ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಿಸಿದರೂ, ಇಲ್ಲಿನ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಇಂದಿಗೂ ನಾನಾ ಸಮಸ್ಯೆಗಳು ಇಲ್ಲಿನ ಜನರನ್ನು ಬಾಧಿಸುತ್ತಲೇ ಇವೆ. ಬಿಸಿಲು, ಬರ, ಅತಿವೃಷ್ಟಿ, ಅನಾವೃಷ್ಟಿ, ಕುಡಿಯುವ ನೀರು, ಆರೋಗ್ಯ ಸೇರಿದಂತೆ ನಾನಾ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಇದೆಲ್ಲದರ ನಡುವೆ, ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕವೂ ಇಲ್ಲದೇ ಇರುವುದು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡುತ್ತಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸಮೀಪದಲ್ಲೇ ಇರುವ ಹೆಗ್ಗಿನಾಳ ಗ್ರಾಮಕ್ಕೆ ರಸ್ತೆ ಸಂಪರ್ಕವೇ ಇಲ್ಲ. ಹೀಗಾಗಿ, ಕಳೆದ 20 ವರ್ಷಗಳಿಂದ ಗ್ರಾಮದತ್ತ ಸಾರಿಗೆ ಬಸ್ ಸುಳಿದಿಲ್ಲ. ಸಾರಿಗೆ ವ್ಯವಸ್ಥೆ ಇಲ್ಲದೆ, ತಮ್ಮೂರಿನಿಂದ ಎಲ್ಲಿಗೆ ಹೋಗಬೇಕೆಂದರೂ ಏಳೆಂಟು ಕಿ.ಮೀ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಈ ಗ್ರಾಮದ ಜನರದ್ದು. ರಸ್ತೆ, ಬಸ್ ವ್ಯವಸ್ಥೆಯಿಲ್ಲದೆ ವೃದ್ಧರು, ವಿದ್ಯಾರ್ಥಿಗಳು, ರೋಗಿಗಳು, ಗರ್ಭಿಣಿಯರು ದಿನನಿತ್ಯ ಪರದಾಡುವಂತಾಗಿದೆ.
ಸುಮಾರು 20 ವರ್ಷಗಳ ಹಿಂದೆ ಇಲ್ಲಿನ ರಸ್ತೆ ಹಾಳಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಆ ರಸ್ತೆಯಲ್ಲಿ ದುರಸ್ತಿ ಮಾಡಿಸುವ ಕೆಲಸವಾಗಿಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಗಾಡಿ, ಆಟೋ ಹೋಗುವುದು ತುಂಬಾ ಕಷ್ಟ. ರಸ್ತೆಯ ಮಧ್ಯ ದೊಡ್ಡ ದೊಡ್ಡ ತಗ್ಗು ಗುಂಡಿಗಳಿವೆ. ಗರ್ಭಿಣಿಯರು ಹೆರಿಗೆಗಾಗಿ ಆಂಬುಲೆನ್ಸ್ನಲ್ಲಿ ಆಸ್ಪತ್ರೆ ತೆರಳುವಾಗ ಎಷ್ಟೋ ಬಾರಿ ರಸ್ತೆ ಮಧ್ಯದಲ್ಲಿಯೇ ಹೆರಿಗೆಯಾಗಿರುವ ಉದಾಹರಣೆಗಳೂ ಇವೆ. ಅಲ್ಲದೆ ವಯಸ್ಸಾದ ವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದರೆ ಬೆನ್ನ ಮೇಲೆ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಗ್ರಾಮದ ಬಹುಸಂಖ್ಯಾತ ಜನರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಲವರ ಬಳಿ ಸ್ವಂತ ವಾಹನಗಳಿಲ್ಲ. ಅನುಕೂಲಸ್ಥರು ತಮ್ಮ ಸ್ವಂತ ವಾಹನಗಳಲ್ಲಿ ಓಡಾಡುತ್ತಾರೆ. ಆದರೆ, ನಮ್ಮಂಥ ಬಡವರು ಹೇಗೆ ಬದುಕುವುದು. ನಡೆದುಕೊಂಡೇ ಓಡಾಡುತ್ತಿದ್ದೇವೆ. ಜೀವನವೇ ದುಸ್ತರವಾಗಿದೆ. ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ, ಬಿಸಿಲಿನಲ್ಲಿ ನಡೆಯುವುದಾದರೂ ತಪ್ಪುತ್ತದೆ ಎನ್ನುತ್ತಾರೆ ಗ್ರಾಮದ ಕೂಲಿ ಕಾರ್ಮಿಕರು.

