ಚಿತ್ತಾಪುರ ಪಟ್ಟಣದಲ್ಲಿ ಭಾನುವಾರ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಥಸಂಚಲನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಳವಡಿಸಲಾದ ಭಗವಾಧ್ವಜ, ಬ್ಯಾನರ್ಗಳು ಹಾಗೂ ಕಟೌಟ್ಗಳನ್ನು ಅಧಿಕಾರಿಗಳು ತಡರಾತ್ರಿ ತೆರವುಗೊಳಿಸಿರುವುದು ಉದ್ವಿಗ್ನತೆ ಸೃಷ್ಟಿಸಿದೆ.
ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಶುಕ್ರವಾರ ಮಧ್ಯರಾತ್ರಿ ಕ್ರಮ ಕೈಗೊಂಡು ಲಾಡ್ಜಿಂಗ್ ಕ್ರಾಸ್, ಮುಖ್ಯರಸ್ತೆ ಹಾಗೂ ಮಾರುಕಟ್ಟೆ ಪ್ರದೇಶ ಸೇರಿದಂತೆ ಹಲವು ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಆರ್ಎಸ್ಎಸ್ ಭಗವಾಧ್ವಜ, ಬ್ಯಾನರ್ಗಳು ಹಾಗೂ ಕಟೌಟ್ಗಳನ್ನು ತೆರವುಗೊಳಿಸಿದರು. ಈ ಕ್ರಮ ಸರ್ಕಾರದ ಆದೇಶದಡಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ರಾಜ್ಯ ಸರ್ಕಾರ ಇತ್ತೀಚೆಗೆ ಸರ್ಕಾರಿ ಜಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆಗಳ ಕಾರ್ಯಕ್ರಮ ಆಯೋಜನೆಗೆ ಪೂರ್ವಾನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿದ್ದು, ಅದರ ಅನುಸಾರ ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದೆ’ ಎಂದು ತಿಳಿದು ಬಂದಿದೆ.

‘ಆದರೆ ಈ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರವು ಕಾರ್ಯಾಚರಣೆ ನಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಹಲವು ಬಿಜೆಪಿ ಮುಖಂಡರು ಸ್ಥಳಕ್ಕಾಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಆಡಳಿತದ ಕ್ರಮವನ್ನು ಅವರು ‘ಹಿಂದೂ ವಿರೋಧಿ ನಿಲುವು’ ಎಂದು ಆರೋಪಿಸಿದರು.
‘ಪಥಸಂಚಲನಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ವತಿಯಿಂದ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ತಹಶೀಲ್ದಾರ್ ಅವರು ಪೊಲೀಸ್ ಇಲಾಖೆಗೆ ವರದಿ ಕೋರಿರುವ ಕಾರಣದಿಂದ ಅಧಿಕೃತ ಅನುಮತಿ ಇನ್ನೂ ನೀಡಲಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿದ್ದೀರಾ? ಕಲಬುರಗಿ | ಆರ್ಎಸ್ಎಸ್ ನಿಷೇಧಿಸುವಂತೆ ಆಗ್ರಹಿಸಿ : ಕರಾದಸಂಸ ಬೃಹತ್ ಪ್ರತಿಭಟನಾ ಮೆರವಣಿಗೆ
‘ಈ ವಿಚಾರ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಚಿತ್ತಾಪುರ ಕ್ಷೇತ್ರದ ಶಾಸಕರಾದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದ ಹಿನ್ನೆಲೆ ಆಡಳಿತದ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿದು ಬಂದಿದೆ.
‘ಸ್ಥಳೀಯ ಮಟ್ಟದಲ್ಲಿ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಭದ್ರತೆ ಒದಗಿಸಿದ್ದು, ಪಥಸಂಚಲನಕ್ಕೆ ಅನುಮತಿ ನೀಡುವ ಬಗ್ಗೆ ಅಂತಿಮ ನಿರ್ಧಾರ ತಾಲ್ಲೂಕು ಆಡಳಿತದ ಕೈಯಲ್ಲಿದೆ’ ಎಂದು ತಿಳಿದುಬಂದಿದೆ.





