ಕರ್ನಾಟಕದ ಸಮುದಾಯ ಮಾಧ್ಯಮ ʼಈದಿನ’, ಇದೇ ನವೆಂಬರ್ 30ರಂದು ಕಲಬುರಗಿಯಲ್ಲಿ ತನ್ನ 2ನೇ ಓದುಗರ ಸಮಾವೇಶವನ್ನು ನಡೆಸಲು ಯೋಜಿಸಿದೆ.
ಇದೇ ದಿನ ಈದಿನ.ಕಾಮ್ ಹೊರತರುತ್ತಿರುವ “ಜೈ ಹಿಂದ್–ಜಯ ಕರ್ನಾಟಕ” ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಕಲ್ಯಾಣ ಕರ್ನಾಟಕದ ಇತಿಹಾಸ–ಸಂಸ್ಕೃತಿಯ ಸಂವಾದ ಕಾರ್ಯಕ್ರಮ ರಾಜ್ಯದ ಪ್ರಮುಖ ವ್ಯಕ್ತಿತ್ವಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಐಟಿಬಿಟಿ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ʼನ್ಯೂಸ್ ಮಿನಿಟ್ʼ ಸಂಪಾದಕಿ ಧನ್ಯಾ ರಾಜೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ʼದಿ ವೈರ್ʼನ ಹಿರಿಯ ಪತ್ರಕರ್ತೆ ಆರಫಾ ಖಾನಂ ಶೇರ್ವಾನಿ ಅವರು ವಿಶೇಷ ಶುಭ ಸಂದೇಶ ನೀಡಲಿದ್ದಾರೆ. ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಗದಗ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಓದುಗ ಪ್ರತಿನಿಧಿಗಳು ಕಾರ್ಯಕ್ರಮದ ಭಾಗವಾಗಲಿದ್ದಾರೆ.


ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷ ಮರಿಯಪ್ಪ ಹಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖನೀಜಾ ಫಾತಿಮಾ, ಅಲ್ಲಮಪ್ರಭು ಪಾಟೀಲ್, ಮಹಾಪೌರರಾದ ವರ್ಷಾ ರಾಜು ಜಾನೆ, ಕೆಕೆಆರ್ಟಿಸಿ ಅಧ್ಯಕ್ಷ ಅರುಣ ಕುಮಾರ ಪಾಟೀಲ್, ಮಣ್ಣೂರ್ ಆಸ್ಪತ್ರೆ ಎಂಡಿ ಡಾ. ಫಾರೂಕ್ ಮಣ್ಣೂರ್, ದಸಂಸ ಮುಖಂಡ ಅರ್ಜುನ್ ಭದ್ರೆ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ್ ಸೇರಿದಂತೆ ಹಲವು ಗಣ್ಯರು ವೇದಿಕೆ ಅಲಂಕರಿಸಲಿದ್ದಾರೆ. ಮಧ್ಯಾಹ್ನ 2.30ರಿಂದ ‘ದಿ ಹಿಂದೂ’ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ ಬಹದ್ದೂರ ದೇಸಾಯಿ ಅವರು, ‘ಕಲ್ಯಾಣ ಕರ್ನಾಟಕದ ಚರಿತ್ರೆ ಮತ್ತು ಸಂಸ್ಕೃತಿಯ ಹಿರಿಮೆ’ ಎಂಬ ವಿಷಯ ಮಂಡಿಸಲಿದ್ದಾರೆ. ಸಂಶೋಧಕಿ ಡಾ. ಸ್ವಾತಿ ಶಿವಾನಂದ, ಡಾ. ಲಕ್ಷ್ಮಣ ದಸ್ತಿ ಮತ್ತು ಹಿರಿಯ ಹೋರಾಟಗಾರ ಡಾ. ರಜಾಕ್ ಉಸ್ತಾದ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ನ.30ರಂದು ಕಲಬುರಗಿಯಲ್ಲಿ ʼಈ ದಿನʼ ಓದುಗರ ಸಮಾವೇಶ; ʼಜೈ ಹಿಂದ್-ಜಯ ಕರ್ನಾಟಕʼ ವಿಶೇಷ ಸಂಚಿಕೆ ಬಿಡುಗಡೆ
ನಟ ಮತ್ತು ಚಿಂತಕ ಪ್ರಕಾಶ್ ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮಾರೋಪಕ್ಕೆ ಶಾಸಕ ಹಾಗೂ ಕರ್ನಾಟಕ ಯೋಜನಾ ಮಂಡಳಿಯ ಅಧ್ಯಕ್ಷ ಬಿ ಆರ್ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದು, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಆರ್ ಕೆ ಹುಡಗಿ, ಮೀನಾಕ್ಷಿ ಬಾಳಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಮರೆಪ್ಪ ಚಟ್ಟೇರಕರ್, ಸಿದ್ದಪ್ಪ ಮೂಲಗೆ, ಮಲ್ಲಿಕಾರ್ಜುನ ಕ್ರಾಂತಿ, ಮಹಾದೇವಿ ನಿಂಬಾಳ, ಗುರುರಾಜ್ ಹಾಗೂ ಉದಯ್ ಕುಮಾರ್ ಪಾಟೀಲ್ ಗಣ್ಯ ಉಪಸ್ಥಿತಿ ವಹಿಸಲಿದ್ದಾರೆ.
ಈದಿನದ ಓದುಗರನ್ನೂ, ಸ್ನೇಹಿತರನ್ನೂ, ಬೆಂಬಲಿಗರನ್ನೂ, ಸಂಗಾತಿಗಳನ್ನೂ ಒಗ್ಗೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದ್ದು, ನೀವೂ ಕಾರ್ಯಕ್ರಮದ ಭಾಗವಾಗಲು ಸ್ವಾಗತ ಸಮಿತಿ ಸದಸ್ಯರು ಹಾಗೂ ಈದಿನ ಬಳಗ ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.





