ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ತತ್ತರಿಸಿಸುವ ಕಲಬುರಗಿ ಜಿಲ್ಲೆಯನ್ನು ಹಸಿ ಬರ ಜಿಲ್ಲೆ ಎಂದು ಘೋಷಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ 28ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ಕರೆ ನೀಡಿದ ಕಲಬುರಗಿ ಬಂದ್ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಸೋಮವಾರ ಬೆಳಿಗ್ಗೆಯಿಂದಲೇ ವಿವಿಧ ಸಂಘಟನೆಯವರು ರಸ್ತೆಗೆ ಇಳಿದಿದ್ದರು. ಇತ್ತ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಯಿಂದ ಬೆಳಗ್ಗೆ 6 ಗಂಟೆಗೂ ಮುನ್ನ ಸಾರಿಗೆ ಬಸ್ಗಳು ನಿಗದಿತ ಜಿಲ್ಲೆಗಳತ್ತ ಹೊರಟವು. ನಗರದ ವಿವಿಧ ಭಾಗದಲ್ಲಿ ಅಲ್ಲಲ್ಲಿ ಆಟೋರಿಕ್ಷಾಗಳ ಓಡಾಟ ಕಂಡುಬಂದಿತಾದರೂ ಕೇಂದ್ರ ಬಸ್ ನಿಲ್ದಾಣ, ರಾಮಮಂದಿರ ಮತ್ತು ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸುತ್ತಾ ಸರ್ಕಾರದ ವಿರುದ್ಧ ಪ್ರತಿಭಟನಾಕರರು ಘೋಷಣೆ ಕೂಗಿದರು. ಪ್ರತಿಭಟನಾಕರರು ಘೋಷಣೆ ಕೂಗುತ್ತಿದ್ದಂತೆ ಸ್ವಯಂಪೇರಿತವಾಗಿ ಅಂಗಡಿ, ಹೋಟೆಲ್ಗಳನ್ನು ಮಾಲೀಕರು ಬಂದ್ ಮಾಡಿಕೊಂಡರು.

ಇದನ್ನೂ ಓದಿ: ಕಲಬುರಗಿ| ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಾಥಾ
ಮಳೆಯಿಂದ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಜಿಲ್ಲೆಯನ್ನು ಹಸಿ ಬರಗಾಲವೆಂದು ಘೋಷಿಸಿ ರೈತ ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲಾ-ಕಾಲೇಜಿನ ಶುಲ್ಕ ಮನ್ನಾ ಮಾಡಬೇಕು, ರೈತ ಸಾಲ ಮನ್ನಾ, ಹಿಂಗಾರು ಬಿತ್ತನೆ ಬೀಜ ರಸಗೊಬ್ಬರ, ಉಚಿತವಾಗಿ ನೀಡುವ ಜತಗೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪ್ರತಿ ಎಕರೆಗೆ ರೂ. 25 ಸಾವಿರ ಪರಿಹಾರ ನೀಡಬೇಕು. ಕಲಬುರಗಿ ಜಗತ್ ವೃತ್ತದಲ್ಲಿ ಕಳೆದ 13 ದಿನಗಳಿಂದ ಧರಣಿ ನಡೆಸಿದರೂ ಜಿಲ್ಲೆಯ ಯಾವುದೇ ಒಬ್ಬ ಜನಪ್ರತಿನಿಧಿಗಳಾಗಲಿ, ಜಿಲ್ಲಾಡಳಿತವಾಗಲಿ ಬಂದು ರೈತರ ಸಂಕಷ್ಟವನ್ನು ಕೇಳುತ್ತಿಲ್ಲ. ರಾಜ್ಯದಲ್ಲಿ ಇರುವುದು ಇದು ರೈತ ವಿರೋಧಿ ಸರ್ಕಾರ’ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ನಿಂದ ನಗರದಲ್ಲಿ ಸಾರಿಗೆ ಬಸ್ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಬಂದ್ ಹಿನ್ನೆಲೆ ಹಲವು ಶಿಕ್ಷಣ ಸಂಸ್ಥೆಗಳು ಶಾಲೆಗಳಿಗೆ ರಜೆ ಘೋಷಿಸಿವೆ.

