ವಿದ್ಯುತ್ ಖಾಸಗೀಕರಣ, ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ, ರಾತ್ರಿ ವೇಳೆ 3 ಫೇಸ್ ವಿದ್ಯುತ್ ಕಡಿತ, ಟ್ರಾನ್ಸ್ಫಾರ್ಮರ್ ದುರಸ್ತಿ ವಿಳಂಬ ಹಾಗೂ ಹೊಲಗಳಲ್ಲಿ ಜೋತು ಬಿದ್ದ ತಂತಿಗಳ ಸಮಸ್ಯೆ ಸೇರಿದಂತೆ ಅನೇಕ ವಿದ್ಯುತ್ ಸಂಬಂಧಿತ ತೊಂದರೆಗಳ ವಿರುದ್ಧ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ಸೋಮವಾರ ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ ಎದುರುಗಡೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಕೃಷಿ ಈಗಾಗಲೇ ನಷ್ಟದ ಬಲೆಗೆ ಸಿಲುಕಿದೆ. ಇಂಧನ, ಗೊಬ್ಬರ, ಬೀಜ, ಕಾರ್ಮಿಕ ವೆಚ್ಚ, ಯಂತ್ರೋಪಕರಣಗಳ ದರ ಏರಿಕೆಯಾಗಿರುವ ಸಂದರ್ಭದಲ್ಲಿ ರೈತರು ಸಾಲ ಸಂಕಟದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಿ, ಸಬ್ಸಿಡಿ ಕಡಿತ ಮಾಡಿ, ವಿದ್ಯುತ್ ಖಾಸಗೀಕರಣದ ದಾರಿಗೆ ಒತ್ತುವರಿ ಹೇರುವ ಕ್ರಮಗಳು ರೈತರ ಮೇಲೆ ಆತಂಕದ ನೆರಳು ಹರಿಸುತ್ತಿವೆ,’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ (ತಿದ್ದುಪಡಿ) ಮಸೂದೆ 2022ರ ಬಗ್ಗೆ ಮಾತನಾಡಿದ ಅವರು, ‘ಈ ಮಸೂದೆ ರೈತರಿಗೆ ಸಂಪೂರ್ಣ ವಿರೋಧಿ. ಸೆಕ್ಷನ್ 65 ಮತ್ತು 66 ಉಚಿತ ಹಾಗೂ ಸಬ್ಸಿಡಿ ವಿದ್ಯುತ್ನ್ನು ಕಡಿಮೆ ಮಾಡಲು ದಾರಿ ಮಾಡಿಕೊಡುತ್ತದೆ. ಇನ್ನು ಸಂಸತ್ತಿನಲ್ಲಿ ಅಂಗೀಕಾರವಾಗದೇ ಇರುವ ಮಸೂದೆಯನ್ನು ರಾಜ್ಯ ಮಟ್ಟದಲ್ಲಿ ಜಾರಿಗೆ ತರಲು ಪ್ರಯತ್ನಿಸುವುದು ಕಾನೂನಿನ ಆಳ್ವಿಕೆಗೆ ವಿರುದ್ಧವಾಗಿದೆ’ ಎಂದು ಆರೋಪಿಸಿದರು.
ʼಪಂಪ್ಸೆಟ್ಗಳಿಗೆ ಆಧಾರ್ ಜೋಡಿಕೆ ಮತ್ತು ನೇರ ನಗದು ವರ್ಗಾವಣೆ (ಡಿಬಿಟಿ) ವಿಧಾನಕ್ಕೂ ಅವರು ತೀವ್ರ ವಿರೋಧವಿದೆ. ಅಡುಗೆ ಅನಿಲ ಸಬ್ಸಿಡಿ ಸೇರಿದಂತೆ ಜನ ಅನುಭವಿಸಿದ ತೊಂದರೆ ಮತ್ತೆ ಕೃಷಿಯಲ್ಲಿ ಪುನರಾಗಬಾರದು. ರಾಜ್ಯ ಸರ್ಕಾರದ ಆದಾಯ ನಷ್ಟವನ್ನು ಪೂರೈಸಲು ಡಿಬಿಟಿ ಹೊರೆ ರೈತರ ಮೇಲೆ ಹಾಕುವುದು ಅನ್ಯಾಯವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಹತ್ತು ಹೆಚ್ಪಿ ವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಮುಂದುವರೆಯಬೇಕು ಮತ್ತು ಗುಣಮಟ್ಟದ ಹಗಲು ವಿದ್ಯುತ್ ಪೂರೈಕೆಗೆ ಜೆಸ್ಕಾಂ ಬದ್ಧವಾಗಿರಬೇಕುʼ ಎಂದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು, ರಾತ್ರಿ ಪೂರೈಕೆಯನ್ನು ನಿಲ್ಲಿಸಿ ಹಗಲು ಸಮಯದಲ್ಲಿ ಪಂಪ್ಸೆಟ್ಗಳಿಗೆ ನಿರಂತರ 3 ಫೇಸ್ ವಿದ್ಯುತ್ ನೀಡಬೇಕು. ವಿದ್ಯುತ್ ವ್ಯತ್ಯಯದಿಂದ ಕೃಷಿ ಕಾರ್ಯಕ್ಕೆ ತೊಂದರೆ ಉಂಟಾಗಿದೆ. ಪಂಪ್ಸೆಟ್ಗಳು ಅರ್ಧಕ್ಕೆ ನಿಂತು, ಬಾವಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಟ್ರಾನ್ಸ್ಫಾರ್ಮರ್ಗಳು ಪದೇಪದೇ ಸುಡುವ ಘಟನೆಗಳು ಹೆಚ್ಚಾಗಿದ್ದು, ಇವುಗಳಿಗೆ ತಕ್ಷಣ ಬದಲಾವಣೆ ಮಾಡಬೇಕು. ವಿಶೇಷವಾಗಿ ಲೋಡ್ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಟ್ರಾನ್ಸ್ಫಾರ್ಮರ್ಗಳನ್ನು ಒದಗಿಸಬೇಕು. ಹೊಲಗಳಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳು ಅಪಾಯಕ್ಕೆ ಕಾರಣವಾಗುತ್ತಿದ್ದು, ತುರ್ತು ಕ್ರಮದ ಅಗತ್ಯವಿದೆ. ಜೋತು ಬಿದ್ದ ತಂತಿಗಳ ಸ್ಪಾರ್ಕ್ನಿಂದ ಸುಟ್ಟು ಹಾನಿಯಾಗಿರುವ ಕಬ್ಬು ಬೆಳೆಗಳಿಗೆ ಪರಿಹಾರ ನೀಡುವಂತೆ ರೈತರು ಬೇಡಿಕೆ ಇಟ್ಟರು.
ರೈತರು ಸಲ್ಲಿಸಿದ ಪ್ರಮುಖ ಬೇಡಿಕೆಗಳಲ್ಲಿ ವಿದ್ಯುತ್ ಖಾಸಗೀಕರಣ ವಿರೋಧ, ವಿದ್ಯುತ್ (ತಿದ್ದುಪಡಿ) ಮಸೂದೆ 2022 ಹಿಂಪಡೆಯುವುದು, ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ನಿಲ್ಲಿಸುವುದು, ಸುಟ್ಟ ಟ್ರಾನ್ಸ್ಫಾರ್ಮರ್ಗಳನ್ನು ತಕ್ಷಣ ಬದಲಾವಣೆ, ಜೊತು ಬಿದ್ದ ತಂತಿಗಳ ದುರಸ್ತಿ, ಬೆಳೆ ನಷ್ಟಗಳಿಗೆ ಪರಿಹಾರ ಮತ್ತು ಹೆಚ್ಚುವರಿ ಲೋಡ್ ಪ್ರದೇಶಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ‘ಬಾಬರಿ ಮಸೀದಿ’ ಧ್ವಂಸದ ವಿಡಿಯೋ ಹಂಚಿಕೆ; ಪಾಲಿಕೆ ಸಿಬ್ಬಂದಿ ವಿರುದ್ದ FIR
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಒಟ್ಟು 4,36,031 ಪಂಪ್ಸೆಟ್ಗಳಿದ್ದು, ಅವುಗಳಲ್ಲಿ 88,016 ಪಂಪ್ಸೆಟ್ಗಳಿಗೆ ಪದೇಪದೇ ವಿದ್ಯುತ್ ಅಡ್ಡಿ ಎದುರಾಗಿರುವುದರಿಂದ, ಈ ಸಮಸ್ಯೆಗಳ ಪರಿಹಾರಕ್ಕೆ ಜೆಸ್ಕಾಂ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಿಲೀಪ್ ಕುಮಾರ್ ನಾಗೂರೆ, ಸಿದ್ದಪ್ಪ ಕಲಸೆಟ್ಟಿಪ್ಪ, ಕರೆಪ್ಪ ಕರಗೊಂಡ, ಸಾಯಬಣ್ಣ ಎನ್. ಕೋರವಾ, ನಾಬು ದಿ ಚಿಲುಶಿ ಸೇರಿದಂತೆ ಹಲವರು ಭಾಗವಹಿಸಿದರು.





