ಅಂತರರಾಷ್ಟ್ರೀಯ ಮಹಿಳಾ ದಿನದ ಕ್ರಾಂತಿಕಾರಿ ಶುಭಾಶಯಗಳು. ಮಾರ್ಚ್ 8 ಮಹಿಳೆಯರ ಸ್ವಾಭಿಮಾನದ ಸಂಕೇತದ ದಿನ. ಇದು ಮಹಿಳೆಯರು ಸಾಗಿಬಂದ ಹೋರಾಟದ ಹಾದಿಯನ್ನು ಸ್ಮರಿಸುವ ದಿನ ಎಂದು ಎನ್ಎಫ್ಐಡಬ್ಲ್ಯೂ ಕಲಬುರಗಿ ಜಿಲ್ಲಾಧ್ಯಕ್ಷೆ ಪದ್ಮಾವತಿ ಎನ್ ಮಾಲಿಪಾಟೀಲ್ ತಿಳಿಸಿದರು.
ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್(ಎನ್ಎಫ್ಐಡಬ್ಲ್ಯೂ) ಕಲಬುರಗಿ ಜಿಲ್ಲಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮುಖ್ಯವಾಗಿ ಶತಮಾನಗಳಿಂದ ತುಳಿತಕ್ಕೊಳಗಾದ ಮಹಿಳಾ ಸಮುದಾಯ ತನ್ನ ಅಸ್ಮಿತೆಗಾಗಿ, ಘನತೆಯ ಬದುಕಿಗಾಗಿ ಒಗ್ಗೂಡಿ ಮುಂದೆ ಹೆಜ್ಜೆಹಾಕಲು ದಿಟ್ಟ ನಿರ್ಣಯ ತೆಗೆದುಕೊಳ್ಳುವ ದಿನವಿದು. ಹಾಗೆಯೇ ಮತನಿರಪೇಕ್ಷ ಪ್ರಜಾಸತ್ತಾತ್ಮಕ ಸಂವಿಧಾನವನ್ನು ಎತ್ತಿಹಿಡಿಯೋಣ ದ್ವೇಷದ ಬಹುಸಂಖ್ಯಾತವಾದಿ ರಾಜಕಾರಣವನ್ನು ತಿರಸ್ಕರಿಸೋಣ” ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ – ಮಾರ್ಚ್ 8
“ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 1907ರಲ್ಲಿ ಜವಳಿ ಉದ್ಯಮದಲ್ಲಿ ದುಡಿಯುತ್ತಿದ್ದ ಸಾವಿರಾರು ಮಹಿಳಾ ಕಾರ್ಮಿಕರು ಮೆರವಣಿಗೆ ನಡೆಸಿ ತಮ್ಮ ಮೇಲಾಗುತ್ತಿದ್ದ ತಾರತಮ್ಯ, ಅನ್ಯಾಯಗಳನ್ನು ಪ್ರತಿಭಟಿಸಿ ದಿನಕ್ಕೆ 8 ಗಂಟೆ ಕೆಲಸ, ಸಮಾನ ಕೆಲಸಕ್ಕೆ ಸಮಾನ ವೇತನ, ಮತದಾನದ ಹಕ್ಕು, ಇತ್ಯಾದಿಗಳಿಗಾಗಿ ಆಗ್ರಹಿಸಿದರು. ಅಲ್ಲಿನ ಸರ್ಕಾರ ಮಾಲೀಕರ ಜತೆಗೆ ಕೈಜೋಡಿಸಿ ಮಹಿಳಾ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಹಲವು ಹೋರಾಟಗಾರ್ತಿಯರನ್ನು ಹತ್ಯೆಗೈದಿತ್ತು. ಇದನ್ನು ಜಗತ್ತಿನ ಮಹಿಳೆಯರೆಲ್ಲ ತೀವ್ರವಾಗಿ ವಿರೋಧಿಸಿದರು” ಎಂದು ಹೇಳಿದರು.
