ಭೀಮಾ ನದಿಯ ಪ್ರವಾಹದಿಂದ ಚಿತ್ತಾಪುರ ತಾಲ್ಲೂಕಿನ ಕಡಬೂರು ಮತ್ತು ಕುಂದನೂರ ಗ್ರಾಮಗಳು ತೀವ್ರ ಹಾನಿಗೊಳಗಾದವು. ಮನೆಗಳು, ಕೃಷಿ ಜಮೀನುಗಳು ಮತ್ತು ಜೀವನೋಪಾಯ ನಷ್ಟಗೊಂಡು ಸಾವಿರಾರು ಜನರು ತಾತ್ಕಾಲಿಕ ಆಶ್ರಯಗಳಲ್ಲಿ ಬದುಕುತ್ತಿದ್ದಾರೆ. ಪ್ರವಾಹದ ನಂತರ ಉಂಟಾದ ಆರೋಗ್ಯ ತೊಂದರೆ, ಮಾಲಿನ್ಯ ಮತ್ತು ಸೋಂಕು ಹರಡುವ ಅಪಾಯವನ್ನು ಮನಗಂಡು ಮೆಡಿಕಲ್ ಸರ್ವಿಸ್ ಸೆಂಟರ್ (ಎಮ್ಎಸ್ಸಿ), ವೈಟ್ ಸ್ಪಾರ್ಕ್ಸ್, ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಶನಿವಾರ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರವು ಎರಡು ಗ್ರಾಮಗಳಲ್ಲಿ ನಡೆದಿದ್ದು, ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಮಲೇರಿಯಾ, ಟೈಫಾಯ್ಡ್, ಚರ್ಮರೋಗ, ಕಾಲರಾ ಮುಂತಾದ ರೋಗಗಳ ತಡೆಗೆ ಆರೋಗ್ಯ ಸೇವೆ ಪಡೆದರು. ಉಚಿತ ಔಷಧಿ, ಪರೀಕ್ಷೆಗಳು ಮತ್ತು ಆರೋಗ್ಯ ಸಲಹೆಗಳು ಪಡೆದುಕೊಂಡಿದ್ದಾರೆ.

ಶಿಬಿರದಲ್ಲಿ ಡಾ.ವಸುದೇಂದ್ರ ಎನ್. (ನೇತ್ರ ತಜ್ಞ, ದಾವಣಗೆರೆ), ಡಾ. ದಿವ್ಯಾ ಪಿ.(ಬಳ್ಳಾರಿ), ಡಾ. ವರ್ಷಾ ಆರ್ ಬಿ (ದಾವಣಗೆರೆ), ಡಾ. ಸೀಮಾ ದೇಶಪಾಂಡೆ (ಕಲಬುರಗಿ), ಡಾ. ಕರುಣಾ ಕಾಂಬಳೆ (ಆಯುಷ್ ವೈದ್ಯಾಧಿಕಾರಿ, ವಾಡಿ) ಮತ್ತು ಡಾ. ಮಂಜುಳಾ ಎಸ್. ಬೂಳ ಇದ್ದರು. ಆರೋಗ್ಯ ನಿರೀಕ್ಷಕ ದೇವೇಂದ್ರಪ್ಪ, ಫಾರ್ಮಸಿಸ್ಟ್ ಉಪೇಂದ್ರ ಎನ್ ಡಿ ಮತ್ತು ಸಹಾಯಕ ಸಿಬ್ಬಂದಿಯವರು ಶಿಬಿರದ ಕಾರ್ಯಾಚರಣೆಗೆ ನೆರವೇರಿಸಿದರು
ಎಐಕೆಕೆಎಮ್ಎಸ್ ರಾಜ್ಯ ಅಧ್ಯಕ್ಷ ಎಂ. ಶಶಿಧರ್ ಮಾತನಾಡಿ, ‘ಪ್ರವಾಹದಿಂದ ಹಾನಿಗೊಳಗಾದ ಗ್ರಾಮಸ್ಥರ ಆರೋಗ್ಯವನ್ನು ರಕ್ಷಿಸುವುದು ನಮ್ಮ ಮುಖ್ಯ ಗುರಿ. ಈ ಶಿಬಿರವು ತುರ್ತು ಸೇವೆಗಳನ್ನು ಒದಗಿಸುವ ಮೂಲಕ ಜನರ ಬದುಕು ಉಳಿಸಲು ಸಹಾಯವಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಹಕಾರ ವಹಿಸಬೇಕಾಗಿದೆ’ ಎಂದರು.
ಇದನ್ನು ಓದಿದ್ದೀರಾ? ಕಲಬುರಗಿ | ಆರ್ಎಸ್ಎಸ್ ಭಗವಾಧ್ವಜ, ಬ್ಯಾನರ್ ಹಾಗೂ ಕಟೌಟ್ ತೆರವು ; ನಗರದಲ್ಲಿ ಸಂಚಲನ
ಶಿಬಿರದಲ್ಲಿ ಕಡಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಸುಮಿಯಾ ಹಾಗೂ ಸಂಘಟಕರು ವೀರಭದ್ರಪ್ಪ ಆರ್.ಕೆ., ಶರಣು ಹೇರೂರ, ಗೌತಮ್ ಪರ್ತೂರ್ಕರ್, ವೆಂಕಟೇಶ ದೇವದುರ್ಗ, ವಿಠ್ಠಲ್ ರಾಠೋಡ್, ರಾಜು ವಡೆಯರ್, ಗೋದಾವರಿ ಕಾಂಬಳೆ, ಗೋವಿಂದ ಯಳವಾರ, ಶ್ರೀಶೈಲ್ ಕಡಬೂರ, ಸಿದ್ದಾರ್ಥ ತಿಪ್ಪನೂರ, ಸಂಪತ್, ಗೋವಿಂದ ಮತ್ತಿತರರು ಉಪಸ್ಥಿತರಿದ್ದರು.





