ಅಭಿವೃದ್ಧಿ ವಿಚಾರದಲ್ಲಿ ಕಲಬುರಗಿ ಜಿಲ್ಲೆಗೆ ಯಾವುದೇ ಅನ್ಯಾಯವಾಗಲು ನಾನಾಗಲಿ ಅಥವಾ ಸಚಿವ ಶರಣಪ್ರಕಾಶ ಪಾಟೀಲ ಅವರಾಗಲೀ ಬಿಡುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟನೆಯಾಗಲಿದ್ದು, ಆಗಸ್ಟ್ 15ರಿಂದ ಸಾರ್ವಜನಿಕರ ಕುಂದು ಕೊರತೆ ಸ್ವೀಕರಿಸುವುದರ ಜೊತೆಗೆ ಪರಿಹಾರಕ್ಕಾಗಿ ಒಂದು ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ರಾಜ್ಯ ಸರ್ಕಾರದ ಮಹತ್ವಪೂರ್ಣ ಗ್ಯಾರಂಟಿ ‘ಗೃಹಜ್ಯೋತಿ’ ಯೋಜನೆಯ ಬಿಡುಗಡೆ ಸಮಾರಂಭದ ಕುರಿತು ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ನಾಯಕರು ಹಾಗೂ ಪ್ರಮುಖ ಕಾರ್ಯಕರ್ತರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“ನಿಮ್ಮೆಲ್ಲರ ಹಾಗೂ ಮತದಾರರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಪಕ್ಷ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ರಾಜ್ಯ ಸರ್ಕಾರ ಮುನ್ನಡೆದಿದೆ. ಈ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಕಲಬುರಗಿಯಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಯೋಜನೆಯನ್ನು ಮನೆಮನೆಗೆ ತಲುಪಿಸಿ ಯಶಸ್ವಿಗೊಳಿಸಬೇಕು” ಎಂದು ಹೇಳಿದರು.
“ಅನ್ನಭಾಗ್ಯ ಯೋಜನೆ ಜಾರಿಯಾಗದಂತೆ ತಡೆಯಲು ಬಿಜೆಪಿ ಪ್ರಯತ್ನಿಸಿತ್ತು. ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ದಾಸ್ತಾನನ್ನು ರಾಜ್ಯಕ್ಕೆ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತು. ಆದರೂ ಕೂಡಾ ಸರ್ಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಿದೆ” ಎಂದು ತಿಳಿಸಿದರು.
“ಶಕ್ತಿ ಯೋಜನೆಯ ಪರಿಣಾಮ ಪ್ರತಿನಿತ್ಯ 55 ಲಕ್ಷ ಮಂದಿ ಮಹಿಳೆಯರು ಬಸ್ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಅವರೆಲ್ಲ ಕೇವಲ ಕಾಂಗ್ರೆಸ್ಗೆ ಮಾತ್ರ ಸೇರಿದವರಾ? ಮಹಿಳೆಯರು ದೇವಾಲಯಗಳಿಗೆ ಭೇಟಿ ಮಾಡಲು ಶಕ್ತಿ ಯೋಜನೆಯ ಮೂಲಕ ಕಾಂಗ್ರೆಸ್ ಅನುವು ಮಾಡಿಕೊಟ್ಟಿತು. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೂ ಕೂಡಾ ಈ ಯೋಜನೆ ಕುರಿತು ಶ್ಲಾಘಿಸಿದ್ದಾರೆ” ಎಂದರು.
“ಕಾಂಗ್ರೆಸ್ ಗ್ಯಾರಂಟಿಗಳು ಬಿಜೆಪಿಗರನ್ನು ಸಂಕಷ್ಟಕ್ಕೀಡು ಮಾಡಿವೆ. ಹಾಗಾಗಿ ಅವರೆಲ್ಲ ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಜನರಿಗೆ ಕಟ್ಟುನಿಟ್ಟಾಗಿ ತಲುಪಿಸುವ ಮೂಲಕ ಬಿಜೆಪಿಗರ ಅಪಪ್ರಚಾರದ ಕುರಿತು ಜನರಿಗೆ ಮನವರಿಕೆ ಮಾಡಬೇಕು. ನಾವು ಐದು ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುತ್ತೇವೆ. ಹಾಗೆಯೇ ಆರನೆಯ ಗ್ಯಾರಂಟಿ ಕೂಡಾ ಈಗಾಗಲೇ ಜಾರಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿದಾರಿಗೆ ಬಂದಿದೆ. ಇನ್ನೂ ಬರಬೇಕಿದೆ” ಎಂದು ಅಭಿಪ್ರಾಯಪಟ್ಟರು.
“ರಾಜ್ಯ ಸರ್ಕಾರ ಆಡಳಿತ ಹಾಗೂ ಗ್ಯಾರಂಟಿಗಳ ಜಾರಿಗೆ ತರುವ ನಿಟ್ಟಿನಿಂದ ಪ್ರಯತ್ನ ನಡೆಸುತ್ತಿರುವುದಕ್ಕೆ ಬಿಜೆಪಿಗರು ಹತಾಶೆರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ʼವರ್ಗಾವಣೆಯಲ್ಲಿ ಅಕ್ರಮ ನಡೆದಿದೆ. ಅದು ಪೆಂಡ್ರೈವ್ನಲ್ಲಿದೆಯೆಣದು ಹೇಳಿದ್ದರು. ಹಾಗಾಗದರೆ ಪೆಂಡ್ರೈವ್ ಎಲ್ಲಿ ಹೋಯಿತು?” ಎಂದರು.
ಈ ಸುದ್ದಿ ಓದಿದ್ದೀರಾ? ಗೃಹಜ್ಯೋತಿ ಯೋಜನೆಗೆ ಶನಿವಾರ ಚಾಲನೆ, ಫಲಾನುಭವಿಗಳ ನೋಂದಣಿ ಎಷ್ಟು ಗೊತ್ತಾ?
“ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕರುಗಳಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮುಖಂಡರುಗಳಾದ ಸುಭಾಷ್ ರಾಠೋಡ, ಬಸವರಾಜ ಭೀಮಳ್ಳಿ, ಶರಣು ಮೋದಿ, ನೀಲಕಂಠರಾವ ಮುಲಗೆ ಸೇರಿದಂತೆ ಇತರರು ಇದ್ದರು.




