ಕರ್ನಾಟಕ ಕಬ್ಬು ಬೆಳೆಗಾರರ ಸಂಘ ನೇತೃತ್ವದಲ್ಲಿ ಅಫಜಲಪುರ ತಾಲೂಕಿನ ಚೌಡಾಪುರ ಕ್ರಾಸ್ ಬಳಿ ಗುರುವಾರ ಭಾರೀ ಪ್ರಮಾಣದ ರಸ್ತೆ ತಡೆ ಚಳವಳಿ ನಡೆಸಿ ಅಫಜಲಪುರ ತಹಶಿಲ್ದಾರರ ರವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬೆಳಗಾವಿ ಮಾದರಿಯಲ್ಲಿ ಕಬ್ಬಿನ ಬೆಂಬಲ ಬೆಲೆ ನಿಗಧಿಪಡಿಸಿ, ಕಟಾವು ಮತ್ತು ಸಾಗಾಣಿಕೆ ವೆಚ್ಚ ನಿಶ್ಚಿತಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನೂರಾರು ರೈತರು ಪಾಲ್ಗೊಂಡು, “ಸಿಹಿ ಬೆಳೆದು ಕಹಿ ಉಣ್ಣುವ ಸ್ಥಿತಿ ಕೊನೆಗೊಳ್ಳಲಿ!”, “ಕಬ್ಬು ಬೆಳೆಗಾರರ ಬೆವರಿನ ಬೆಲೆ ನೀಡಬೇಕು!” ಎಂದು ಘೋಷಣೆ ಕೂಗಿದರು. ಸರಕಾರಿ, ಕಾರ್ಖಾನೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಸಕ್ಕರೆ ಕಾರ್ಖಾನೆಗಳ ಅನ್ಯಾಯದ ವಿರುದ್ಧ ಗಂಭೀರ ಆರೋಪ ಮಾಡಿದರು. ‘ಸರಕಾರದ ಆದೇಶವಿದ್ದರೂ ಕಾರ್ಖಾನೆಗಳು ಸಕ್ಕರೆ ಇಳುವರಿ ಪರೀಕ್ಷೆ ಪ್ರತಿ 15 ದಿನಕ್ಕೊಮ್ಮೆ ನಡೆಸದೇ, ರೈತರ ಅನುಮತಿಯಿಲ್ಲದೆ ಲೆಕ್ಕ ಅಂಕೆಗಳನ್ನು ನಿಗದಿಪಡಿಸುತ್ತಿವೆ. ತೂಕದ ಲೆಕ್ಕಾಚಾರದಲ್ಲೂ ಮೋಸ ನಡೆದಿದೆ,” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಶರಣಬಸಪ್ಪ ಮಮಶೇಟ್ಟಿ ಮಾತನಾಡಿ, “ಕಾರ್ಖಾನೆಗಳು ಸರ್ಕಾರದ ಕಟಾವು ಮತ್ತು ಸಾಗಾಣಿಕೆ ಮಾರ್ಗಸೂಚಿ ಉಲ್ಲಂಘಿಸಿ ರೈತರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ. ರೈತರು ಶ್ರಮಿಸಿದರೂ ಲಾಭ ಪಡೆಯಲಾಗುತ್ತಿಲ್ಲ,” ಎಂದು ವಿಷಾದಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಸುಮಾರು 45 ಸಾವಿರ ಹೆಕ್ಟೇರ್ನಲ್ಲಿ ಕಬ್ಬು ಬೆಳೆ ಬೆಳೆಯಲ್ಪಡುತ್ತಿದೆ. ಒಂದು ಟನ್ ಕಬ್ಬು ಬೆಳೆಯಲು ರೈತರಿಗೆ ಸರಾಸರಿ ರೂ. 3,500 ವೆಚ್ಚವಾಗುತ್ತದೆ. ಆದರೆ ಸರ್ಕಾರ ನಿಗದಿಪಡಿಸಿರುವ ಎಫ್ಆರ್ಪಿ ಪ್ರಕಾರ ಅವರಿಗೆ ಸಿಗುತ್ತಿರುವ ಮೊತ್ತ ಕೇವಲ ₹3,150 ಎಂದು ತಿಳಿಸಿದರು.
