ರಂಜಾನ್ ಹಬ್ಬದ ಅಂಗವಾಗಿ ಸಮಾಜ ಸೇವಕ ಡಾ. ಫಾರೂಕ ಮಣ್ಣೂರ ಅವರು ಬಡ ಹಾಗೂ ನಿರ್ಗತಿಕ ಮುಸ್ಲಿಂ ಕುಟುಂಬಗಳಿಗೆ ಶುಕ್ರವಾರ ದಿನಸಿ ಕಿಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಚಿಂಚೋಳಿ ತಾಲೂಕಿನ ಸುಲೇಪೇಟ, ಕುಪನೂರ, ಗಾರಂಪಳ್ಳಿ, ದಸ್ತಾಪೂರ ಸೇರಿದಂತೆ ಹಲವು ಗ್ರಾಮಗಳು ಹಾಗೂ ಕಾಳಗಿ ತಾಲೂಕಿನ ವಜೀರಗಾಂವ ಗ್ರಾಮದಲ್ಲಿನ ಬಡ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳಿರುವ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಫಾರೂಕ ಮಣ್ಣೂರ ಮಾತನಾಡಿ, ‘ರಂಜಾನ್ ಮಾಸವು ಉಪವಾಸ, ಪ್ರಾರ್ಥನೆ, ತ್ಯಾಗ ಮತ್ತು ದಾನಧರ್ಮದ ಮಹತ್ವವನ್ನು ಸಾರುವ ಪವಿತ್ರ ಕಾಲ. ಸಮಾಜದ ದುರ್ಬಲ ವರ್ಗದವರ ಸಂಕಷ್ಟವನ್ನು ಅರಿತು ಅವರಿಗೆ ನೆರವಾಗುವುದು ಈ ಮಾಸದ ಮುಖ್ಯ ಉದ್ದೇಶ’ ಎಂದು ಹೇಳಿದರು.
‘ಬಡ ಕುಟುಂಬಗಳು ಹಬ್ಬವನ್ನು ಸಂತೋಷದಿಂದ ಆಚರಿಸಬೇಕೆಂಬ ಉದ್ದೇಶದಿಂದ ಈ ಕಿಟ್ಗಳನ್ನು ವಿತರಿಸಲಾಗಿದೆ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಸಹಾನುಭೂತಿ, ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬಲಪಡಿಸುತ್ತವೆ. ಎಲ್ಲಾ ಧರ್ಮಗಳ ಜನರು ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಹಬ್ಬಗಳನ್ನು ಆಚರಿಸುವ ಮೂಲಕ ಏಕತೆ ಸಾರಬೇಕು’ ಎಂದು ಅವರು ಕರೆ ನೀಡಿದರು.
ಇದೇ ವೇಳೆ ಸಾಲೇಬೀರನಳ್ಳಿ ಗ್ರಾಮದ ಮುಸ್ಲಿಂ ಸಮಾಜದ ಅಧ್ಯಕ್ಷ ಜಮೀರೊದ್ದಿನ ಪಟೇಲ್ ಅವರು ಮಾತನಾಡಿ, ‘ಬಡವರ ನೆರವಿಗೆ ಧಾವಿಸಿರುವುದು ಶ್ಲಾಘನೀಯ. ಇಂತಹ ಸೇವೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಸಾಲೇಬೀರನಳ್ಳಿ ಮಸೀದಿಯಲ್ಲಿ ಇಫ್ತಾರ್ ಕೂಟವೂ ನಡೆಯಿತು. ಉಪವಾಸ ಮುಕ್ತಾಯದ ನಂತರ ಭಕ್ತರು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಇದನ್ನು ಓದಿದ್ದೀರಾ? ಯಾದಗಿರಿ | ಬ್ರಿಡ್ಜ್ ಎತ್ತರ ಹೆಚ್ಚಿಸುವಂತೆ ಆಗ್ರಹಿಸಿ ರೈತರ ಮನವಿ
ಈ ಕಾರ್ಯಕ್ರಮದಲ್ಲಿ ಸದ್ದಾಂ ವಜೀರಗಾಂವ, ಬುರಾನ ಪಟೇಲ್, ಶೇಖ್ ಅಹ್ಮದ್ ಪಟೇಲ್, ನವಾಜ್ ಮೌಜನ್, ಯಾಸೀನ್ ನಾಗೂರ, ಇಮಾಮ್ ಸಾಬ್, ಸಂಜೀವಕುಮಾರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ, ರಂಜಾನ್ ಹಬ್ಬದ ಸಂದರ್ಭದಲ್ಲಿ ನಡೆದ ಈ ಸೇವಾ ಕಾರ್ಯವು ಸಮಾಜದಲ್ಲಿ ಸಹಾನುಭೂತಿ, ಮಾನವೀಯತೆ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.





