ಮಾಜಿ ಸಂಸದ ಉಗ್ರಪ್ಪ ಅವರು ಕುರುಬರನ್ನು ಎಸ್.ಟಿ. ವರ್ಗಕ್ಕೆ ಸೇರಿಸಬಾರದು ಎಂದು ಬೆಂಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ನೀಡಿದ ಹೇಳಿಕೆಯನ್ನು ಗೊಂಡ ಕುರುಬ ಎಸ್.ಟಿ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರಪ್ಪ ಅವರ ಹೇಳಿಕೆ ಕುರುಬ ಸಮುದಾಯದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ. ತಾವು ನೀಡಿದ ಹೇಳಿಕೆಯನ್ನು ತಕ್ಷಣ ವಾಪಾಸ್ ಪಡೆಯುವ ಜತೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: ಕಲಬುರಗಿ | ಶೀಘ್ರ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ರಾಜಮನೆತನದವರಾದ ನೀವೇ ಎಸ್.ಟಿ ಪಟ್ಟಿಯಲ್ಲಿ ಇರುವಾಗ, ನಾವು ಆದಿವಾಸಿ ಕುರುಬರು ನಾವ್ಯಾಕೆ ಇರಬಾರದು ಎಂದು ಅವರು ಪ್ರಶ್ನಿಸಿದರು. ರಾಜ್ಯದಲ್ಲಿ ಒಟ್ಟು 50 ಜನಾಂಗಗಳು ಎಸ್.ಟಿ ಪಟ್ಟಿಯಲ್ಲಿ ಸೇರಿವೆ. ಅದರಲ್ಲಿ ಗೊಂಡ, ಕಾಡುಕುರುಬ, ಜೇನುಕುರುಬ ಸೇರಿದಂತೆ ಅನೇಕ ಉಪಜಾತಿಗಳಿವೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಕುರುಬರು ಎಸ್.ಟಿ ಪಟ್ಟಿಯಲ್ಲಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ರಾಜ್ಯದ ಕುರುಬ ಸಮುದಾಯಕ್ಕೂ ಅದೇ ಹಕ್ಕು ದೊರಕಬೇಕು. ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೈಲಪ್ಪ ನೆಲೋಗಿ, ರೇವಣಸಿದ್ಧ ಸಾತನೂರು, ಶರಣು ಕನಗೊಂಡ, ವಿಠ್ಠಲ ಪೂಜಾರಿ, ನಿಂಗಪ್ಪ ಸಾಗನೂರು, ವಿಜಯಲಕ್ಷ್ಮಿ ಮುಗಳಿ, ಲಕ್ಷ್ಮಣ ಪೂಜಾರಿ, ಶಂಕರ್ ಹೇರೂರು, ಸಿದ್ದಪ್ಪ ರಸ್ತಂಪೂರ ಹಾಗೂ ವಿಠ್ಠಲ ಬರಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