“1910ರಲ್ಲಿ ಡೆನ್ಮಾರ್ಕ್ ದೇಶದ ಕೋಪೆನ್ ಹೆಗನ್ ನಗರದಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಎಂಬ ಕಮ್ಯೂನಿಸ್ಟ್ ನಾಯಕಿಯ ನೇತೃತ್ವದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಮತಚಲಾವಣೆಯ ಹಕ್ಕು ಸೇರಿದಂತೆ ಮಹಿಳೆಯರಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡಲು ವಿಶ್ವಾದ್ಯಂತ ಒಂದು ದಿನವನ್ನು ಗೊತ್ತುಪಡಿಸಿ, ಅಂದು ಮಹಿಳೆಯರೆಲ್ಲರೂ ಒಕ್ಕೊರಲಿನಿಂದ ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಟಕ್ಕೆ ಮುಂದಾಗಲು ತೀರ್ಮಾನಿಸಿದರು. ಮೊದಲು ಇದು ಅಂತಾರಾಷ್ಟ್ರೀಯ ದುಡಿಯುವ ಮಹಿಳೆಯರ ದಿನವಾಗಿ ಯುರೋಪ್ನ ರಾಷ್ಟ್ರಗಳಲ್ಲಿ ಆಚರಣೆಗೆ ಬಂದಿತು. ರಷ್ಯಾದ ಮಹಿಳೆಯರು ಮೊದಲ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ (1914- 1918) ‘ಬ್ರೆಡ್ ಆಂಡ್ ರೋಸಸ್’ ಎಂಬ ಘೋಷವಾಕ್ಯದಲ್ಲಿ ಯುದ್ಧವನ್ನು ವಿರೋಧಿಸಿ ಶಾಂತಿಯನ್ನು ಪ್ರತಿಪಾದಿಸಿದರು. ಕಾಲಾನಂತರದಲ್ಲಿ ಇದನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಎಲ್ಲೆಡೆ ಆಚರಿಸುವ ರೂಢಿ ಚಾಲ್ತಿಗೆ ಬಂದಿತು” ಎಂದು ತಿಳಿಸಿದರು.
ಭಾರತದ ಮಹಿಳೆಯರು ಮತ್ತು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮಹಿಳೆ ಎಂದರೇ ದುಡಿಯುವ ಜೀವಿ. ಉದ್ಯೋಗಸ್ಥ ಮಹಿಳೆ ಮನೆಯ ಹೊರಗೂ ಒಳಗೂ ದುಡಿಯುತ್ತಾಳೆ. ಮನೆಯಲ್ಲಿರುವ ಮಹಿಳೆ ಪೂರ್ಣಾವಧಿ ಬಿಟ್ಟಿಚಾಕರಿ ಮಾಡಿದರೂ ಸಮಾಜದಲ್ಲಿ ಶೋಷಣೆಗೆ, ಅಪಮಾನಕ್ಕೆ ಗುರಿಯಾಗುತ್ತಾಳೆ. ದೇಶದಲ್ಲಿ ಉದ್ಯೋಗಸ್ಥ ಮಹಿಳೆಯರು ಉದ್ಯೋಗ ಸ್ಥಳಗಳಲ್ಲಿ ಆನೇಕ ಲಿಂಗಾಧಾರಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಸರ್ಕಾರದ ಕಾರ್ಮಿಕ ವಿರೋಧಿ ಆರ್ಥಿಕ ನೀತಿಗಳಿಂದಾಗಿ ಮಹಿಳೆಯರು ಉದ್ಯೋಗ ಭದ್ರತೆಯನ್ನು ಕಳೆದುಕೊಂಡು ನೌಕರಿಗಾಗಿ ಪರದಾಡುವಂತಾಗಿದೆ. ಅಸುರಕ್ಷಿತ ಪರಿಸರದಲ್ಲಿ ಮಹಿಳೆಯರು ಕೆಲಸದ ಸ್ಥಳದಲ್ಲಿ ರಾತ್ರಿ ಪಾಳೆಯದಲ್ಲಿ ದುಡಿಯಬೇಕಾದ ಕಾನೂನನ್ನು ಸರ್ಕಾರ ತಂದಿದೆ. ಉದ್ಯೋಗ ಭದ್ರತೆಯಿಲ್ಲದೆ ಅಸಂಘಟಿತ, ಅನೌಪಚಾರಿಕ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಾಗಿದ್ದು ವೇತನ ತಾರತಮ್ಯಕ್ಕೆ ಗುರಿಯಾಗಿದ್ದಾರೆ. ಹೆರಿಗೆ ಸೌಲಭ್ಯಗಳೂ ಪುಸ್ತಕದ ಮೇಲಿನ ಅಕ್ಷರಗಳಾಗಿವೆಯಷ್ಟೇ” ಎಂದು ಬೇಸರ ವ್ಯಕ್ತಪಡಿಸಿದರು.
“ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಧಾನ ಮತ್ತು ಮನುವಾದಿ ಮೌಲ್ಯಗಳು ಮಹಿಳೆಯರನ್ನು ಮನುಷ್ಯರನ್ನಾಗಿ ಕಾಣುತ್ತಿಲ್ಲ. ಉದ್ಯೋಗಸ್ಥ ಮಹಿಳೆಯೂ ವರದಕ್ಷಿಣೆ ದೌರ್ಜನ್ಯ, ಕೌಟುಂಬಿಕ ಹಿಂಸೆಗೆ ಬಲಿಯಾಗುತ್ತಿದ್ದಾಳೆ. ಅತ್ಯಾಚಾರ-ಹತ್ಯೆಗಳಿಗೆ ಕೊನೆ ಇಲ್ಲದಾಗಿದೆ. ಮಹಿಳೆಯರ ಮೇಲೆ ಆಸಿಡ್ ದಾಳಿ ಮತ್ತು ಮರ್ಯಾದಾಗೇಡು ಹತ್ಯೆಗಳು ಎಗ್ಗಿಲ್ಲದಂತೆ ನಡೆಯುತ್ತಿವೆ. ಇಲ್ಲದ ಲವ್ ಜಿಹಾದ್ ನೆಪದಲ್ಲಿ ಸರ್ಕಾರಗಳೇ ಹೆಣ್ಣಿನ ಬದುಕಿನ ಆಯ್ಕೆಯ ಹಕ್ಕನ್ನು ಮೊಟಕುಗೊಳಿಸಿ ಮಹಿಳಾ ವಿರೋಧಿ ಶಾಸನವನ್ನು ರೂಪಿಸುತ್ತಿವೆ. ಕೆಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಏಕರೂಪ ನಾಗರಿಕ ಸಂಹಿತೆಯು ಮಹಿಳೆಗೆ ತನ್ನ ದೇಹದ ಮೇಲಿನ ಹಕ್ಕನ್ನಾಗಲೀ, ಬದುಕಿನ ಆಯ್ಕೆಯ ಹಕ್ಕನ್ನಾಗಲೀ ಚಲಾಯಿಸಲು ಅವಕಾಶ ನೀಡುತ್ತಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಮೊದಲಾದ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸದೇ ಸರ್ಕಾರ ಮಹಿಳೆಯರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರನ್ನು ಜಾತಿ-ಮತಗಳ ಹೆಸರಿನಲ್ಲಿ ವಿಭಜನೆ ಮಾಡಿದೆ. ದಲಿತರ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಮೇಲಿನ ಹಿಂಸೆಯೂ ಹೆಚ್ಚುತ್ತಿದೆ” ಎಂದರು.
