ಕಾನೇಕರ್ ಪರಿವಾರದ ವತಿಯಿಂದ ಎಳ್ಳ ಅಮವಾಸ್ಯೆ ಪ್ರಯುಕ್ತ ಇಂದು ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದ ತೋಟದ ಮನೆಯಲ್ಲಿ ವಿಶೇಷ ಔತಣಕೂಟ ಹಾಗೂ ಸಾಂಸ್ಕೃತಿಕ ಸಡಗರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಹೊಲದಲ್ಲಿ ಕಬ್ಬು ಹಾಗೂ ಬಾಳೆದಿಂಡಿಗಳಿಂದ ಗೋಪುರ ನಿರ್ಮಿಸಿ, ಅದರೊಳಗೆ ತಥಾಗತ ಗೌತಮ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರತಿಶರಣ ಪಂಚಶೀಲ ಪಠಣ ಮಾಡುವ ಮೂಲಕ ಭೂಮಿಗೆ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸಿದರು.

ಸಡಗರ ಸಮಾರಂಭದ ವೇದಿಕೆ ಕಾರ್ಯಕ್ರಮವನ್ನು ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೆ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗದ ವಿಭಾಗೀಯ ಉಪ ನಿರ್ದೇಶಕರಾದ ಡಾ. ಅಂಬಾರಾಯ ರುದ್ರವಾಡಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಶರಣಪ್ಪ ಖ್ಯಾತನಾಳ, ಆರ್ಸಿಎಚ್ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಸಿದ್ದು ಪಾಟೀಲ ಭಾಗವಹಿಸಿದ್ದರು. ಅತಿಥಿಗಳಾಗಿ ಸೋಮಶೇಖರ್ ಮೇಲಿನಮನಿ, ಅಶೋಕಕುಮಾರ್, ಡಾ. ಶಿಲ್ಪ ಗೋಳೆ, ನಮ್ರತಾ ಫತಾಟೆ, ಗೀತಾ ಹೊಸಮನಿ, ಶಿವಕುಮಾರ್ ಹಳ್ಳಿಖೇಡ್ ಹಾಗೂ ಸಂಜುಕುಮಾರ್ ಕಾಂಬಳೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರೋಗ್ಯ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ. ಸಂಧ್ಯಾ ಎಸ್. ಕಾನೇಕರ್ ವಹಿಸಿದ್ದರು.

ಪ್ರಸ್ತಾವಿಕ ಭಾಷಣದಲ್ಲಿ ಸುರೇಶ್ ಎಸ್. ಕಾನೇಕರ್ ಮಾತನಾಡಿ, ‘ನಾವು ಹೊಲದಲ್ಲಿ ಕೆಲಸ ಮಾಡದೆ ಹಣಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿದರೆ ಮುಂದಿನ ದಿನಗಳಲ್ಲಿ ಕಾಗದ ತಿನ್ನುವ ಪರಿಸ್ಥಿತಿ ಎದುರಾಗಬಹುದು. ಇಂದಿನ ಯುವ ಪೀಳಿಗೆಗೆ ಹೊಲ, ಗದ್ದೆ ಹಾಗೂ ಬೆಳೆಗಳ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಯಾವ ಬೆಳೆ ಎಂಬುದನ್ನೇ ಕೇಳುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಪ್ರತಿಯೊಬ್ಬರೂ ಕೃಷಿ ಹಾಗೂ ಹೊಲ, ಗದ್ದೆಗಳ ಮಹತ್ವವನ್ನು ಅರಿತು ವ್ಯವಸಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ದಯಾನಂದ ಪಾಟೀಲ್, ನಾಗೇಂದ್ರಪ್ಪ, ಡಾ. ಜಯಶ್ರೀರೆಡ್ಡಿ, ಗಣಪ ಶಿಂಧೆ, ಡಾ. ರಾಕೇಶ್ ಕಾಂಬಳೆ ಹಾಗೂ ದಿಲೀಪ್ ಸಾಗರ್ ಮಾತನಾಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರೋಹಿಣಿ ಸಂತೋಷ ಕಿವಡೆ ಹಾಗೂ ತಂಡದಿಂದ ಜಾನಪದ ನೃತ್ಯ, ಮಾಲಾಶ್ರೀ ರಾಹುಲ್ ಕಿವಡೆ ಹಾಗೂ ತಂಡದಿಂದ ಜಾನಪದ ಗೀತೆಗಳ ಪ್ರದರ್ಶನ ನಡೆಯಿತು. ಭಾಗವಹಿಸಿದ ಕಲಾವಿದರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ದೇವರಾಜ ಕನ್ನಡಗಿ ಸ್ವಾಗತಿಸಿದರು. ಅಂಬರೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾನೇಕರ್ ವಂದಿಸಿದರು.





