ನಗರ ಜಿಲ್ಲಾ ಕೋರ್ಟ್ ಕಟ್ಟಡಗಳ ಸಂಕೀರ್ಣದಲ್ಲಿ ಬಾಂಬ್ ಇರಿಸಿರುವುದಾಗಿ ಇ-ಮೇಲ್ ಮೂಲಕ ಬಂದ ಬೆದರಿಕೆ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸರು ಹಾಗೂ ಬಾಂಬ್ ತಪಾಸಣಾ ದಳಗಳು ಕಟ್ಟಡದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಅಧಿಕೃತ ಇ-ಮೇಲ್ ವಿಳಾಸಕ್ಕೆ ಬೆಳಿಗ್ಗೆ 5.40ರ ಸುಮಾರಿಗೆ ಮೂರು ಪುಟಗಳ ಇ-ಮೇಲ್ ಬಂದಿದ್ದು, ಬೆಳಿಗ್ಗೆ 11.50ಕ್ಕೆ ನ್ಯಾಯಾಲಯ ಅಥವಾ ನ್ಯಾಯಾಧೀಶರ ಕೊಠಡಿಯಲ್ಲಿ ವಿಷಾನಿಲ ತುಂಬಿದ ಸೈನಾಡ್ ಆರ್ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು ಹಾಗೂ ನಾಗರಿಕರನ್ನು ಸ್ಥಳಾಂತರಿಸುವಂತೆ ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.

ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಕಟ್ಟಡದಲ್ಲಿದ್ದ ನ್ಯಾಯಾಧೀಶರು, ವಕೀಲರು, ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಹೊರಗೆ ಕಳುಹಿಸಿದರು. ಕೆಲಕಾಲ ನ್ಯಾಯಾಲಯ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಗ್ರಾಮೀಣ ಭಾಗಗಳಿಂದ ವಿಚಾರಣೆಗೆ ಆಗಮಿಸಿದ್ದ ಕಕ್ಷಿದಾರರು ಹಾಗೂ ವಕೀಲರು ಗೊಂದಲಕ್ಕೆ ಒಳಗಾದರು. ಪೊಲೀಸರು ಕಟ್ಟಡವನ್ನು ಸಂಪೂರ್ಣವಾಗಿ ಭದ್ರತಾ ವಲಯದಲ್ಲಿ ತೆಗೆದುಕೊಂಡು ಪ್ರತಿಯೊಂದು ಕೋಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶೋಧ ನಡೆಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಸ್ನೇಹಿತರಿಬ್ಬರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ
ಇ-ಮೇಲ್ ಒಂದು ಮುಸ್ಲಿಂ ಹೆಸರಿನ ಐಡಿ ಮೂಲಕ ಕಳುಹಿಸಲ್ಪಟ್ಟಿರುವುದಾಗಿ ತಿಳಿದುಬಂದಿದೆ. ಸೈಬರ್ ಕ್ರೈಂ ವಿಭಾಗದ ಸಹಕಾರದೊಂದಿಗೆ ಪೊಲೀಸರು ಇ-ಮೇಲ್ ಮೂಲ ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.





