ನಗರದ ಸ್ಟೇಷನ್ ಬಝಾರ್ ಅಂಗನವಾಡಿ ಕೇಂದ್ರದಲ್ಲಿ ಮೊಟ್ಟೆ ಹಣ ಬಿಡುಗಡೆ ಮಾಡುವುದಕ್ಕಾಗಿ ಲಂಚ ಪಡೆಯುತ್ತಿದ್ದ ಅಂಗನವಾಡಿ ಟೀಚರ್ ಹಾಗೂ ಯುಎಫ್ಡಬ್ಲ್ಯೂಸಿ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಂಧಿತರನ್ನು ಅಂಗನವಾಡಿ ಟೀಚರ್ ಹೀನಾ ಹಾಗೂ ಯುಎಫ್ಡಬ್ಲ್ಯೂಸಿ ಸಿಬ್ಬಂದಿ ಪಿಂಕುಬಾಯಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಉದಯನಗರ ನಿವಾಸಿ ಸೌಭಾಗ್ಯ ಬಲಭೀಮ ರಾಠೋಡ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್–2 ರಾಜಶೇಖರ ಬಡದೆಸಾರ ನೇತೃತ್ವದ ತಂಡ ದಾಳಿ ನಡೆಸಿದೆ.
ಸ್ಟೇಷನ್ ಬಝಾರ್ ಅಂಗನವಾಡಿ ಕೇಂದ್ರಕ್ಕೆ ಮೂರು ತಿಂಗಳ ಮೊಟ್ಟೆ ಹಣವಾಗಿ 14,490 ರೂ. ಜಮೆಯಾಗಿದ್ದು, ಹಣ ಬಿಡುಗಡೆಗೆ ಆರೋಪಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಒಂದು ತಿಂಗಳ ಮೊಟ್ಟೆ ಹಣ 4,830 ರೂ. ಹಾಗೂ ನವೆಂಬರ್-ಡಿಸೆಂಬರ್ ತಿಂಗಳಿಗೆ ತಲಾ 600 ರೂ.ನಂತೆ ಒಟ್ಟು 6,030 ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಯುಜಿಸಿ ನಿಯಮ ಜಾರಿಗೆ ಒತ್ತಾಯಿಸಿ ಫೆ.9ರಂದು ರಾಜ್ಯಾದ್ಯಂತ ದಸಂಸ ಪ್ರತಿಭಟನೆ
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.





