ಗರ್ಭಿಣಿಯನ್ನು ಕೊಂದುದಾದ ಜಾತಿ ಪ್ರತಿಷ್ಠೆಯ ಅಮಾನವೀಯ ಕ್ರೌರ್ಯವನ್ನು ಖಂಡಿಸಿ, ಆರೋಪಿಗಳೆಲ್ಲರ ಬಂಧನ ಹಾಗೂ ಕಠಿಣ ಶಿಕ್ಷೆ ವಿಧಿಸುವಂತೆ ಮತ್ತು ಮರ್ಯಾದಾ ಹತ್ಯೆ ತಡೆಗಾಗಿ ನಿರ್ದಿಷ್ಟ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಬುಧವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮರ್ಯಾದಾ ಹತ್ಯೆ ವಿರೋಧಿ ಹೋರಾಟ ಸಮಿತಿ (ಕಲಬುರಗಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ‘ಈಚೆಗೆ ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ, ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಏಳು ತಿಂಗಳ ಗರ್ಭಿಣಿ ಮಗಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಜಾತಿ ಅಹಂಕಾರ ಮತ್ತು ಪ್ರತಿಷ್ಠೆಯಿಂದ ಪ್ರೇರಿತವಾಗಿರುವ ಇಂತಹ ಮರ್ಯಾದಾ ಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮಾನ್ಯ ಮತ್ತು ಅವಳ ಪತಿ ವಿವೇಕಾನಂದ ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಧಾರವಾಡ ತಾಲ್ಲೂಕಿನ ಶಿವಳ್ಳಿಯಲ್ಲಿ ವಾಸವಾಗಿದ್ದರು. ದಾಳಿಯ ಸಾಧ್ಯತೆಯನ್ನು ಅರಿತಿದ್ದ ಕುಟುಂಬವು ಮನೆಯ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ತಂದೆ ಪ್ರಕಾಶಗೌಡ ಪಾಟೀಲ ಕೊಡಲಿ ಹಿಡಿದು ಬರುವ ದೃಶ್ಯಗಳು ಅದರಲ್ಲಿ ದಾಖಲಾಗಿವೆ. ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಎಲ್ಲ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಕೂಡಲೇ ಉಳಿದ ಎಲ್ಲರನ್ನೂ ಬಂಧಿಸಬೇಕು’ ಎಂದು ಆಗ್ರಹಿಸಲಾಯಿತು.
‘ಜಾತಿ ವ್ಯವಸ್ಥೆ ಹಾಗೂ ಮನುವಾದಿ ಚಿಂತನೆಗಳು ಯುವಜನರ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ದಾರಿ ಮಾಡಿಕೊಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮರ್ಯಾದಾ ಹತ್ಯೆಗಳು ಸಾಂಸ್ಕೃತಿಕ ಅಪರಾಧಗಳಾಗಿದ್ದು, ಅವುಗಳನ್ನು ತಡೆಯಲು ನಿರ್ದಿಷ್ಟ ಕಾನೂನು ಅಗತ್ಯವಿದೆ’ ಎಂದು ಒತ್ತಾಯಿಸಿದರು.
‘ಬಸವಣ್ಣನ ಸಮಾನತೆಯ ತತ್ವಗಳನ್ನು ನೆನಪಿಸಿದ ಪ್ರತಿಭಟನಾಕಾರರು, ಕೇವಲ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸುವುದಲ್ಲದೆ, ಅವರ ಕನಸಿನ ಸಮಾನತೆಯ ಸಮಾಜ ನಿರ್ಮಿಸಲು ಮರ್ಯಾದಾ ಹತ್ಯೆ ತಡೆ ಕಾಯ್ದೆ ರೂಪಿಸುವುದು ಸರ್ಕಾರದ ಹೊಣೆಗಾರಿಕೆ’ ಎಂದು ಹೇಳಿದರು.
ಪ್ರಮುಖ ಬೇಡಿಕೆಗಳಾದ ಮರ್ಯಾದಾ ಹತ್ಯೆ ತಡೆಗಾಗಿ ಕೂಡಲೇ ನಿರ್ದಿಷ್ಟ ಕಾನೂನು ರೂಪಿಸಬೇಕು, ಮಾನ್ಯಳ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಜಾತಿ ಆಧಾರಿತ ಹಿಂಸೆ ತಡೆಯಲು ಅಟ್ರಾಸಿಟಿ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು, ಸಂವಿಧಾನಾತ್ಮಕ ಮೌಲ್ಯಗಳ ಜಾಗೃತಿಗಾಗಿ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬೇಕು ಆಗ್ರಹಿಸಿ ಮನವಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ಪ್ರತಿಭಟನೆಯಲ್ಲಿ ಆರ್.ಕೆ. ಹುಡಗಿ, ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಎಸ್.ಬಿ. ಹೊಸಮನಿ, ಕೆ. ನೀಲಾ, ಡಾ. ಜಯದೇವಿ ಗಾಯಕವಾಡ್, ಗವಿಸಿದ್ದಪ್ಪ ಪಾಟೀಲ್, ಟಿ. ಧನರಾಜ, ಸುಧಾಮ ಧನ್ನಿ, ಕಾಶಿನಾಥ್ ಬಂಡಿ, ಶ್ರೀಮಂತ ಬಿರದಾರ, ಪದ್ಮಿನಿ ಕಿರಣಗಿ, ವಿರುಪಾಕ್ಷಪ್ಪ ತಡಕಲ್, ಕೋದಂಡರಾಮಪ್ಪ, ನಾಗಪ್ಪ ರಾಯಚೂರಕರ್, ಈಶ್ವರ ಕಟ್ಟಿಮನಿ, ಪದ್ಮಿನಿ, ಲವಿತ್ರ ವಸ್ತ್ರದ, ಅರುಣ ಜೋಳದಕೂಡ್ಲಿಗಿ, ಸಿದ್ದಪ್ಪ ಹೊಸಮನಿ, ದತ್ತಾತ್ರೇಯ ಇಕ್ಕಳಕಿ, ಅರ್ಜುನ ಗೊಬ್ಬರ್, ಸುಜಾತಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.





