ತೊಗರಿ ನಾಡಾದ ಕಲಬುರಗಿ ಜಿಲ್ಲೆಯ ತೊಗರಿ ಬೆಳೆಗಾರರ ಕೆಎಂಎಫ್ ಮಾದರಿಯಲ್ಲಿ ಸಂರಕ್ಷಣೆಗಾಗಿ ಮಧ್ಯಂತರ ಪರಿಹಾರ ಹಣ ಬಿಡುಗಡೆ ಮಾಡಿ, ಬೆಳೆವಿಮೆ ಹಣ ಮಂಜೂರು ಮಾಡಬೇಕು. ಗೊಡ್ಡು ಹೋದ ತೊಗರಿಗೆ ಪರಿಹಾರ ನೀಡಬೇಕು, ಅತಿವೃಷ್ಟಿ ಪರಿಹಾರದಲ್ಲಿ ಉಂಟಾಗಿರುವ ತಾರತಮ್ಯ ಸರಿಪಡಿಸಿ ಉಳಿದ ರೈತರಿಗೂ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕಲಬುರಗಿ ರೈತರ ಜಾಥಾ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಿದೆ.
ಜಾಥಾಕ್ಕೂ ಮುನ್ನ ಕಲಬುರಗಿ ಜಿಲ್ಲಾಧಿಕಾರಿ ಮೂಲಕ ಚಳಿಗಾಲ ಅಧಿವೇಶನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಚಲುವರಾಯಸ್ವಾಮಿಯವರಿಗೆ ಮನವಿ ಸಲ್ಲಿಸಿದರು.
“ಕಲಬುರಗಿಯ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಬೆಳೆ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗುವಂತೆ ಮಾಡಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ತೊಗರಿ ಬೆಳೆಗೆ ಬೆಂಬಲ ಬೆಲೆ ಕಾನೂನು ಜಾರಿಯಾಗಲೇಬೇಕು. ಇಡೀ ದೇಶದಲ್ಲಿ ಅತಿಹೆಚ್ಚು ತೊಗರಿ ಬೆಳೆಯುವ ಕರ್ನಾಟಕದ ತೊಗರಿ ನಾಡು ಎಂದು ಪ್ರಸಿದ್ಧಿ ಪಡೆದ ಕಲಬುರಗಿ ಜಿಲ್ಲೆ ವಿಶ್ವದಲ್ಲೇ ಗುರುತಿಸಲ್ಪಟ್ಟ(ಜಿಐ ಟ್ಯಾಗ್) ಮಾನ್ಯತೆ ಪಡೆದಿದೆ. ಅಲ್ಲದೆ ದೇಶದಲ್ಲೇ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಅತಿಹೆಚ್ಚು 23 ಪ್ರತಿಶತ ಪ್ರೊಟೀನ್ ಅಂಶ ಹೊಂದಿರುವ ತೊಗರಿ ಬೆಳೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೊಗರಿ ಬೆಳೆಗಾರರ ಬಗ್ಗೆ ವಿಶೆಷ ಕಾಳಜಿ ವಹಿಸಲೇಬೇಕು” ಎಂದು ಆಗ್ರಹಿಸಿದರು.
ಮ್ಯಾನ್ಮಾರ್, ಮೊಜಾಂಬಿಕ್, ಟಾಂಜಾನಿಯಾ, ಸುಡಾನ್, ಬ್ರೆಜಿಲ್ ಹೊರದೇಶಗಳಿಂದ 8,14,068.65 ಲಕ್ಷ ಮೆಟ್ರಿಕ್ ಟನ್ ತೊಗರಿ ಆಮದು ಮಾಡಿಕೊಂಡು ಮಾರುಕಟ್ಟೆಗೆ ತಂದು ಕೇಂದ್ರ ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಂಡಿದೆ. ಹೊರದೇಶದ ತೊಗರಿ ಮೇಲೆ ಶೇ.50ರಷ್ಟು ಆಮದು ಸುಂಕ ಹಾಕಬೇಕು” ರೈತರು ಒತ್ತಾಯಿಸಿದರು.
“ಮಧ್ಯಂತರ ಪರಿಹಾರ ಮಂಜೂರು ಮಾಡಿ ಹಾಗೂ ಬೆಳೆವಿಮೆ ಹಣ ಬಿಡುಗಡೆ ಮಾಡಬೇಕು. ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಪಾರಾಗಿ ಉಳಿದಿರುವ ತೊಗರಿ ಅಪಾರವಾದ ಹೂವು ಉದುರಿ ಕಾಯಿ ಕಚ್ಚುವ ಸಮಯದಲ್ಲಿ ಗೊಡ್ಡು ರೋಗಕ್ಕೆ ತುತ್ತಾಗಿ ತೊಗರಿ ಬೆಳೆಗಾರರು ಕಂಗಾಲಾಗುವಂತಾಗಿದೆ. ಸಂತ್ರಸ್ತ ರೈತರಿಗೆ ಕೂಡಲೇ ಸೂಕ್ತ ಪರಿಹಾರ ಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಿಎಂ ಅವರಿಗೆ ಅಲೆಮಾರಿ ಸಮುದಾಯದ ಗುಡಿಸಲು ಕಾಣದಂತೆ ಮರೆ ಮಾಡಿದ ಜಿಲ್ಲಾಡಳಿತ
“ಡಾ. ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಬೆಂಬಲ ಬೆಲೆ ಕಾನೂನು ಪ್ರಕಾರ ಜಾರಿ ಮಾಡಿ C2+50 ಪರ್ಸೆಂಟ್ ಸೇರಿಸಿ ಬೆಂಬಲ ಬೆಲೆ ಕೊಡಬೇಕು. ಪ್ರತಿ ಕ್ವಿಂಟಲ್ ತೊಗರಿಗೆ 12,500 ಬೆಂಬಲ ಬೆಲೆ ನಿಗದಿ ಮಾಡಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳು KMF ಮಾದರಿಯಲ್ಲಿ ತೊಗರಿ ಬೆಳೆಗಾರರ ಸಂರಕ್ಷಣೆ ಮಾಡಬೇಕು. ಪ್ರತಿ ಕ್ವಿಂಟಲ್ ತೊಗರಿಗೆ ರಾಜ್ಯ ಸರ್ಕಾರ ₹500 ಪ್ರೋತ್ಸಾಹ ಧನ ಕೊಡಬೇಕು ಮತ್ತು ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ₹1,000 ಪ್ರೋತ್ಸಾಹ ಧನ ಕೊಡಬೇಕು. ದ್ವಿದಳ ಧಾನ್ಯಗಳ ಪ್ಲಸ್ ಬೋರ್ಡ್ ಬಲಪಡಿಸಬೆಕು. ತೊಗರಿ ಖರೀದಿ ಕೇಂದ್ರ ತೆರೆಯಬೆಕು. ಬೆಳಗಾವಿ ಮತ್ತು ಅತಿವೃಷ್ಟಿ ಪರಿಹಾರದಲ್ಲಿ ತಾರತಮ್ಯ ಸರಿಪಡಿಸಬೇಕು. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಿ ಸಾಲ ಋಣಮುಕ್ತ ಕಾಯ್ದೆ ಜಾರಿಯಾಗಿ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.
ಕೆಪಿಆರ್ಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪಾ ಕಲಸೆಟ್ಟಿ ಸೇರಿದಂತೆ ಇತರರು ಇದ್ದರು.





