ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣ ಸಿಮೆಂಟ್ಗೆ ಹೆಸರುವಾಸಿ. ಅತೀ ಹೆಚ್ಚು ಧೂಳಿನ ಪಟ್ಟಣ ಸಹ ಹೌದು. ಈ ಧೂಳಿನಿಂ ಜನರ ಬದುಕು ಅಸ್ಥಿರವಾಗಿದೆ. ಆದರೆ, ಧೂಳನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪಟ್ಟಣದಲ್ಲಿ ಧೂಳಿನಿಂದ ಸಾರ್ವಜನಿಕರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇಲ್ಲಿ ಬದುಕು ಅಸಹನೀಯವೆನ್ನಿಸುವಷ್ಟು ಮಟ್ಟಿಗೆ ಪಟ್ಟಣದಲ್ಲಿ ದೂಳು ಹರಡುತ್ತಿದ್ದು, ಗಂಭೀರ ಕಾಯಿಲೆಗಳ ಸಾಧ್ಯತೆ ಹೆಚ್ಚಾಗಿದೆ ಎಂದು ನಾಗರಿಕರು ದೂಳು ಹರಡುತ್ತಿರುವ ಕಾರ್ಖಾನೆ ಹಾಗೂ ಹದಗೆಟ್ಟ ರಸ್ತೆಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ಸಿಮೆಂಟ್ ಕಾರ್ಖಾನೆಯಿಂದ ವಿಪರೀತ ದೂಳು ಹೊರಬರುತ್ತದೆ. ದೂಳಿನೊಂದಿಗೆ ಹೊರಬರುವ ವಿಷಕಾರಿ ಕಣಗಳು ಜನರಶ್ವಾಸಕೋಶ ಸೇರಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಕಾರ್ಖಾನೆ ನಿರ್ಮಿಸಿದ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ವಾಹನಗಳು ಓಡಾಡುವಾಗ ಮುಗಿಲೆತ್ತರ ಧೂಳು ಏಳುತ್ತದೆ. ಪಕ್ಕದಲ್ಲಿನ ವಾಹನಗಳು ಕಾಣದಿರುವಷ್ಟು ದೂಳು ಹರಡುತ್ತಿದ್ದು ಇದರಿಂದ ವಾಹನ ಸವಾರರು ಮತ್ತು ಸ್ಥಳೀಯರು ಕಂಗಲಾಗಿದ್ದು ಪ್ರತೀ ದಿನ ಪುರಸಭೆ ಮತ್ತು ಕಾರ್ಖಾನೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಾವೂರಿನಿಂದ ಪಟ್ಟಣ ಸಂಪರ್ಕಿಸುವ ರಸ್ತೆ ಹಾಗೂ ಪಟ್ಟಣದ ಶ್ರೀನಿವಾಸ ಗುಡಿ ಚೌಕ್ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು,ರಸ್ತೆಗೆ ಹೊಂದಿಕೊಂಡು ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹಗಳಿದ್ದು ಇಲ್ಲಿರುವ ಕುಟುಂಬಗಳು ಹೆಚ್ಚಿನ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿವೆ. ಪೊಲೀಸರು ವಸತಿ ಗೃಹಗಳಲ್ಲಿ ವಾಸಮಾಡಲಾಗದೇ ಕೆಲವರು ಬೇರೆಕಡೆ ಮನೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಹದಗೆಟ್ಟ ರಸ್ತೆಯನ್ನು ಮತ್ತೇ ನಿರ್ಮಾಣ ಮಾಡುವ, ಪ್ರತಿನಿತ್ಯ ರಸ್ತೆ ಮೇಲೆ ನೀರು ಸಿಂಪಡಿಸಬೇಕೆನ್ನುವ ಕನಿಷ್ಠ ಕಾಳಜಿಯನ್ನು ಎಸಿಸಿ ಕಾರ್ಖಾನೆ ಹಾಗೂ ಸ್ಥಳೀಯ ಪುರಸಭೆ ತೋರುತ್ತಿಲ್ಲ. ನಮಗೆ ಬದುಕೇ ನರಕ ಎನ್ನುವಂತಾಗಿದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದೂಳು ನಿಯಂತ್ರಣಕ್ಕೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.




