ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ಬ್ರಾಹ್ಮಣ್ಯವಾದಿ ಆಡಳಿತವನ್ನು ಮುಂದುವರಿಸಲು ಆರ್ಎಸ್ಎಸ್ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ತಾಲೂಕು ಸಮಿತಿ, ಜೇವರ್ಗಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ತಾಲೂಕು ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಸಮಿತಿ ಸಂಚಾಲಕ ಶ್ರೀಹರಿ ಕರಕಿಹಳ್ಳಿ ಅವರು, “1950ರ ದಶಕದಲ್ಲಿಯೇ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಆರ್.ಎಸ್.ಎಸ್ ಮತ್ತು ವಿಶ್ವ ಹಿಂದೂ ಮಹಾಸಭೆಯಂತಹ ಸಂಘಟನೆಗಳ ವಿರುದ್ಧ ಎಚ್ಚರಿಕೆ ನೀಡಿದ್ದರು. ಸಂವಿಧಾನ ಜಾರಿಯಾದ ಬಳಿಕ ಆರ್.ಎಸ್.ಎಸ್ ತನ್ನ ಪತ್ರಿಕೆಯಲ್ಲಿ ಸಂವಿಧಾನದ ವಿರುದ್ಧ ಟೀಕೆ ಮಾಡಿತ್ತು. ಇದರಿಂದಲೇ ಮನುವಾದಿ ಮನೋಭಾವವು ಬಯಲಾಗುತ್ತದೆ,” ಎಂದು ಹೇಳಿದರು.
ಅವರು ಮುಂದುವರೆದು, “ಹಿಂದೂ ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಬಾಬಾ ಸಾಹೇಬ ಅಂಬೇಡ್ಕರ್ ಹೋರಾಡುತ್ತಿದ್ದಾಗ, ಆರ್.ಎಸ್.ಎಸ್ ಹಿಂದೂ ಕೋಡ್ ಬಿಲ್ ಪ್ರತಿಯನ್ನು ಸುಟ್ಟುಹಾಕಿ ವಿರೋಧಿಸಿತ್ತು. ಇತ್ತಿಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಗವಾಯಿಯವರ ಮೇಲೆ ಶೂ ಎಸೆದ ಘಟನೆ ಕೂಡಾ ಅದೇ ಮನೋಭಾವದ ಪ್ರತಿಫಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಮನುವಾದಿ ಶಕ್ತಿಗಳು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಬೆದರಿಸುತ್ತಿವೆ. ಇಂತಹ ಅಂಶಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ ? ಕಲಬುರಗಿ | ಚಿತ್ತಾಪುರ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ವಿಚಾರಣೆ ನ.13ಕ್ಕೆ ಮುಂದೂಡಿಕೆ
ಮನವಿಯಲ್ಲಿ ಮುಖ್ಯ ಬೇಡಿಕೆಗಳಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರು ಇಡುವುದು, ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಪ್ರಕಾರ ಜೀವಾವಧಿ ಶಿಕ್ಷೆ ನೀಡುವುದು, ಹಾಗೂ ಚಿತ್ತಾಪುರದಲ್ಲಿ ಅನುಮತಿ ಇಲ್ಲದೆ ಪಥಸಂಚಲನ ನಡೆಸಿದರೆ ಆರ್.ಎಸ್.ಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿದ್ದು ಕೆರೂರ, ಜೈಭೀಮ ನರಿಬೋಳ, ರೆವಣಸಿದ್ದಪ್ಪ ಬಿರಾಳ, ಬಸವರಾಜ ವರ್ಚನಳ್ಳಿ, ಭೀರಲಿಂಗ ಕೆಲ್ಲೂರ, ಯಶವಂತ ಬಡಿಗೇರ, ಶ್ರೀಮಂತ ಕಿಲೇದಾರ, ಶರಣಬಸಪ್ಪ ಲಖಣಾಪೂರ, ಲಕ್ಷ್ಮಣ, ಬಲರಾಮ ಹರನೂರ, ಸಾಯಬಣ್ಣ ಹರನಾಳ, ಅಮೋಘ ಸಿದ್ದ, ರವಿ ಕುರಳಗೇರಾ, ಭೀಮರಾಯ ಹರನಾಳ, ಶೇಖರ ಹಿಪ್ಪರಗಿ, ಚಂದ್ರಕಾಂತ ರದ್ದೆವಾಡಗಿ, ಸಂತೋಷ ಹಿಪ್ಪರಗಿ, ಗೌತಮ ಹೊಸಮನಿ, ಹಣಮಂತ ಎಸ್ ಅಂಬರಖೇಡ, ಹಣಮಂತ ಅಂಬರಖೇಡ, ಬಾಬು ಹಿಪ್ಪರಗಿ ಇನ್ನಿತರರು ಭಾಗವಹಿಸಿದರು.





