ತೊಗರಿ ಬೆಳೆಗಾರರ ಗಂಭೀರ ಸಮಸ್ಯೆಗಳನ್ನು ಪರಿಗಣಿಸಿ, ಸರ್ಕಾರಗಳು ತಕ್ಷಣ ಸ್ಪಂದಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ತೊಗರಿಗೆ ಕನಿಷ್ಠ ₹12,500 ಬೆಂಬಲ ಬೆಲೆ (MSP) ನಿಗದಿ ಮಾಡಬೇಕು ಹಾಗೂ MSPಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಕೆಪಿಆರ್ ಎಸ್ ಪಕ್ಷದ ಮುಖಂಡ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.
ತೊಗರಿ ಬೆಳೆಗಾರರ ಸಂರಕ್ಷಣೆಯ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ₹1,000 ಪ್ರೋತ್ಸಾಹಧನ ನೀಡಬೇಕು. ಜೊತೆಗೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಬೆಳೆ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ದೇಶೀಯ ರೈತರ ಹಿತ ಕಾಪಾಡುವ ಸಲುವಾಗಿ ಹೊರದೇಶದಿಂದ ಆಮದು ಆಗುವ ತೊಗರಿ ಮೇಲೆ ಶೇ.50 ಇಂಪೋರ್ಟ್ ಶುಲ್ಕ ವಿಧಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ. ಕಡಿಮೆ ದರದ ಆಮದು ತೊಗರಿಯಿಂದ ದೇಶೀಯ ಮಾರುಕಟ್ಟೆ ಕುಸಿಯುತ್ತಿದ್ದು, ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ | ಮರ್ಯಾದಾ ಹತ್ಯೆ ಖಂಡಿಸಿ ; ಡಿವೈಎಫ್ಐ ಪ್ರತಿಭಟನೆ
ಇನ್ನೊಂದೆಡೆ, ಸಕ್ಕರೆ ಕಾರ್ಖಾನೆಗಳು ಚಾಲನೆಯಾಗಿ 35 ದಿನಗಳಾದರೂ ಕಬ್ಬು ರೈತರಿಗೆ ಹಣ ಪಾವತಿಯಾಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ನಿಯಮಾನುಸಾರ ಕಬ್ಬಿನ ಹಣವನ್ನು ತಡಮಾಡಿದರೆ ಶೇ.16 ಬಡ್ಡಿ ಸೇರಿಸಿ ರೈತರಿಗೆ ಪಾವತಿಸಬೇಕು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.