ಬಂದ್ನಿಂದ ಕೇಂದ್ರ ಬಸ್ ನಿಲ್ದಾಣ ಬಸ್ಗಳು ಹಾಗೂ ಪ್ರಯಾಣಿಕರು ಇಲ್ಲದೇ ಬಿಕೊ ಎಂದಿತು. ದೂರದ ಊರುಗಳಿಗೆ ತೆರಳಲು ಬಂದಿದ್ದ ಹಲವು ಪ್ರಯಾಣಿಕರು ಬಸ್ ಇಲ್ಲದೇ ಪರದಾಡಿದರು. ರಿಂಗ್ ರಸ್ತೆಗಳಲ್ಲಿಯೂ ಬೆಳಗಿನ ಆರಂಭದಲ್ಲಿ ಪ್ರತಿಭಟನಾಕಾರರು ಅಲ್ಲಲ್ಲಿ ಕಂಡುಬಂದಿದ್ದರಿಂದ ಸಾರಿಗೆ ಸಂಸ್ಥೆಯ ಬಸ್ಗಳು ರಾಮಮಂದಿರ, ಖರ್ಗೆ ಪೆಟ್ರೋಲ್ ಬಂಕ್, ರಾಜಾಪುರ-ಶಹಾಬಾದ್ ಕ್ರಾಸ್, ಹುಮನಾಬಾದ್ ರಿಂಗ್ ರೋಡ್, ಆಳಂದ ಚೆಕ್ಪೋಸ್ಟ್ ಹಾಗೂ ಕಲಬುರಗಿಯ ಅಫಜಲಪುರ ಕ್ರಾಸ್ಗಳವರೆಗೆ ಅನ್ಯ ಜಿಲ್ಲೆಗಳ ಸಾರಿಗೆ ಬಸ್ಗಳು ಬಂದು ಅಲ್ಲಿಂದಲೇ ಹೊರವಲಯದ ರಸ್ತೆಗಳ ಮೂಲಕ ಸಂಚರಿಸಿದವು.
ಈ ಮಧ್ಯೆ, ಅಳಂದ, ಅಫಜಲಪುರ, ಜೇವರ್ಗಿ, ಸೇಡಂ, ಶಹಾಬಾದ್, ಹುಮನಾಬಾದ್ ಕಡೆಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಅನಿವಾರ್ಯವಾಗಿ ಕ್ರ್ಯೂಸರ್ ಜೀಪ್ಗಳನ್ನು ಆಶ್ರಯಿಸಬೇಕಾಯಿತು.
ಇದನ್ನೂ ಓದಿ: ಕಲಬುರಗಿ | ಸರ್ಕಾರಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಭರ್ತಿಗಾಗಿ ಬೃಹತ್ ಪ್ರತಿಭಟನೆ
ಇನ್ನೂ ಬಂದ್ ಕುರಿತು ಮಾಹಿತಿ ಇಲ್ಲದೇ ದೂರದ ಊರುಗಳಿಗೆ ಪ್ರಯಾಣಿಸಲು ಬಂದಿದ್ದ ಪ್ರಯಾಣಿಕರು ಬಸ್ಗಳಿಲ್ಲದ ಕಾರಣಕ್ಕಾಗಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ದಾರಿ ನೋಡುವ ಪರಸ್ಥಿತಿ ನಿರ್ಮಾಣವಾಗಿತ್ತು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಸಮಿತಿಯ ಭಿಮಾಶಂಕರ ಮಾಡಿಯಾಳ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಮುಖಂಡ ಭೀಮಶೆಟ್ಟಿ ಯಂಪಳ್ಳಿ, ನವ ಕರ್ನಾಟಕ ರೈತ ಸಂಘ ರಾಜ್ಯ ಸಮಿತಿಯ ದಯಾನಂದ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ನಾಗೇಂದಪ್ಪ ಥಂಬೆ, ಕರ್ನಾಟಕ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ ಬಣ) ಮಲ್ಲಿನಾಥ ಪಾಟೀಲ್, ಕರ್ನಾಟಕ ರಾಜ್ಯ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷೆ ಪದ್ಮನಿ ಕಿರಣಗಿ, ಕರ್ನಾಟಕ ರಾಜ್ಯ ರೈತ ಸಂಘ (ಕುರುಬೂರು ಶಾಂತಕುಮಾರ ಬಣ) ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ರೈತ, ದಲಿತ, ಕನ್ನಡ, ಕಾರ್ಮಿಕ ಮಹಿಳಾ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