ಹೆಗ್ಗಿನಾಳ ಗ್ರಾಮದ ಶಾಲೆಯಲ್ಲಿ 7ನೇ ತರಗತಿವರೆಗೆ ಮಾತ್ರವೇ ಕಲಿಸಲಾಗುತ್ತದೆ. ಪ್ರೌಢಶಾಲೆಗಾಗಿ ಜೇವರ್ಗಿಗೆ ಹೋಗಬೇಕು. ಅಲ್ಲಿನ ಶಾಲೆಗೆ ಹೋಗಲು ಪ್ರತಿದಿನ 6 ಕಿ.ಮೀ. ನಡೆದುಕೊಂಡು ಹೋಗಿ, 6 ಕಿ.ಮೀ ನಡೆದುಕೊಂಡೇ ಬರಬೇಕು. ದಿನಕ್ಕೆ 12 ಕಿ.ಮೀ ನಡೆಯುವ ವಿದ್ಯಾರ್ಥಿಗಳು ದಣಿದುಹೋಗುತ್ತಾರೆ. ಅವರ ಸಮಯವೆಲ್ಲ ಶಾಲೆಗೆ ಹೋಗಿ ಬರುವುದರಲ್ಲೇ ಕಳೆದುಹೋಗುತ್ತಿದೆ. ಪುಸ್ತಕದ ಚೀಲ ಹೊತ್ತು ನಡೆದು ಬಂದು, ಕೈ-ಕಾಲು ನೋವಿನಿಂದ ಸಂಜೆ ಓದಿಕೊಳ್ಳಲೂ ಆಗದೇ, ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉಡುಪಿ | ಪರಶುರಾಮ ಥೀಮ್ ಪಾರ್ಕ್: ಪರಶುರಾಮನ ಕಂಚಿನ ಪ್ರತಿಮೆ ಅಸಲಿಯೋ? ನಕಲಿಯೋ?
ಜಮೀನುಗಳ ನಡುವೆ ಕಾಲುಹಾದಿ ಇದ್ದು, ಬೆಳೆ ಬೆಳದಾದ ಆ ಹಾದಿಯೂ ಮುಚ್ಚಿಹೋಗುತ್ತದೆ. ಅಲ್ಲದೆ, ಹಾವು-ಚೇಳುಗಳಿದ್ದರೂ ಗೊತ್ತಾಗುವುದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಮತ್ತೇನಾದರೂ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಹಲವರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವುದನ್ನೇ ನಿಲ್ಲಿಸಿದ್ದಾರೆ. ಓದಬೇಕೆಂಬ ಹಂಬಲವಿದ್ದರೂ, ರಸ್ತೆ, ಬಸ್ ವ್ಯವಸ್ಥೆ ಇಲ್ಲದ ಕಾರಣಕ್ಕೆ ಹಲವು ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ.
ಶಾಸಕ ಡಾ. ಅಜಯ್ ಸಿಂಗ್ ಅವರು ಜೇವರ್ಗಿ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಆದರೂ, ಗ್ರಾಮದತ್ತ ಅವರು ಸುಳಿವಿಲ್ಲ. ಚುನಾವಣೆ ಸಮಯದಲ್ಲಿ ರಸ್ತೆ ಮಾಡಿಸುವುದಾಗಿ ಆಶ್ವಾಸನೆ ನೀಡುತ್ತಾರೆ. ಚುನಾವಣೆ ಮುಗಿದ ಮೇಲೆ ಮತ್ತೊಂದು ಚುನಾವಣೆ ಬರುವವರೆಗೂ ಅವರು ಗ್ರಾಮದತ್ತ ತಲೆ ಹಾಕುವುದಿಲ್ಲ. ಶಾಸಕರು, ಗ್ರಾಮದ ಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿತನದಿಂದ ಕಾಣು, ಕಿವಿ ಮುಚ್ಚಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ರಸ್ತೆ ಸಮಸ್ಯೆ ಕುರಿತು ಅಜಯ್ ಸಿಂಗ್ ಅವರನ್ನು ಮಾತನಾಡಿಸಲು ಈದಿನ.ಕಾಮ್ ಪ್ರಯತ್ನಿಸಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.




