ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯದಾದ್ಯಂತ ಆಕ್ರೋಶ ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (ಎನ್ಎಫ್ಐಡಬ್ಲ್ಯೂ) ಕಲಬುರಗಿ ಜಿಲ್ಲಾ ಸಮಿತಿಯವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಿದರು.
ಭಾರತೀಯ ಮಹಿಳಾ ಒಕ್ಕೂಟ ಜಿಲ್ಲಾಧ್ಯಕ್ಷೆ ಪದ್ಮಾವತಿ ಎನ್. ಮಾಲಿಪಾಟೀಲ ಮಾತನಾಡಿ, “ಕಲಬುರಗಿಯ ತಾಜ್ ಶಹಜಾನಪುರ ಮೂಲದ ಅಲೆಮಾರಿ ಬುಡಕಟ್ಟು ಕುಟುಂಬವು ಮೈಸೂರಿನ ದಸರಾ ಉತ್ಸವದ ವೇಳೆ ಬಲೂನ್ ಮಾರಾಟ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟೆಂಟ್ನಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಮಾನವೀಯತೆಯ ಮೇಲಿನ ಕಳಂಕ” ಎಂದು ಖಂಡಿಸಿದರು.

“ಆರೋಪಿಯನ್ನು ಮೈಸೂರು ನಗರ ಪೊಲೀಸರು ಶೀಘ್ರ ಬಂಧಿಸಿದ್ದಾರೆ. ಆದರೆ, ಬಾಲಕಿಯ ಮೃತ ದೇಹವನ್ನು ಕಲಬುರಗಿಗೆ ತರಲು ಹಾಗೂ ಅಂತ್ಯಕ್ರಿಯೆಗೆ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ನೀಡದಿರುವುದು ಖೇದಕರ” ಎಂದು ಅವರು ಹೇಳಿದರು.
ʼಸರ್ಕಾರವು ಮೃತ ಬಾಲಕಿ ಕುಟುಂಬಕ್ಕೆ ತಕ್ಷಣದ ಪರಿಹಾರ ನೀಡಬೇಕು, ಉಳಿದ ಮಕ್ಕಳಿಗೆ ಸುರಕ್ಷತೆ ಹಾಗೂ ಶಿಕ್ಷಣದ ವ್ಯವಸ್ಥೆ ಮಾಡಬೇಕು. ಪ್ರಕರಣವನ್ನು ಪೋಷಕರ ಅನುಕೂಲಕ್ಕಾಗಿ ಕಲಬುರಗಿ ಜಿಲ್ಲೆಗೆ ವರ್ಗಾಯಿಸಬೇಕು. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿ, ಟೆಂಟ್ಗಳಲ್ಲಿ ವಾಸಿಸುತ್ತಿರುವ ಇತರ ಬುಡಕಟ್ಟು ಕುಟುಂಬಗಳಿಗೆ ರಕ್ಷಣಾತ್ಮಕ ವಸತಿ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾಶ್ರೀ, ಆಕಾಶ ಎಸ್ ಪಾರಚಾ, ಜಗದೇವಿ ಆರ್ ಹೆಗಡೆ, ಪಾತಿಮಾ ಶೇಖ, ಶಾಹೀನ ಸುಲ್ತಾನಾ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು.





