ಆಳಂದ ತಾಲ್ಲೂಕಿನ ಶುಕ್ರವಾಡಿ ನಿವಾಸಿ ದಯಾನಂದ ಲಾಡಂತಿ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿಗೆ ಕಲಬುರಗಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ₹10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೆ ಒಳಗಾದವರು ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ಗ್ರಾಮದ ಸುರೇಶ ಜಾಧವ (42), ಕಲಬುರಗಿಯ ನೀಲಕಂಠ ಮಾಮನಿ (42), ಕೃಷ್ಣ ಜಮಾದಾರ (28), ಶುಕ್ರವಾಡಿಯ ಸುನೀಲ ಲಾಡಂತಿ (35), ಕಲಬುರಗಿಯ ಅಂಬಿಕಾ ಕೊಡೆಕಲ್ (41) ಹಾಗೂ ಆಳಂದ ತಾಲ್ಲೂಕಿನ ಬಟ್ಟರಗಿ ಗ್ರಾಮದ ಸಂತೋಷ ತಳವಾರ (40) ಎಂದು ಗುರುತಿಸಲಾಗಿದೆ.
ಮೃತ ದಯಾನಂದ ಲಾಡಂತಿ ಹಾಗೂ ಸುನೀಲ ಲಾಡಂತಿ ಕುಟುಂಬಗಳ ನಡುವೆ ನಡೆದಿದ್ದ ಪಾರ್ಟಿಯೊಂದರಲ್ಲಿ ಗಲಾಟೆಯಿಂದ ಉಂಟಾದ ವೈಮನಸ್ಯವೇ ಈ ಕೊಲೆಗೆ ಕಾರಣವೆಂದು ತನಿಖೆಯಿಂದ ಬಹಿರಂಗವಾಗಿದೆ. ನಂತರ ದಯಾನಂದನ ಹತ್ಯೆಗೆ ಸುನೀಲ ಲಾಡಂತಿ 3 ಲಕ್ಷ ರೂ. ಸುಪಾರಿ ನೀಡಿದ್ದಾನೆಂದು ಪೊಲೀಸರು ತಿಳಿಸಿದರು.
ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸಿಪಿ ಗೀತಾ ಬೇನಾಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಪ್ರತ್ಯೇಕ ರಾಜ್ಯಕ್ಕಾಗಿ ಧ್ವಜಾರೋಹಣಕ್ಕೆ ಯತ್ನಿ: ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
ಪ್ರಕರಣ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ ಬಾಡಗಂಡಿ, ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ.10 ಸಾವಿರ ದಂಡ ವಿಧಿಸುವಂತೆ ತೀರ್ಪು ನೀಡಿದರು.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ. ಕಿರಣಗಿ ವಾದ ಮಂಡಿಸಿದರು.





