ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ರೈತರ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ ರೈತರು ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ನ್ಯಾಯ ದೊರಕಿಸಿ ಕೊಡಬೇಕು ಎಂದು ಎದ್ದೇಳು ಕರ್ನಾಟಕ ಕಲಬುರಗಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ದೇವನಹಳ್ಳಿಯ ಭೂ ವಿವಾದ ಇದೀಗ ರಾಜ್ಯ ರಾಜಕೀಯದ ದಿಕ್ಕು ತಿರುಗಿಸುತ್ತಿರುವ ಇತ್ತೀಚಿನ ಬೆಳವಣಿಗೆಯಾಗಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಳ್ಳಲಿರುವ ತೀರ್ಮಾನಕ್ಕೆ ಇಡೀ ರಾಜ್ಯದ ಕಣ್ಣುಗಳು ನೆಟ್ಟಿವೆ. ಚನ್ನರಾಯಪಟ್ಟಣ ಸೇರಿದಂತೆ 13 ಗ್ರಾಮಗಳ ಭೂಮಿಯನ್ನು ಕೈಕೊಳ್ಳುವ ನಿರ್ಧಾರ ವಿರುದ್ಧ ರೈತರು ಹಾಗೂ ನಾಗರಿಕ ಚಳವಳಿಗಳು ಒಟ್ಟಾಗಿ ಬಿರುಸಾದ ವಿರೋಧ ವ್ಯಕ್ತಪಡಿಸುತ್ತಿವೆ. ಇದಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಜಿಲ್ಲಾ ಸಂಚಾಲಕರು ರಾಜೇಂದ್ರ ರಾಜವಾಳ, ಅಬ್ದುಲ್ ಖಾದರ್, ಲಕ್ಷ್ಮಣ್ ಮಂಡಲಗೇರಾ ಅವರು ಜಂಟಿ ಪ್ರಕಟಣೆ ಮೂಲಕ ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ರೈತರ ಪರ ನಿಂತು ಭೂಹಕ್ಕು ರಕ್ಷಿಸಬೇಕಿದೆ. ಇಲ್ಲದಿದ್ದರೆ ನಂಬಿಕೆ ಪತನವಾಗುವುದು ಅನಿವಾರ್ಯ. ಇದೇ ಭೂ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ನೋಟೀಸ್ ಮತ್ತು ಇದೀಗ ಕಾಂಗ್ರೆಸ್ ಸರ್ಕಾರ ಅದೇ ಮಾರ್ಗವನ್ನು ಅನುಸರಿಸುತ್ತಿರುವುದು ಜನರಲ್ಲಿ ಗೊಂದಲ ಮತ್ತು ಆಕ್ರೋಶ ಉಂಟುಮಾಡಿದೆ. ಅಧಿಕಾರದಿಂದ ದೂರವಿದ್ದಾಗ ರೈತರ ಪರ ನಿಂತಿದ್ದ ಪಕ್ಷ ಈಗ ಕಂಪನಿಗಳ ಪರವಾಗಿ ನಿಂತಿರುವುದು ಖಂಡನೀಯ ಎಂದರು.
‘ರೈತಪಕ್ಷೀಯ ತೀರ್ಮಾನ ಮಾಡಿ ಜನನಂಬಿಕೆ ಉಳಿಸಬೇಕು. ಲಾಭದಾಳುಗಳ ಒತ್ತಡಕ್ಕೆ ಮಣಿದು ನೈತಿಕ ಪತನವನ್ನೇ ಆಹ್ವಾನಿಸುವುದು ಸರ್ಕಾರದ ಮುಂದೆ ಇರುವ ಎರಡು ನಿರ್ಧಾರಗಳು. ಈ ತೀರ್ಮಾನವು ಕೇವಲ ದೇವನಹಳ್ಳಿ ಮಟ್ಟಿಗೆ ಸೀಮಿತವಲ್ಲ; ಇಡೀ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧದ ಭಾರಿ ಪ್ರತಿಕ್ರಿಯೆಗೆ ಕಾರಣವಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.
‘ಸಿದ್ದರಾಮಯ್ಯನವರು ರೈತಪಕ್ಷೀಯ ತೀರ್ಮಾನ ಕೈಗೊಂಡರೆ, ಅದು ಕೇವಲ ಹೋರಾಟಗಾರರಿಗೆ ಸಿಹಿ ಸುದ್ದಿ ಮಾತ್ರವಲ್ಲ;
ಜನತೆಯ ವಿಶ್ವಾಸಕ್ಕೆ ತಕ್ಕ ಪ್ರತಿ ಉತ್ತರವೂ ಆಗುತ್ತದೆ. ಇಲ್ಲದಿದ್ದರೆ ಈ ನಿರ್ಧಾರವು ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕೂ ದೊಡ್ಡ
ಧಕ್ಕೆಯಾಗಿ ಪರಿಣಮಿಸಲಿದೆ’ ಎಂದರು.





