‘ಅಸಂಸದೀಯ’ ಪದಗಳನ್ನು ಬಳಸಿರುವುದನ್ನು ಖಂಡಿಸಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಂಗಳವಾರ ಸಾಂಕೇತಿಕ ಧರಣಿ ನಡೆಸಿದರು.
ಕಲಬುರಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯೆ ರೇಣುಕಾ ಅವರು ಪದೇಪದೆ ‘ಅಸಂಸದೀಯ’ ಪದಗಳನ್ನು ಬಳಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಇಂದಿರಾ ಗಾಂಧಿ ಸ್ಮಾರಕ ಭವನದ ಎದುರು ಕೆಲಕಾಲ ಸಾಂಕೇತಿಕ ಧರಣಿ ನಡೆಸಿದರು.
ಧರಣಿ ಉದ್ದೇಶಿಸಿ ಮಾತನಾಡಿದ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ಕಟ್ಟಿಮನಿ, “ಪಾಲಿಕೆ ಸದಸ್ಯರಿಂದ ಅಸಂಸದೀಯ ಪದ ಬಳಕೆ ಖಂಡನೀಯ. ಇದರಿಂದ ನೌಕರರ ಮನಸ್ಸಿಗೆ ತೀವ್ರ ನೋವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಮೇಯರ್ ಹಾಗೂ ಪಾಲಿಕೆ ಆಯುಕ್ತರು ಸದಸ್ಯರಿಗೆ ತಾಕೀತು ಮಾಡಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮರ್ಯಾದಾ ಹತ್ಯೆ ಖಂಡಿಸಿ ; ಡಿವೈಎಫ್ಐ ಪ್ರತಿಭಟನೆ
ನಂತರ ಪಾಲಿಕೆ ಅಧಿಕಾರಿಗಳು ಮೇಯರ್ ವರ್ಷಾ ಜಾನೆ ಹಾಗೂ ಆಯುಕ್ತ ಅವಿನಾಶ ಶಿಂದೆ ಅವರಿಗೆ ಮನವಿ ಸಲ್ಲಿಸಿದರು. ಆದರೆ ತಮ್ಮ ಬೇಡಿಕೆಗಳಿಗೆ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆಯಲ್ಲಿ ಧರಣಿ ಮುಂದುವರಿಸಿದ ಪರಿಣಾಮ, ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಸಾಮಾನ್ಯ ಸಭೆ ಸುಮಾರು ಹೊತ್ತಾದರು ಆರಂಭವಾಗಲಿಲ್ಲ.





