2024–25ನೇ ಸಾಲಿನ ಬಿ.ಎಡ್. ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿ ಮೂಲ ಅಂಕಪಟ್ಟಿ ನೀಡಬೇಕೆಂದು ಆಗ್ರಹಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಬಿ.ಎಡ್. ವಿದ್ಯಾರ್ಥಿಗಳ ಹೋರಾಟ ಸಮಿತಿ ಗುರುವಾರ ನಗರದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗಿದ್ದು, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಹೋರಾಟ ಸಮಿತಿ ಸಂಚಾಲಕ ತೇಜಸ್ ಆರ್. ಇಬ್ರಾಹಿಂಪುರ ಮಾತನಾಡಿ, “ಗುಲಬರ್ಗಾ ವಿಶ್ವವಿದ್ಯಾಲಯದ ಅಡಿಯಲ್ಲಿ ಅನೇಕ ಬಿ.ಎಡ್. ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಪ್ರಶಿಕ್ಷಣಾರ್ಥಿಗಳು ಕಳೆದ ಹಲವು ತಿಂಗಳಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಯಾವುದೇ ವೃತ್ತಿಪರ ಪದವಿ ಪರೀಕ್ಷೆಯ ಫಲಿತಾಂಶವನ್ನು 45 ದಿನಗಳಲ್ಲಿ ಪ್ರಕಟಿಸಬೇಕೆಂಬ ನಿಯಮವಿದ್ದರೂ ವಿಶ್ವವಿದ್ಯಾಲಯವು ನಿಯಮ ಉಲ್ಲಂಘಿಸಿದೆ,” ಎಂದು ಆರೋಪಿಸಿದರು.

ಅವರು ಮುಂದುವರಿದು, ‘ಜೂನ್ 13ರಂದು ವಿಶ್ವವಿದ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದಾಗ ಕುಲಪತಿ ಮತ್ತು ಕುಲಸಚಿವರು ಒಂದು ತಿಂಗಳೊಳಗೆ ಫಲಿತಾಂಶ ಪ್ರಕಟಿಸುವ ಭರವಸೆ ನೀಡಿದ್ದರು. ಆದರೆ ಐದು ತಿಂಗಳು ಕಳೆದರೂ ಪ್ರಕಟವಾಗಿಲ್ಲ. ಈ ವಿಳಂಬದಿಂದ ವಿದ್ಯಾರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ, ಒಂದು ವೇಳೆ ಫಲಿತಾಂಶ ಬಾರದಿದ್ದರೆ ಬಿ.ಎಡ್ ವಿದ್ಯಾರ್ಥಿಗಳು ಶಿಕ್ಷಕರಾಗುವ ಕನಸು ಹುಸಿಯಾಗುತ್ತದೆ,’ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ : ಪ್ರಕರಣ ದಾಖಲು
ಜಗನಾಥ್ ಎಸ್.ಎಚ್. ಮಾತನಾಡಿ, “ಬಿ.ಎಡ್. 2ನೇ ಹಾಗೂ 4ನೇ ಸೆಮಿಸ್ಟರ್ ಫಲಿತಾಂಶ ತಕ್ಷಣ ಪ್ರಕಟಿಸಬೇಕು, ಎಲ್ಲ ಸೆಮಿಸ್ಟರ್ಗಳ ಮೂಲ ಅಂಕಪಟ್ಟಿ ಹಾಗೂ ಘಟಿಕೋತ್ಸವ ಪ್ರಮಾಣಪತ್ರ ನೀಡಬೇಕು, ಪರೀಕ್ಷಾ ಅರ್ಹತಾ ಶುಲ್ಕ ಕಡಿಮೆ ಮಾಡಬೇಕು,” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂತೋಷಕುಮಾರ ಎಸ್.ಪಿ., ರಮೇಶ ದೇವಕರ್, ಪ್ರಭಾಕರ ಚಿಂಚೋಳಿ, ಅಣವೀರ ಗೌಡ ಬಿರಾದಾರ, ಪೂಜಾ, ವಿವೇಕ ಹಿರೇಮಠ, ಸಚೀನ್, ವಿರೇಶ್, ಖಾಶಿಂ, ಗಣೇಶ್ ಜಾದವ್, ರವಿಚಂದ್ರ ಹಾಗೂ ರಕ್ಷಿತಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





