ಆರ್ಎಸ್ಎಸ್ ಮತ್ತು ಸನಾತನವಾದಿಗಳ ದಾಳಿಗೆ ತೀವ್ರ ಖಂಡನೆ ವ್ಯಕ್ತಪಡಿಸುವ ಮೂಲಕ ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕದ ಸದಸ್ಯರು ಸಾಮಾಜಿಕ ಸೌಹಾರ್ದತೆ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು.
ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವತಿಯಿಂದ ಬಂಡಾಯ ಸಾಹಿತ್ಯ ರಾಜ್ಯ ಸಮ್ಮೇಳನದ ಪೂರ್ವಭಾವಿ ಮೊದಲ ಸಭೆಯನ್ನು ಗುರುವಾರ ಕಲಬುರಗಿಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಸುವರ್ಣ ಸೌಧದಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಸಂಘ ಪರಿವಾರ ಮತ್ತು ಆರ್ಎಸ್ಎಸ್ನ ಚಟುವಟಿಕೆಗಳನ್ನು ತೀವ್ರವಾಗಿ ಖಂಡಿಸಲಾಯಿತು. ದೇಶದಲ್ಲಿ ಸನಾತನಿಯತೆ, ಜಾತಿ ಆಧಾರಿತ ರಾಜಕೀಯ ಮತ್ತು ಅಸಹಿಷ್ಣುತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಹಿತಿಗಳು ಪ್ರತಿರೋಧದ ಧ್ವನಿಯಾಗಿ ಕಾರ್ಯನಿರ್ವಹಿಸಬೇಕೆಂಬ ಅಭಿಪ್ರಾಯವನ್ನು ಸದಸ್ಯರು ವ್ಯಕ್ತಪಡಿಸಿದರು.
ಸಭೆಯಲ್ಲಿ ಹಿರಿಯ ಸಾಹಿತಿ ಪ್ರೊ.ಆರ್.ಕೆ ಹುಡುಗಿ ಮಾತನಾಡಿ, “ಬೆಳೆಯುತ್ತಿರುವ ಫ್ಯಾಶಿಸಂ ಕುರಿತಾಗಿ ಚಿಂತನೆ ಅಗತ್ಯವಾಗಿದೆ. ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮೌಲ್ಯಗಳ ಕಾಪಾಡುವ ಹೋರಾಟದಲ್ಲಿ ನಾವು ಎಲ್ಲರೂ ಪ್ರಿಯಾಂಕ ಖರ್ಗೆ ಅವರ ಜೊತೆ ನಿಲ್ಲಬೇಕು,” ಎಂದು ಹೇಳಿದರು.
ಸಭೆಯಲ್ಲಿ ಅನೇಕ ಬಂಡಾಯ ಸಾಹಿತ್ಯಕಾರರು, ಚಿಂತಕರು ಹಾಗೂ ಪ್ರಗತಿಪರ ಚಳವಳಿಯ ಹೋರಾಟಗಾರರು ಭಾಗವಹಿಸಿದ್ದರು.





