‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ‘ಭೀಮ ಗಾಯನ’ ಕಾರ್ಯಕ್ರಮ ಹಮ್ಮಿಕೊಳ್ಳುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದರೂ, ಅಂಬೇಡ್ಕರ್ ಅವರು ಎರಡು ಬಾರಿ ಭೇಟಿ ನೀಡಿದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣವನ್ನು ಕಡೆಗಣಿಸಿ ಜಿಲ್ಲಾ ಕೇಂದ್ರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಇತಿಹಾಸ ತಿರುಚಿದಂತಾಗಿದೆ’ ಎಂದು ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ತೇಜಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಅಂಬೇಡ್ಕರ್ ಅವರು 1944ರ ಸೆಪ್ಟೆಂಬರ್ 20 ಮತ್ತು 1952ರ ಏಪ್ರಿಲ್ 27ರಂದು ವಾಡಿ ಪಟ್ಟಣಕ್ಕೆ ಎರಡು ಬಾರಿ ಐತಿಹಾಸಿಕ ಭೇಟಿ ನೀಡಿದ್ದರು. ಆದರೆ ಈ ಕುರಿತು ಅಧಿಕಾರಿಗಳಿಗೆ ಕನಿಷ್ಠ ಅರಿವು ಇಲ್ಲದಿರುವುದು ದುಃಖಕರ ಸಂಗತಿ. ಇದು ವಾಡಿ ಜನತೆಗೆ ಮಾಡಿದ ಅನ್ಯಾಯ ಮಾತ್ರವಲ್ಲ, ಅಂಬೇಡ್ಕರ್ ಅವರ ಭೇಟಿ ಇತಿಹಾಸವನ್ನು ತಿರುಚುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
‘ಅಂಬೇಡ್ಕರ್ ಅವರ ಭೇಟಿ ನೆನಪಿಗಾಗಿ ‘ಭೀಮ ಗಾಯನ’ ಕಾರ್ಯಕ್ರಮವನ್ನು ವಾಡಿ ಪಟ್ಟಣದಲ್ಲಿ ನಡೆಸಬೇಕಾಗಿತ್ತು. ಆದರೆ ಪಟ್ಟಣದ ಜನರಿಗೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮವನ್ನು ಬೇರೆಡೆ ನಡೆಸಲಾಗಿದೆ’ ಎಂದು ಅವರು ಆಕ್ಷೇಪಿಸಿದರು.
‘ಅಂಬೇಡ್ಕರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅಮೃತರಾವ ಕೋಮಟೆ ಅವರ ಪುತ್ರ ಹಾಗೂ ವಾಡಿ ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಅವರನ್ನು ಆಹ್ವಾನಿಸಿ ಕಾರ್ಯಕ್ರಮದಲ್ಲಿ ಮಾತನಾಡಿಸಬಹುದಾಗಿತ್ತು. ಆದರೆ ಅದಕ್ಕೂ ಅವಕಾಶ ನೀಡಿಲ್ಲ’ ಎಂದು ದೂರಿದರು.
‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸದೆ ಸಿದ್ಧತೆಗಳಿಲ್ಲದೆ ಕಾರ್ಯಕ್ರಮ ನಡೆಸಿದ್ದಾರೆ. ಅಂಬೇಡ್ಕರ್ ಅವರ ಜೀವನ ಮತ್ತು ಸಂಘರ್ಷದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶವೇ ಇಲ್ಲದಂತೆ ಕಾಣುತ್ತದೆ. ಸರ್ಕಾರದ ಆದೇಶದ ಹೆಸರಿನಲ್ಲಿ ಕಾಟಾಚಾರದ ಕಾರ್ಯಕ್ರಮ ನಡೆಸಲಾಗಿದೆ’ ಎಂದು ಆರೋಪಿಸಿದರು.
‘ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಡಾ. ಅಂಬೇಡ್ಕರ್ ಡಿಗ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರುಣ ಜೋಳದಕೂಡ್ಲಗಿ ಅವರು ವಾಡಿ ಪಟ್ಟಣಕ್ಕೆ ಅಂಬೇಡ್ಕರ್ ಭೇಟಿ ನೀಡಿದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಆದರೆ ಕಾರ್ಯಕ್ರಮದಲ್ಲಿದ್ದ ಹಲವಾರು ಅಧಿಕಾರಿಗಳಿಗೆ ಈ ಕುರಿತು ಕನಿಷ್ಠ ತಿಳುವಳಿಕೆ ಇಲ್ಲದಿರುವುದು ನೋವಿನ ಸಂಗತಿ’ ಎಂದು ತಿಳಿಸಿದರು.
ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಸದಸ್ಯರಾದ ಚಂದ್ರಶೇಖರ ಸೂರೆಪಲ್ಲಿ, ಪೆದ್ದೂರು ಮುನಿರಾಜು, ಮಂಜುನಾಥ ಸೀನಪ್ಪ, ಪದ್ಮಾ ಹಾಗೂ ಶಾಮಲಾ ಭೀಮ ಗೀತೆಗಳನ್ನು ಹಾಡಿದರು. ನಾಗೇಶ್ ಪ್ಯಾಡ್ ಮತ್ತು ತಮಟೆ ವಾದನ ಮೆಚ್ಚುಗೆಗೆ ಪಾತ್ರವಾಗಿದ್ದು, ಶಿವಶಂಕರ ಕೀಬೋರ್ಡ್ ವಾದನ ಗಮನ ಸೆಳೆದಿತು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ವಿದ್ಯಾರ್ಥಿನಿ ಆತ್ಮಹತ್ಯೆ: ವಸತಿ ನಿಲಯದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
‘ಇದೇ ವೇಳೆ ಇಲಾಖೆಯ ನಿರ್ಲಕ್ಷ್ಯದಿಂದ ಸ್ಥಳೀಯ ಕಲಾವಿದರಿಗೆ ಅನ್ಯಾಯವಾಗಿದೆ. ಸಿದ್ಧಾರ್ಥ ಚಿಮ್ನಾಯಿದಲಾಯಿ, ದಲಿತ ಕಲಾ ಮಂಡಳಿ ಸೇರಿದಂತೆ ಹಲವು ಕಲಾ ತಂಡಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಡೆಗಣಿಸಲಾಗಿದೆ’ ಎಂದು ಅವರು ಆರೋಪಿಸಿದರು.





