ಆದಾಯ ಮೀರಿ ಹೆಚ್ಚು ಆಸ್ತಿ ಹೊಂದಿದ್ದ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್ಡಿಪಿಆರ್) ಇಇ ಮಲ್ಲಿಕಾರ್ಜುನ ಅಲಿಪುರ್ ಹಾಗೂ ಕಲಬುರಗಿ ತಾಲ್ಲೂಕಿನ ಸಣ್ಣೂರ ಗ್ರಾಮ ಪಂಚಾಯತಿ ಪಿಡಿಓ ರಾಮಚಂದ್ರ ಅವರ ಮನೆ ಹಾಗೂ ಕಚೇರಿ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದರು.
ಎಂಜಿನಿಯರ್ ಮಲ್ಲಿಕಾರ್ಜುನ ಅಲಿಪುರ್ ಅವರ ಕಲಬುರಗಿ ನಗರದಲ್ಲಿನ ಕಚೇರಿ, ಜೇವರ್ಗಿ ಕ್ರಾಸ್ ಸಮೀಪ ಹಾಗೂ ಬೆಂಗಳೂರು ನಗರದಲ್ಲಿನ ಮನೆಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಮಲ್ಲಿಕಾರ್ಜುನ ಅಲಿಪುರ್ ಅವರು ಇನ್ನು ನಾಲ್ಕು ದಿನಗಳಲ್ಲಿ ನಿವೃತ್ತಿ ಆಗಲಿದ್ದರು ಎಂದು ಮೂಲಗಳು ತಿಳಿಸಿವೆ.
ಸಣ್ಣೂರು ಪಿಡಿಒ ರಾಮಚಂದ್ರ ಅವರ ಸೇಡಂ ರಸ್ತೆಯ ಮಾನಸ ರೆಸಿಡೆನ್ಸಿ ಲೇಔಟ್ ಹಾಗೂ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬೊಮ್ಮನಹಳ್ಳಿ ಮನೆಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಉಮೇಶ್ ಬಿ.ಕೆ. ನೇತೃತ್ವದಲ್ಲಿ ಡಿವೈಎಸ್ಪಿ ಗೀತಾ ಬಿನಾಳ, ಹನುಮಂತರಾಯ, ಡಿವೈಎಸ್ಪಿ ಶಿಲವಂತ, ಇನ್ಸ್ಪೆಕ್ಟರ್ ರಾಜಶೇಖರ, ಸಂತೋಷ್ ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ : ಬೀದರ್ | ಅಧಿಕಾರ ದುರ್ಬಳಕೆ : ಕೊಳ್ಳೂರ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಮಾನತು





