ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಅಕ್ಟೋಬರ್ 6 ರಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಹಮ್ಮಿಕೊಂಡಿದ ʼಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿ ಜಾಥಾʼ ನಗರದ ಕೆಕೆಆರ್ಡಿಬಿ ಕಚೇರಿಯಲ್ಲಿ ಮಂಡಳಿಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಸೋಮವಾರ ಕೊನೆಗೊಂಡಿತು.
ಬಳ್ಳಾರಿಯಿಂದ ಪ್ರಾರಂಭವಾದ ಈ ಜಾಥಾವು ರಾಯಚೂರು, ಬೀದರ್ ಮೂಲಕ ಕಲಬುರಗಿಯಲ್ಲಿ ಅ.13 ರಂದು ಕೊನೆಗೊಂಡಿತು.
ಈ ಸಂದರ್ಭದಲ್ಲಿ ಡಬ್ಲ್ಯೂಪಿಐ ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಮಾತನಾಡಿ, ನಮ್ಮಗೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರು ಕಲ್ಯಾಣ ಕರ್ನಾಟಕವು ಇಂದಿಗೂ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ ಯಾವುದೇ ಅಭಿವೃದ್ಧಿಗಳು ಆಗುತ್ತಿಲ್ಲ. ಮೂಲಕ 2013ರಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ್ದು, ಆ ಸಮಯದಲ್ಲಿ ಸುಮಾರು ರೂ.25 ಸಾವಿರ ಕೋಟಿ ಅನುದಾನ ಕಳೆದ 12 ವರ್ಷಗಳಲ್ಲಿ ಬಿಡುಗಡೆಯಾದರೂ ಅಭಿವೃದ್ಧಿಯಾಗದೇ ಜನರಿಗೆ ಸೂಕ್ತವಾದ ಸೌಲಭ್ಯಗಳು ಸಿಗುತ್ತಿಲ್ಲ.ರಾಜ್ಯದ ಅತಿ ಬಡ ಜಿಲ್ಲೆಗಳು ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಕೊಪ್ಪಳ ಭಾಗದಲ್ಲಿ ಯಾವುದೇ ದೊಡ್ಡ ಕಂಪನಿಗಳು ಇಲ್ಲದೇ ಇಲ್ಲಿನ ಜನರು ಉದ್ಯೋಗಕ್ಕಾಗಿ ಹೊರಪ್ರದೇಶಗಳಿಗೆ ತೆರಳುವ ಪರಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಲಬುರಗಿ | ಸರ್ಕಾರಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಭರ್ತಿಗಾಗಿ ಬೃಹತ್ ಪ್ರತಿಭಟನೆ
ಈ ಭಾಗದಿಂದ ವರ್ಷಕ್ಕೆ 10 ಸಾವಿರ ಇಂಜಿನಿಯರಿಂಗ್ ಪದವಿ ಪಡೆದು ಉದ್ಯೋಗಕ್ಕಾಗಿ ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುತ್ತಾರೆ. 30 ಲಕ್ಷ ಜನರು ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸುಮಾರು 80 ಸಾವಿರ ಸರ್ಕಾರಿ ಹುದ್ದೆಗಳು ಖಾಲಿಯಾಗಿವೆ, ಅದರಲ್ಲೂ 22 ಸಾವಿರ ಶಿಕ್ಷಕರ ಹುದ್ದೆಗಳು ಇನ್ನೂ ಭರ್ತಿಯಾಗಿಲ್ಲ ಇದರ ಬಗ್ಗೆ ಸಂಬಂಧಪಟ್ಟವರು ಯಾರು ಕೂಡ ಗಮನಹರಿಸುತ್ತಿಲ್ಲ ಎಂದರು.
ಈ ಕೂಡಲೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಡಿಎಂಎಫ್, ಕೆಎಂಇಆರ್ಎಫ್ ಅನುದಾನಗಳ ಸರಿಯಾದ ಬಳಕೆಯಾಗಬೇಕು, ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತು ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡಬೇಕು, ನೀರಾವರಿ ಯೋಜನೆಗಳ ಶೀಘ್ರ ಪೂರ್ಣಗೋಳಿಸಬೇಕು, ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಶಿಕ್ಷಕರ ಹುದ್ದೆಗಳ ಭರ್ತಿ ಮಾಡಬೇಕು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ನಡೆಯುವ ಅನ್ಯಾಯ ತಡೆಯಲು ವಿಶೇಷ ನ್ಯಾಯಮಂಡಳಿ ಸ್ಥಾಪಿಸುವುದು, ಜನಸಂಖ್ಯೆ ಆಧಾರದ ಮೇಲೆ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ ರೂಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಸಾಳಿಯನ್, ಪ್ರಭಾಕರ್, ಹಬೀಬುಲ್ಲಾ ಖಾನ್, ರಾಜ್ಯ ಉಪಾಧ್ಯಕ್ಷ ಮುಜಾಹಿದಾ ಪಾಷಾ ಕುರೆಶಿ, ರಾಜ್ಯ ಕಾರ್ಯದರ್ಶಿ ಮೂಬೀನ್ ಅಹಮ್ಮದ್, ಜಬ್ಬಾರ್ ಗೋಲಾ, ಅಫೈಲ್ ಮೆಹಮೂದ್, ಫರೀದ್ ಮಾನವಿ, ಫಹಾದ್ ಮೊಕ್ಸಿನ್, ಇಬ್ರಾಹಿಂ ಪಟೇಲ್, ಮಹೇಶ್ ರಾಥೋಡ್, ಸಯ್ಯದ್ ಅಮ್ಮದ್, ಆದಿಲ್ ಪಟೇಲ್, ಸಲೀಂ ಚಿತಪೂರಿ, ಫರೀದ್, ಸೂಫಿಯಾನ್, ಮುಭಾಶಿರ್, ಸಯ್ಯದ್ ಇರ್ಫಾನ್ ಸೇರಿದಂತೆ ಹಲವರು ಇದ್ದರು.