ಮುಂದುವರೆದು ಡಾ. ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಕಬ್ಬಿಗೆ ಕನಿಷ್ಠ ಟನ್ಗೆ ರೂ ಐದು ಸಾವಿರ ಬೆಲೆ ದೊರೆಯಬೇಕು. ಆದರೆ ಕೇಂದ್ರ ಸರ್ಕಾರ ಕೇವಲ ರೂ. 150 ಟನ್ ಹೆಚ್ಚಳ ಮಾಡಿ ರೈತರೊಂದಿಗೆ ಅನ್ಯಾಯ ಮಾಡಿದೆ,” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಮಂಗನಿಗೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಗ್ರಾಮಸ್ಥರು
ಈ ವೇಳೆ ಪ್ರಮುಖ ಬೇಡಿಗಳಾದ ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಕಬ್ಬಿಗೆ ಟನ್ಗೆ ರೂ. 5 ಸಾವಿರ ಬೆಂಬಲ ಬೆಲೆ ನಿಗಧಿಪಡಿಸಬೇಕು, 2022–23ರ ಸಾಲಿನ ಬಾಕಿ ₹100 ಪ್ರತಿ ಟನ್ ಹಣ (ಸುಮಾರು ₹11 ಕೋಟಿ) ತಕ್ಷಣ ಬಿಡುಗಡೆ ಮಾಡಬೇಕು, ಕಬ್ಬು ಸರಬರಾಜು ಮಾಡಿದ 14 ದಿನಗಳೊಳಗೆ ಹಣ ಪಾವತಿ ಖಚಿತಪಡಿಸಬೇಕು, ಕಟಾವು ಮತ್ತು ಸಾಗಾಣಿಕೆ ವೆಚ್ಚಕ್ಕೆ ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು, ಸಕ್ಕರೆ ಇಳುವರಿ ಪರೀಕ್ಷೆಗೆ ಕೃಷಿ ವಿಶ್ವವಿದ್ಯಾಲಯ ಹಾಗೂ ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದ ತಜ್ಞರ ಸಮಿತಿ ರಚಿಸಬೇಕು, ಎಸ್ಎಪಿ (ಸ್ಟೇಟ್ ಅಡ್ವೈಸರಿ ಪ್ರೈಜ್) ಮೂಲಕ ಟನ್ಗೆ ರೂ. 5 ಸಾವಿರ ಬೆಲೆ ನಿಗಧಿಪಡಿಸಬೇಕು ಅಥವಾ ತಮಿಳುನಾಡು ಮಾದರಿಯಲ್ಲಿ ಟನ್ಗೆ ₹500 ಪ್ರೋತ್ಸಾಹ ಧನ ನೀಡಬೇಕು, ಉಪೋತ್ಪನ್ನಗಳಾದ ಎಥೆನಾಲ್, ಮೊಲಾಸಸ್, ಕಾಕಂಬಿ ಮುಂತಾದ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡಬೇಕು, ಕಾರ್ಖಾನೆಗಳ ಬಾಕಿ ಪಾವತಿಗೆ ಬಡ್ಡಿ ಸೇರಿಸಿ ಹಣ ಪಾವತಿಸಬೇಕು, ಎಥೆನಾಲ್ ಉತ್ಪಾದನೆ ಪ್ರಮಾಣವನ್ನು ಶೇ.25ಕ್ಕೆ ಹೆಚ್ಚಿಸಬೇಕು, ರೈತರಿಗೆ ಮಡ್ಡಿ ಹಾಗೂ ಬೂದಿಯನ್ನು ಉಚಿತವಾಗಿ ನೀಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಎಸ್ಎಫ್ಎಫ್ ರಾಜ್ಯ ಉಪಾಧ್ಯಕ್ಷ ಸಿದ್ದರಾಮ ದಣ್ಣೂರು, ಅಧ್ಯಕ್ಷ ಅಶೋಕ ಹೂಗಾರ, ಶಿವಯೋಗೆಪ್ಪಾ ಬಿರದ್ದಾರ ಸೇರಿದಂತೆ ಅನೇಕರು ಭಾಗವಹಿಸಿದರು.





