಿದಿನವೂ ಕೆಲಸ ಒದಗಿದಬೇಕು. ಎಲ್ಲ ಬೆಳೆ ಸಮೀಕ್ಷದಾರರಿಗೆ ರೇನ್ ಕೋಟ್ ನೀಡಬೇಕು. ಈ ಹಿಂದೆ ನಾವು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೂ ಈ ಕುರಿತು ಮಾಹಿತಿ ತಿಳಿಸಿದ್ದೇವೆ. ಆದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ತಾವಾದರೂ ನಮ್ಮ ಬಗ್ಗೆ ಗಮನ ಹರಿಸಬೇಕು” ಎಂದು ಮನವಿ ಮಾಡಿದರು.
“ನಮಗೆ ಒಂದು ವರ್ಷದಲ್ಲಿ ಮೂರು ಬಾರಿ ಮಾತ್ರ ಕೆಲಸ ನೀಡಲಾಗುತ್ತದೆ ಕಾರಣ ನಮಗೆ ಖಾಯಂ ಕೆಲಸ ಕೊಡಿಸಬೇಕು ಇಲ್ಲವಾದಲ್ಲಿ ಪ್ರತಿ ತಿಂಗಳು ಐದ ರಿಂದ ಹತ್ತು ಸಾವಿರ ಸಹಾಯ ಧನ ನೀಡಬೇಕು.ಒಬ್ಬ ಪಿ.ಆರ್ಗೆ ಹತ್ತುಲಕ್ಷ ಜೀವವಿಮೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಬೇಡ್ಕರ್ ಭವನ ನಿರ್ಮಾಣದ ನಿವೇಶನ ಅತಿಕ್ರಮಣ; ಆರೋಪ
ನಾಗರಾಜು ಮದಕಲ್, ಮೊಗಲಪ್ಪ ರಾಘಪೂರ, ಬಸಪ್ಪ ಮಲ್ಕಪಲ್ಲಿ, ಯಲೇಶ ದುಗನೂರ, ರವಿಕುಮಾರ ಕಾಚೂರ್, ನರೇಶ ಕುರುಕುಂಟಾ, ನರಸಿಂಗಹ ಗುಂಡೆಪಲ್ಲಿ, ರಾಮಕೃಷ್ಣ ಸೀಲಾರಕೋಟ್, ರವಿಕುಮಾರ ಪಾಕಲ್, ನಿಂಗಪ್ಪ ಹಂದರಕಿ, ನಾಗಪ್ಪ ಹಂದರಕಿ ಇದರು.