“ದೇಶದಲ್ಲಿ ಹಸಿವೆ ಮತ್ತು ಅಪೌಷ್ಠಿಕತೆ ಹೆಚ್ಚಾಗಿದೆ. ಮಹಿಳೆಯರ ಆರೋಗ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಹಿಳೆಯರ ಅಭಿವೃದ್ಧಿಗೆ ವೆಚ್ಚ ಮಾಡುವ ಹಣಕ್ಕಿಂತ ಸರ್ಕಾರದ ಜಾಹೀರಾತುಗಳಿಗೇ ಹೆಚ್ಚು ಹಣ ಪೋಲಾಗುತ್ತಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸುವ ಬದಲು ಕೇಂದ್ರ ಸರ್ಕಾರವೇ ಅತ್ಯಾಚಾರ ಆರೋಪಿಗಳನ್ನು ರಕ್ಷಿಸುತ್ತಿರುವುದು ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಾಗಿದೆ. ಎನ್ಎಫ್ಐಡಬ್ಲ್ಯೂ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯದ ಒತ್ತಡದ ಮೇರೆಗೆ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವ ಮಹಿಳಾ ಮೀಸಲಾತಿ ಮಸೂದೆಯನ್ನು ಬಲವಂತದಿಂದ ಅಂಗೀಕರಿಸಿದ ಮೋದಿ ಸರ್ಕಾರ ಈಗ ಅದನ್ನು ಜಾರಿ ಮಾಡಲು ಹಿಂದೇಟು ಹಾಕುತ್ತಿದೆ. ನಮ್ಮ ಸಂವಿಧಾನ ಮತ್ತು ಪ್ರಜಾತಂತ್ರ ಅಪಾಯದಲ್ಲಿದೆ. ಇವುಗಳನ್ನು ರಕ್ಷಿಸುವ ಅನಿವಾರ್ಯತೆ ನಮ್ಮ ಮುಂದಿದೆ” ಎಂದು ಕರೆ ನೀಡಿದರು.
“ಸಂಗಾತಿಗಳೇ, ಆದ್ದರಿಂದಲೇ ಇಂತಹ ಮಹಿಳಾ ವಿರೋಧಿ ಪ್ರಜಾತಂತ್ರ ವಿರೋಧಿ ನೀತಿಗಳನ್ನು ಅನುಸರಿಸುವ ಸರ್ಕಾರಗಳ ವಿರುದ್ಧ ಮಹಿಳೆಯರೇ ಸಮರ ಸಾರಬೇಕಿದೆ. ಸಮಾನತೆಗಾಗಿ ಉದ್ಯೋಗಸ್ಥ ಮಹಿಳೆಯರೇ ಹಚ್ಚಿದ ಮಹಿಳಾ ಚಳುವಳಿಯ ದೀವಿಗೆಯನ್ನು ಇನ್ನೂ ಪ್ರಖರವಾಗಿ ಮುಂದಕ್ಕೆ ಕೊಂಡೊಯ್ಯಬೇಕಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸೋಣ. ಬನ್ನಿ- ಗೆಳತಿಯರನ್ನೂ ಕರೆತನ್ನಿ” ಎಂದು ಸಾರಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಕ್ತದಾನದಿಂದ ಮೂರು ಜೀವ ರಕ್ಷಿಸಬಹುದು: ಮಮತಾ ಪಾಟೀಲ್
ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ರೇಣುಕಾ ಕೆಸರಹಳ್ಳಿ, ವಿಶೇಷ ಉಪನ್ಯಾಸಕರಾಗಿ ಸಂಗೀತಾ ಎಂ. ಶೃಂಗೇರಿ, ಮುಖ್ಯ ಅಥಿತಿಗಳಾಗಿ ಕಲ್ಪನಾ ವಿ ಗುರುಸಿಣಿಗಿ, ಅತಿಥಿಯಾಗಿ ಶ್ರೀದೇವಿ ವೈ ಕೊಡಲಗಿ, ವಿಜಯಲಕ್ಷ್ಮಿ ಪಿ ಯಲಸಂಗಿ, ಶಿವಲಿಗಮ್ಮ ವಿ ಲೇಂಗಟಿಕರ್, ಶರಣಮ್ಮ ಎ ಪೂಜಾರಿ, ಜಯಶ್ರೀ ಕೊಸಾಳೆ, ಯಶೋಧ ಎಚ್ ರಾಥೋಡ್, ಅನಿತಾ ಡಿ, ಭಕರೆ, ನಾಗಮ್ಮ ಗುಡ್ಡಾ, ಸಿದ್ದಮ್ಮ ಪೂಜಾರಿ, ಸವಿತಾ ಎ ಮುಗಟಿ, ಲಕ್ಷ್ಮೀಬಾಯಿ ರಜೋಳ, ಚಂದಮ್ಮ ಎಸ್ ಉದನೂರ ಸೇರಿದಂತೆ ಬಹುತೇಕರು ಇದ್ದರು.




