ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಸರ್ಕಾರ ದೇಶದ್ರೋಹದ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಆದರ್ಶ್ ಗ್ರಾಮ ಸಮಿತಿ ಯಾಳವಾರ ಹಾಗೂ ಟಿಪ್ಪು ಸುಲ್ತಾನ್ ಸಮಿತಿಯ ಪದಾಧಿಕಾರಿಗಳು ಜೇವರ್ಗಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಸಿಜೆಐ ಮೇಲೆ ಶೂ ಎಸೆದ ಘಟನೆ ಅತ್ಯಂತ ಖಂಡನೀಯವಾದದ್ದು. ಈ ಕೃತ್ಯವು ಕೇವಲ ವ್ಯಕ್ತಿಯ ವಿರುದ್ಧವಲ್ಲದೇ, ಇಡೀ ದೇಶದ ನ್ಯಾಯಾಂಗ ವ್ಯವಸ್ಥೆಯ ಗೌರವ, ಮತ್ತು ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ. ಡಾ ಬಿ.ಆರ್.ಅಂಬೇಡ್ಕರ್ ರವರು ನೀಡಿದ ಸಂವಿಧಾನವು ಪ್ರತಿಯೊಬ್ಬರಿಗೂ ನ್ಯಾಯಾಂಗದ ಮೇಲಿನ ನಂಬಿಕೆ ಮತ್ತು ಗೌರವವನ್ನು ಉಳಿಸಿಕೊಳ್ಳುವಂತೆ ತಿಳಿಸುತ್ತದೆ. ಇಂತಹ ಕೃತ್ಯಗಳು ದೇಶದ ಕಾನೂನು ಮತ್ತು ಸಂವಿಧಾನಾತ್ಮಕ ವ್ಯವಸ್ಥೆಯ ಮೇಲೆ ಜನರ ನಂಬಿಕೆಯನ್ನು ಕುಂದಿಸುತ್ತವೆ. ಈ ಕೃತ್ಯ ಎಸಗಿದ ವಕೀಲನ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: ಕಲಬುರಗಿ | ಉಗ್ರಪ್ಪನವರ ಹೇಳಿಕೆಯಿಂದ ಕುರುಬ ಸಮುದಾಯಕ್ಕೆ ಅಪಮಾನವಾಗಿದೆ: ಕೌಲಗಿ
ಈ ಸಂದರ್ಭದಲ್ಲಿ ಇಬ್ರಾಹಿಂ ಪಟೇಲ್, ರಾಜಾ ಪಟೇಲ್, ಬಿ.ಪಾಟೀಲ್, ಶಾಂತಯ್ಯ ಗುತ್ತೇದಾರ್, ಸಿದ್ರಾಮ ಪೂಜಾರಿ, ಎ.ಯಾಳವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





