ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತಾಲೂಕು ನಾಗರೀಕರ ಹಿತರಕ್ಷಣಾ ವೇದಿಕೆ ಚಿಂಚೋಳಿ ವತಿಯಿಂದ ಮಂಗಳವಾರ ತಹಶಿಲ್ದಾರ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲಾಯಿತು.
ಧರಣಿಕಾರರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಡಿ ಪುರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳಡಿ ಎಸ್.ಎಮ್. ಕನಸ್ಟ್ರಕ್ಷನ್ ಸಂಸ್ಥೆ ನಿರ್ಮಿಸುತ್ತಿರುವ ಕಳಪೆ ಮನೆಗಳ ಕುರಿತು ತನಿಖೆ ನಡೆಸಿ, ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿದರು. ಅವರು ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆಯ ಸಂಚಾಲಕ ಕಾಶಿನಾಥ ಸಿಂಧೆ ಮಾತನಾಡಿ, ‘2006-07ರ ನರ್ಮ್ ಐಎಚ್ಎಸ್ಡಿಪಿ ಯೋಜನೆಯಡಿ ನಿರ್ಮಿಸಿದ 200 ಮನೆಗಳು ಇದುವರೆಗೆ ಹಂಚಿಕೆ ಆಗಿಲ್ಲ. ಮನೆಗಳು ವಸತಿಯೋಗ್ಯ ಸ್ಥಿತಿಯಲ್ಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಗಳು ವಿಳಂಬವಾಗುತ್ತಿವೆ,’ ಎಂದು ಹೇಳಿದರು.
‘ಅವರು 2018-19 ಹಾಗೂ 2022ರ ಯೋಜನೆಗಳಡಿ ನಿರ್ಮಿಸಬೇಕಿದ್ದ ಮನೆಗಳ ಕಾಮಗಾರಿ ಪ್ರಾರಂಭವಾಗದೆ ಕಾಲಹರಣ ನಡೆಯುತ್ತಿದೆ ಎಂದು ಆರೋಪಿಸಿದರು. ಪುರಸಭೆ ಅನುಮತಿ ಪಡೆಯದೆ ನಿರ್ಮಾಣ ಕಾರ್ಯ ನಡೆದಿದ್ದು, ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ’ ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸಮ್ಯಕ್ ಬುದ್ಧ ವಿಹಾರದ 5ನೇ ವಾರ್ಷಿಕೋತ್ಸವ : ರಮಾಬಾಯಿ ಅಂಬೇಡ್ಕರ್ ಜೀವನಚರಿತ್ರೆ ನಾಟಕ ಪ್ರದರ್ಶನ
ಮುಖ್ಯ ಬೇಡಿಕೆಗಳಾಗಿ ಅವರು ‘ಎಸ್.ಎಮ್. ಕನಸ್ಟ್ರಕ್ಷನ್ ಸಂಸ್ಥೆಗೆ ನೀಡಿದ ಟೆಂಡರ್ ರದ್ದುಪಡಿಸಲು, ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತುಗೊಳಿಸಲು, ಎಲ್ಲಾ ಮನೆ ನಿರ್ಮಾಣ ಕಾಮಗಾರಿಗಳ ತನಿಖೆ ನಡೆಸಲು, ಪುರಸಭೆ ಅನುಮತಿ ಇಲ್ಲದೆ ನಿರ್ಮಿಸಿದ ಮನೆಗಳ ದಾಖಲೆಗಳನ್ನು ಬಹಿರಂಗಪಡಿಸಲು ಹಾಗೂ ಫಲಾನುಭವಿಗಳ ಪಟ್ಟಿ ಪುರಸಭೆ ನೋಟಿಸ್ ಬೋರ್ಡ್ನಲ್ಲಿ ಪ್ರಕಟಿಸಲು ಆಗ್ರಹಿಸಿದರು. ಫಲಾನುಭವಿಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು’ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜಶೇಖರ ಹೊಸಮನಿ, ಗೋಪಾಲ್ ರಾಂಪುರೆ, ಪಾಂಡುರಂಗ ಲೊಡ್ಡನೂರ್, ವಿಶ್ವನಾಥ ಹೊಡಬೀರನಳ್ಳಿ, ಆನಂದ ರೆಡ್ಡಿ, ಓಂನರಾವ್, ಲೊಕೇಶ್ ಐನ್ನೂಳ್ಳಿ, ವಿಲಾಸ ದೇಗಲಮಡಿ, ಮನೋಹರ ಕೊರವಿ, ಸಮೀರ್ ಪಟೇಲ್ ಹಾಗೂ ಇತರರು ಉಪಸ್ಥಿತರಿದ್ದರು.





