ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ವಿಜ್ಞಾನ ಸಂವಹನ ಶಿಬಿರದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಂದಗೂರು ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕ ರವೀಂದ್ರ ರುದ್ರವಾಡಿ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಪ್ರಬಂಧ ಸ್ಪರ್ಧೆಯನ್ನು ‘ಜಾಗತಿಕ ತಾಪಮಾನ ಹೆಚ್ಚಳ’ ಎಂಬ ಪ್ರಸ್ತಾವನೆಯ ಮೇಲೆ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಒಟ್ಟು 28 ಮಂದಿ ವಿಜ್ಞಾನ ಲೇಖಕರು ಹಾಗೂ ವಿಜ್ಞಾನ ಸಂವಹನಕಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ವೈಜ್ಞಾನಿಕ ತಿಳುವಳಿಕೆ, ಬರವಣಿಗೆಯ ನೈಪುಣ್ಯ ಹಾಗೂ ಸಂವಹನ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧಗಳನ್ನು ವಿಷಯದ ಸ್ಪಷ್ಟತೆ, ವೈಜ್ಞಾನಿಕ ತರ್ಕಬದ್ಧತೆ, ಮಾಹಿತಿಯ ಸಂಗ್ರಹ ಮತ್ತು ವಿಶ್ಲೇಷಣೆ, ಭಾಷಾ ಶೈಲಿ ಹಾಗೂ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿಷಯ ಮಂಡಿಸಿದ ಸಾಮರ್ಥ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಯಿತು. ಈ ಎಲ್ಲ ಅಂಶಗಳಲ್ಲಿ ರವೀಂದ್ರ ರುದ್ರವಾಡಿ ಅವರ ಪ್ರಬಂಧ ವಿಶಿಷ್ಟವಾಗಿ ಮೆರೆದಿದ್ದು, ನ್ಯಾಯಮಂಡಳಿಯ ಮೆಚ್ಚುಗೆಗೆ ಪಾತ್ರವಾಯಿತು.

ರವೀಂದ್ರ ರುದ್ರವಾಡಿ ಅವರು ವಿಜ್ಞಾನ ಲೇಖನ, ವಿಜ್ಞಾನ ಸಂವಹನ, ಶಿಕ್ಷಣ ಹಾಗೂ ವೈಚಾರಿಕ ಸಾಹಿತ್ಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ಅವರು ನ್ಯಾಷನಲ್ ಬುಕ್ ಟ್ರಸ್ಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ಪ್ರಕಟಣೆಗಳಿಗೆ ತಮ್ಮ ಲೇಖನಗಳನ್ನು ನೀಡಿದ್ದಾರೆ. ವೈಜ್ಞಾನಿಕ ವಿಚಾರಗಳನ್ನು ಸರಳ, ಸಂವಹನಾತ್ಮಕ ಹಾಗೂ ಜನಪರವಾಗಿ ಮಂಡಿಸುವ ಅವರ ವಿಶೇಷ ಶೈಲಿಯೇ ಈ ಸ್ಪರ್ಧೆಯಲ್ಲಿ ಅವರಿಗೆ ಪ್ರಥಮ ಸ್ಥಾನ ತಂದುಕೊಟ್ಟಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಫೆ.1ರಿಂದ ಮುಂಡರಗಿಯಲ್ಲಿ ಗ್ರಾಮೀಣ ಕ್ರಿಕೆಟ್ ಟೂರ್ನಮೆಂಟ್: ತಂಡಗಳಿಗೆ ಆಹ್ವಾನ
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರ ರುದ್ರವಾಡಿ ಅವರು, ವಿಜ್ಞಾನವನ್ನು ವಿದ್ಯಾರ್ಥಿಗಳು ಮತ್ತು ಸಮಾಜದ ಸಾಮಾನ್ಯ ಜನರ ಬಳಿಗೆ ತಲುಪಿಸುವ ದೃಷ್ಟಿಯಿಂದ ನಿರಂತರವಾಗಿ ಲೇಖನ, ಉಪನ್ಯಾಸ ಹಾಗೂ ಸಂವಹನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಅವರ ಈ ಸಾಧನೆ ಶಿಕ್ಷಣ ಮತ್ತು ವಿಜ್ಞಾನ ಸಂವಹನ ಕ್ಷೇತ್ರಕ್ಕೆ ಮತ್ತೊಂದು ಗೌರವ ತಂದುಕೊಟ್ಟಿದೆ.





