ಮುಖ್ಯಮಂತ್ರಿ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ ಯುವಜನರಿಗೆ ನಿರಾಸೆ ಉಂಟುಮಾಡುವಂತಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಕಲಬುರಗಿ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಸ್.ಹೆಚ್ ಅವರು, ‘ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮಣಿದು ಈ ವರ್ಷದಲ್ಲಿ 56,432 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹವಾದರೂ, 800 ಕೆಪಿಎಸ್ ಶಾಲೆಗಳನ್ನು ತೆರೆಯುವ ಯೋಜನೆಯ ಪರಿಣಾಮವಾಗಿ ರಾಜ್ಯದ 40,ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇದರಿಂದ ಸಾವಿರಾರು ಶಿಕ್ಷಕರ ಹುದ್ದೆಗಳು ಕಡಿತಗೊಳ್ಳುವ ಭೀತಿ ಎದುರಾಗಿದ್ದು, ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಬದಲು ಇರುವ ಉದ್ಯೋಗಗಳನ್ನು ನಾಶಗೊಳಿಸುವಂತ ಯೋಜನೆಯಾಗಿದೆ’ ಎಂದು ಅವರು ಟೀಕಿಸಿದ್ದಾರೆ.
‘ಯುವಜನರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಯಾವುದೇ ನಿರ್ದಿಷ್ಟ ಯೋಜನೆಗಳು ಅಥವಾ ಸ್ಪಷ್ಟ ಉದ್ಯೋಗ ನೀತಿ ಈ ಬಜೆಟ್ನಲ್ಲಿ ಕಾಣಿಸಿಲ್ಲ. ಕಳೆದ ವರ್ಷ ಸರ್ಕಾರ ಘೋಷಿಸಿದ ಯುವಜನ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಾದ ಕಾರ್ಯಯೋಜನೆಯೂ ಇಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ ನಿರುದ್ಯೋಗಿ ಯುವಜನರಿಗೆ ನೀಡಲಾಗುತ್ತಿದ್ದ ಯುವನಿಧಿ ಯೋಜನೆಗೆ ಈ ಬಜೆಟ್ನಲ್ಲಿ ಎಷ್ಟು ಅನುದಾನ ಮೀಸಲಿಟ್ಟಿದೆ ಎಂಬುದರ ಕುರಿತು ಸ್ಪಷ್ಟತೆ ನೀಡಲಾಗಿಲ್ಲ’ ಎಂದು ಅವರು ಆರೋಪಿಸಿದ್ದಾರೆ.
‘ಇನ್ನೊಂದೆಡೆ, ಮದ್ಯ ಮಾರಾಟದಿಂದ ಬರುವ ಅಬಕಾರಿ ತೆರಿಗೆಯಿಂದ ಸುಮಾರು 45 ಸಾವಿರ ಕೋಟಿ ರೂಪಾಯಿ ಆದಾಯವನ್ನು ಸರ್ಕಾರ ನಿರೀಕ್ಷಿಸಿದ್ದು, ಇದು ಮದ್ಯ ಮಾರಾಟವನ್ನು ಹೆಚ್ಚಿಸುವ ಉದ್ದೇಶವನ್ನು ತೋರಿಸುತ್ತದೆ. ಮದ್ಯ ಮಾರಾಟ ಹೆಚ್ಚಳದಿಂದ ಜನಸಾಮಾನ್ಯರ, ವಿಶೇಷವಾಗಿ ಯುವಜನರ ಹಾಗೂ ಕುಟುಂಬಗಳ ನೆಮ್ಮದಿಗೆ ಧಕ್ಕೆಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಐತಿಹಾಸಿಕ 17ನೇ ಬಜೆಟ್: ಸಿದ್ದರಾಮಯ್ಯರಿಗೆ ಅಭಿನಂದನೆಗಳ ಮಹಾಪೂರ
ಒಟ್ಟಾರೆ, ‘ಯುವಜನರ ಆಶೋತ್ತರಗಳನ್ನು ಪೂರೈಸದ ಈ ಬಜೆಟ್ ಯುವಜನರ ಪಾಲಿಗೆ ನಿರಾಶಾದಾಯಕವಾಗಿದೆ ಎಂದು ಎಐಡಿವೈಓ ಕಲಬುರಗಿ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ’ ಎಂದು ಅವರು ತಿಳಿಸಿದ್ದಾರೆ.





